ವಾಷಿಂಗ್ಟನ್: ತಾಯಿ ಮತ್ತು ಸಹೋದರನನ್ನು ಕೊಲೆ (US murder case) ಮಾಡಿ ಭಾರತೀಯ ಮೂಲದ ಯುವಕನೊಬ್ಬ ಪರಾರಿಯಾಗಿರುವ ಘಟನೆ ಅಮೆರಿಕದ (America) ಮ್ಯಾಸಚೂಸೆಟ್ಸ್ ನಲ್ಲಿ ನಡೆದಿದೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸ್ಥಳೀಯ ಪ್ರೌಢಶಾಲಾ ಆಕ್ಟನ್-ಬಾಕ್ಸ್ಬರೋದ ವಿದ್ಯಾರ್ಥಿಯಾಗಿದ್ದ (Teenage Student arrest) ಅರ್ಜುನ್ ಅರವಿಂದ್ (17) ಮಂಗಳವಾರ ತನ್ನ ತಾಯಿ ಸುಧಾ ವೆಂಕಟೇಶನ್ (45) ಮತ್ತು ಸಹೋದರ ಸಿದ್ದಾರ್ಥ್ ಅರವಿಂದ್ (14) ಮೇಲೆ ಮನೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ತಾಯಿಯ ಸ್ಕೂಟರ್ ತೆಗೆದುಕೊಂಡು ಪರಾರಿಯಾಗಿದ್ದನು.
ಮ್ಯಾಸಚೂಸೆಟ್ಸ್ನಲ್ಲಿರುವ ಮನೆಯಲ್ಲಿ ತನ್ನ ತಾಯಿ ಮತ್ತು ಕಿರಿಯ ಸಹೋದರನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಅರ್ಜುನ್ ಅನ್ನು ಬುಧವಾರ ಮುಂಜಾನೆ ಬಂಧಿಸಲಾಗಿದೆ. ಆತನ ವಿರುದ್ಧ ಇಬ್ಬರ ಮೇಲೆ ಹಲ್ಲೆ, ಕೊಲೆ, ಬ್ಯಾಟರಿ ಕಳ್ಳತನ, ಅಧಿಕಾರವಿಲ್ಲದೆ ವಾಹನ ಬಳಕೆ ಮತ್ತು ಮೋಟಾರು ವಾಹನ ಕಳ್ಳತನ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಮಿಡಲ್ಸೆಕ್ಸ್ ಜಿಲ್ಲಾ ವಕೀಲ ಮರಿಯನ್ ರಯಾನ್ ಮತ್ತು ಆಕ್ಟನ್ ಪೊಲೀಸ್ ಮುಖ್ಯಸ್ಥ ಡೌಗ್ಲಾಸ್ ಸ್ಟರ್ನಿಯೊಲೊ, ಬೋಸ್ಟನ್ನಿಂದ ಸುಮಾರು 48 ಕಿ.ಮೀ ದೂರದಲ್ಲಿರುವ ಆಕ್ಟನ್ನಲ್ಲಿರುವ ಮಾರ್ಥಾ ಲೇನ್ನಲ್ಲಿರುವ ಭಾರತೀಯ ಮೂಲದ ಕುಟುಂಬ ವಾಸಿಸುತ್ತಿದ್ದ ಮನೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಆ ದಿನ ಸಂಜೆ 6.30ರ ವೇಳೆಗೆ ಮನೆಗೆ ಅಪಾಯಿಂಟ್ ಮೆಂಟ್ ಪಡೆದಿದ್ದ ಬೋಧಕರೊಬ್ಬರು ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಅವರು ಅರವಿಂದ್ ಅವರ ತಂದೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ಆಕ್ಟನ್ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ದೂರು ನೀಡಿದರು ಎಂದರು.
ಅರವಿಂದ್ ಅವರ ತಂದೆ ಕೆಲಸಕ್ಕೆ ಹೊರಡುವ ಮೊದಲು ಆ ದಿನ ಬೆಳಗ್ಗೆ ಕೊನೆಯ ಬಾರಿಗೆ ತನ್ನ ಹೆಂಡತಿಯನ್ನು ನೋಡಿದ್ದರು. ಅವರ ಕಿರಿಯ ಮಗ ಸಿದ್ಧಾರ್ಥ್ ನನ್ನು ಕೊನೆಯ ಬಾರಿಗೆ ಮಧ್ಯಾಹ್ನ ನೋಡಿದ್ದರು. ಅವರು ನೀಡಿದ ದೂರಿನ ಪ್ರಕಾರ ಮಿಡಲ್ಸೆಕ್ಸ್ ಜಿಲ್ಲಾ ವಕೀಲರು ಸ್ಥಳಕ್ಕೆ ಆಗಮಿಸಿದಾಗ ಸುಧಾ ವೆಂಕಟೇಶನ್ ಮತ್ತು ಸಿದ್ಧಾರ್ಥ್ ಮೃತಪಟ್ಟಿರುವುದು ಕಂಡುಬಂದಿದೆ. ಸುಧಾ ಅವರ ಮೃತದೇಹ ಮನೆಯ ನೆಲಮಾಳಿಗೆಯಲ್ಲಿ ಹಾಗೂ ಸಿದ್ಧಾರ್ಥ್ ಶವ ಮನೆಯ ಮೊದಲ ಮಹಡಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು.
ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯಕೀಯ ಪರೀಕ್ಷಕರು ಸಾವಿನ ನಿಖರವಾದ ಕಾರಣವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಹತ್ಯೆಗಳಲ್ಲಿ ಬಳಸಲಾದ ಆಯುಧದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.
ಅರ್ಜುನ್ ತಾಯಿಯ ಸ್ಕೂಟರ್ ತೆಗೆದುಕೊಂಡು ಪರಾರಿಯಾಗಿದ್ದರಿಂದ ಆರಂಭದಲ್ಲಿ ಆತನನ್ನು ಹುಡುಕುವುದು ಸಾಧ್ಯವಾಗಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದಾಗ ಬುಧವಾರ ಮುಂಜಾನೆ ಮ್ಯಾಸಚೂಸೆಟ್ಸ್ನ ವೇಲ್ಯಾಂಡ್ನ ಪೊಲೀಸರು ಪಾರ್ಕಿಂಗ್ ಸ್ಥಳದಲ್ಲಿ ಇದ್ದ ಅರ್ಜುನ್ ಅನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು.
ಚಿಂತಾಮಣಿ ಬಳಿ ಭೀಕರ ಅಪಘಾತ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಅರ್ಜುನ್ ಅರವಿಂದ್ ನನ್ನು ಬುಧವಾರ ಲೋವೆಲ್ ಬಾಲಾಪರಾಧಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆತನ ವಿರುದ್ಧ ಕೊಲೆ ಆರೋಪವಿರುವುದ್ದು, ಅದು ಬಾಲಾಪರಾಧಿ ನ್ಯಾಯಾಲಯ ವ್ಯಾಪ್ತಿಗೆ ಬಾರದೇ ಇರುವುದರಿಂದ ಬಳಿಕ ಆತನನ್ನು ಕಾನ್ಕಾರ್ಡ್ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.