Indore couple missing: ಮಗನನ್ನು ಬಲಿ ಪಡೆದ ಹಂತಕಿ ಸೊಸೆ ಸೋನಂ ಬಗ್ಗೆ ಅತ್ತೆ ಬಿಚ್ಚಿಟ್ಟ ʻಆ ಸತ್ಯʼ ಏನು?
ಕಳೆದ ಮೇ 23ರಂದು ಇಂದೋರ್ ಮೂಲದ ದಂಪತಿ ಮೇಘಾಲಯಲಕ್ಕೆ ಹನಿಮೂನ್ಗೆಂದು ಹೋಗಿ ನಿಗೂಢವಾಗಿ ಕಣ್ಮರೆಯಾಗಿದ್ದರು. ಈ ಹಿನ್ನಲೆ ಕುಟುಂಬಸ್ಥರ ದೂರಿನಾಧಾರದ ಮೇಲೆ ಪ್ರಕರಣದ ಬೆನ್ನತ್ತಿದ್ದ ಪೋಲಿಸರು ಕಾಣೆಯಾಗಿದ್ದ ರಾಜಾ ರಘುವಂಶಿಯವರ ಶವವನ್ನು ಪತ್ತೆ ಹಚ್ಚಿದ್ದರು. ನಂತರ ಸೋನಂಗಾಗಿ ಪೋಲಿಸರು ತಮ್ಮ ಕಾರ್ಯಚರಣೆ ಮುಂದುವರೆಸಿದ್ದರು. ಆದರೆ ಇದೀಗ ಪತಿ ರಾಜಾ ರಘುವಂಶಿ ಹತ್ಯೆಗೆ ಸೋನಂ ಸಂಚು ರೂಪಿಸಿರುವ ನಾಟಕ ಬಯಲಾಗಿದೆ.


ಶಿಲ್ಲಾಂಗ್: ಇಂದೋರ್ ಮೂಲದ ದಂಪತಿ ಹನಿಮೂನ್ಗೆಂದು ಮೇಘಾಲಯಕ್ಕೆ ಹೋಗಿ ನಿಗೂಢವಾಗಿ ಕಣ್ಮರೆಯಾಗಿತ್ತು. ಈ ಹಿನ್ನಲೆ ಕುಟುಂಬಸ್ಥರ ದೂರಿನಾಧಾರದ ಮೇಲೆ ಪ್ರಕರಣದ ಬೆನ್ನತ್ತಿದ್ದ ಪೋಲಿಸರು ಕಾಣೆಯಾಗಿದ್ದ ರಾಜಾ ರಘುವಂಶಿಯವರ ಶವವನ್ನು ಪತ್ತೆ ಹಚ್ಚಿದ್ದರು. ಇದಾದ ಬಳಿಕ ಪತ್ನಿ ಸೋನಮ್ಗಾಗಿ ಪೋಲಿಸರು ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಿದ್ದರು. ಆದರೆ ಇದೀಗ ಪ್ರಕರಣ ಮತ್ತೊಂದು ಬಿಗ್ ಟ್ವಿಸ್ಟ್ ಪಡೆದಿದ್ದು, ಪತಿ ರಾಜಾ ರಘುವಂಶಿಯನ್ನು ಪತ್ನಿ ಸೋನಂ ಹತ್ಯೆ ಮಾಡಿಸಲು ಸಂಚು ಹೂಡಿರುವ ರಹಸ್ಯ ಹೊರಬಿದ್ದಿದೆ. ಇದೀಗ ಮಗನನ್ನು ಕಳೆದುಕೊಂಡ ರಾಜಾ ರಘುವಂಶಿ ತಾಯಿ ಸೊಸೆಯ ಬಗ್ಗೆ ಶಾಕಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.
ಈ ಹಿನ್ನಲೆ ಮಗನ ಹತ್ಯೆಯಿಂದ ದುಃಖಿತರಾಗಿರುವ ರಾಜಾ ರಘುವಂಶಿಯ ತಾಯಿ ಉಮಾ ರಘುವಂಶಿ, ತಮ್ಮ ಸೊಸೆ ಸೋನಮ್ ವಿರುದ್ಧದ ಆರೋಪ ಕೇಳಿ ಆಘಾತ ವ್ಯಕ್ತಪಡಿಸಿದ್ದಾರೆ. ಸೋನಂ ನಮ್ಮೊಂದಿಗೆ ತುಂಬಾ ಒಳ್ಳೆಯವಳಂತೆ ನಾಟಕವಾಡಿದ್ದಳು. ಅವಳು ಈ ರೀತಿಯ ಕೃತ್ಯ ಎಸಗಬಹುದು ಎಂದು ನಾವು ಊಹೆ ಕೂಡ ಮಾಡಿರಲಿಲ್ಲ. ನಾನು ಅವಳನ್ನು ನನ್ನ ಮಗಳಂತೆ ನೋಡಿಕೊಂಡಿದ್ದೆ, ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ನನ್ನ ಮಗನ ಹತ್ಯೆಗೆ ಕಾರಣವಾಗಿರುವವರನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸಬೇಕು. ಒಂದು ವೇಳೆ ಸೋನಂ ಈ ಕೆಲಸದಲ್ಲಿ ಭಾಗಿಯಾಗಿದ್ದರೆ, ಅವಳನ್ನೂ ಶಿಕ್ಷೆಗೆ ಗುರಿಪಡಿಸಬೇಕು ಎಂದಿದ್ದಾರೆ.
ಮಗಳು ಅಮಾಯಕಿ ಎಂದ ಸೋನಂ ತಂದೆ
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸೋನಂ ತಂದೆ ದೇವಿ ಸಿಂಗ್ ನನ್ನ ಮಗಳು ನಿರಪರಾಧಿ ಎಂದಿದ್ದು, ನನ್ನ ಮಗಳು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ಅವಳು ಮತ್ತು ರಾಜಾ ಕುಟುಂಬದ ಒಪ್ಪಿಗೆಯಿಂದಲೇ ಮದುವೆಯಾಗಿದ್ದರು. ಪೊಲೀಸರ ಆರೋಪಗಳು ಸುಳ್ಳು ಎಂದಿದ್ದಾರೆ. ಸೋನಂ ಗಾಜಿಪುರದ ರಸ್ತೆಯ ಪಕ್ಕದ ಒಂದು ಢಾಬಾದಲ್ಲಿ ಅಳುತ್ತಾ ಫೋನ್ ಮಾಡಿ ತಾನು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಳು. ಮೇಘಾಲಯ ಪೊಲೀಸರು ನನ್ನ ಮಗಳ ವಿರುದ್ದ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇನ್ನು ದೇವಿ ಸಿಂಗ್ ಗೃಹ ಸಚಿವ ಅಮಿತ್ ಶಾಗೆ ಮನವಿ ಸಲ್ಲಿಸಿ, ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆ (CBI)ಗೆ ವಹಿಸಲು ಮನವಿ ಮಡಿದ್ದಾರೆ.
ಈ ಸುದ್ದಿಯನ್ನೂ ಓದಿ: Indore Couple Missing: ಮೇಘಾಲಯ ಮಿಸ್ಸಿಂಗ್ ಕೇಸ್; ಟೂರ್ ಗೈಡ್ ಕೊಟ್ಟ ಆ ಸುಳಿವಿನಿಂದ ಬಯಲಾಯ್ತು ಘೋರ ಕೃತ್ಯ!
ಸೋನಂ ಬಂಧನ
ಗಾಜಿಪುರದಲ್ಲಿ ಸೋನಂ ರಘುವಂಶಿಯನ್ನು ಖಾಕಿ ಪಡೆ ಬಂಧಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮೆಘಾಲಯದ ಪೊಲೀಸ್ ಅಧಿಕಾರಿ, ಹನಿಮೂನ್ ವೇಳೆ ಸೋನಮ್ ಅವಳ ಸಹಚರರಿಂದ ಸಹಾಯ ಪಡೆದು ಪತಿಯನ್ನು ಹತ್ಯೆ ಮಾಡಿಸಿದ್ದಾಳೆ ಎಂದಿದ್ದಾರೆ. ಸೋನಂ ಉತ್ತರ ಪ್ರದೇಶದ ನಂದಗಂಜ್ ಪೊಲೀಸ್ ಠಾಣೆಗೆ ಶರಣಾಗಿ, ನಂತರ ಬಂಧನಕ್ಕೊಳಗಾಗಿದ್ದಾಳೆ ಎಂದು ಡಿಜಿಪಿ ತಿಳಿಸಿದ್ದಾರೆ. ವಿಶೇಷ ತನಿಖಾ ತಂಡ (SIT) ನಡೆಸಿದ ಕಾರ್ಯಚರಣೆಯಲ್ಲಿ ಒಬ್ಬನನ್ನು ಉತ್ತರ ಪ್ರದೇಶದಲ್ಲಿ ಹಾಗೂ ಇಬ್ಬರನ್ನು ಇಂದೋರ್ನಲ್ಲಿ ಸೆರೆ ಹಿಡಿಯಲಾಗಿದೆ. ಮತ್ತಷ್ಟು ವಿಚಾರಣೆ ಬಳಿಕ ಈ ಹತ್ಯೆಯ ಹಿಂದೆ ಇರುವ ಉದ್ದೇಶ ಮತ್ತು ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.