ಮಣಿಪುರ: ರಾಷ್ಟ್ರಪತಿ ಆಳ್ವಿಕೆ (President's rule) ಅವಧಿ ಕೊನೆಯಾದ ಕಾರಣ ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರ (Manipur violence) ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು, ಇದಕ್ಕೆ ಮೂವರು ಕುಕಿ-ಝೋ (Kuki-Zo) ಶಾಸಕರು ಬೆಂಬಲ ನೀಡಿರುವುದನ್ನು ವಿರೋಧಿಸಿ ಗುರುವಾರ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಪ್ರತಿಭಟನಾಕಾರರು ವಾಹನವೊಂದಕ್ಕೆ ಹಾನಿ ಮಾಡಿದ್ದಾರೆ. ಮಣಿಪುರದ ಚುರಾಚಂದ್ಪುರ ಜಿಲ್ಲೆಯಲ್ಲಿ 24 ಗಂಟೆಗಳ ಬಂದ್ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಮಣಿಪುರ ರಾಜಧಾನಿ ಇಂಫಾಲ್ನಿಂದ ಮಿಜೋರಾಂನ ಐಜ್ವಾಲ್ಗೆ ಚುರಾಚಂದ್ಪುರ ಮೂಲಕ ಸಂಪರ್ಕಿಸುವ ಹೆದ್ದಾರಿ ತಡೆ ನಡೆಸಲಾಗಿದೆ. ಈ ವೇಳೆ ಪ್ರತಿಭಟನಾಕಾರರು ವಾಹನವೊಂದಕ್ಕೆ ಹಾನಿ ಮಾಡಿದ್ದು, ಇದು ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಯಿತು.
ಉಪಮುಖ್ಯಮಂತ್ರಿ ನೆಮ್ಚಾ ಕಿಪ್ಗೆನ್ ಸೇರಿದಂತೆ ಮೂವರನ್ನು ಸಾಮಾಜಿಕ ಬಹಿಷ್ಕಾರ ಮಾಡುವುದಾಗಿ ಘೋಷಿಸಿರುವ ಕುಕಿ-ಝೋ ಸಮುದಾಯಗಳ ಸರ್ವೋಚ್ಚ ಸಂಸ್ಥೆಯಾದ ಕುಕಿ ಝೋ ಕೌನ್ಸಿಲ್ ಬಂದ್ಗೆ ಬೆಂಬಲ ನೀಡಿದೆ. ನೆಮ್ಚಾ ಕಿಪ್ಗೆನ್ ಸೇರಿದಂತೆ ಮೂವರು ಪ್ರತ್ಯೇಕ ಆಡಳಿತದ ಬೇಡಿಕೆಯನ್ನು ಪರಿಹರಿಸದೆ ಹೊಸ ಸರ್ಕಾರಕ್ಕೆ ತಮ್ಮ ಬೆಂಬಲ ನೀಡಿದ್ದಾರೆ ಎಂದು ಕುಕಿ ಝೋ ಕೌನ್ಸಿಲ್ ಆರೋಪಿಸಿದೆ.
ಪ್ರತಿಭಟನೆ ಸಂದರ್ಭದಲ್ಲಿ ಹೆದ್ದಾರಿ ತಡೆ, ಅಂಗಡಿ, ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ತುರ್ತು ವಾಹನ ಸಂಚಾರ ಮತ್ತು ಅಗತ್ಯ ಸೇವೆಗಳನ್ನು ಮಾತ್ರ ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಹೊಸ ಸರ್ಕಾರವನ್ನು ಬೆಂಬಲಿಸಿದ ಕಿಪ್ಗೆನ್ ಮತ್ತು ಇತರ ಇಬ್ಬರು ಶಾಸಕರಾದ ಲಲ್ಲಿಯಾಂಗ್ ಮಾಂಗ್ ಖೌಟೆ ಮತ್ತು ನ್ಗುರ್ಸಂಗ್ಲೂರ್ ಸನಾಟೆ ಅವರ ನಿವಾಸಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಸಂದರ್ಭದಲ್ಲಿ ಮಾನವ ಹಕ್ಕುಗಳಿಗಾಗಿ ಕುಕಿ ಮಹಿಳಾ ಸಂಘಟನೆಯು ರಾಲಿಯನ್ನು ನಡೆಸಿತ್ತು.
ಕುಕಿ ವಿದ್ಯಾರ್ಥಿಗಳ ಸಂಘಟನೆಯು ಕುಕಿ-ಝೋ ಸಮುದಾಯಕ್ಕೆ ಮೂವರು ಶಾಸಕರು ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ್ದು, ಹೊಸ ಸರ್ಕಾರಕ್ಕೆ ಸೇರಲು ನಿರಾಕರಿಸಿದ ಸಮುದಾಯದ ಉಳಿದ ಏಳು ಶಾಸಕರನ್ನು ಶ್ಲಾಘಿಸಿದೆ.
''ಅಕ್ರಮ ನುಸುಳುಕೋರರ ಪರ ಕೋರ್ಟ್ಗೆ ಹಾಜರಾಗುತ್ತೀರಿ'': ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಮಣಿಪುರದಲ್ಲಿ 2023 ರ ಮೇ ತಿಂಗಳಲ್ಲಿ ಉಂಟಾದ ಜನಾಂಗೀಯ ಹಿಂಸಾಚಾರದಲ್ಲಿ ಸುಮಾರು 260 ಮಂದಿ ಸಾವನ್ನಪ್ಪಿದ್ದು, 60,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಬಳಿಕ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಇದೀಗ ರಾಷ್ಟ್ರಪತಿ ಆಳ್ವಿಕೆ ಅವಧಿ ಕೊನೆಯಾಗಿದ್ದು, ಮೈತೈ ಸಮುದಾಯದ ಮಾಜಿ ಸ್ಪೀಕರ್ ಯುಮ್ನಾಮ್ ಖೇಮ್ಚಂದ್ ಸಿಂಗ್ ಅವರು ಬುಧವಾರ ಮಣಿಪುರ ಮುಖ್ಯಮಂತ್ರಿಯಾಗಿ ಹಾಗೂ ಕುಕಿ-ಝೋ ಮತ್ತು ನಾಗಾ ಸಮುದಾಯಗಳ ಇಬ್ಬರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಕಿಪ್ಗೆನ್ ಪ್ರಮಾಣ ವಚನ ಸ್ವೀಕರಿಸಿದರು.