ಕೋಲ್ಕತಾ, ಜು. 8: ಪಶ್ಚಿಮ ಬಂಗಾಳದ (West Bengal) ರಾಜಧಾನಿ ಕೋಲ್ಕತಾದ ಬರೂಯಿಪುರ ಉಪನಗರದಲ್ಲಿ 11 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆಯಿಂದ ಉದ್ರಿಕ್ತಗೊಂಡ ಜನಸಮೂಹ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆ ಮಾಡಿದೆ. ಇಂದ್ರಜಿತ್ ಮಂಡಲ್ ಕೊಲೆಯಾದ ದುರ್ದೈವಿ. ಆದರೆ ಆತ ನಿರಪರಾಧಿ ಎಂದು ಎನ್ನುವುದು ಬಳಿಕ ತಿಳಿದು ಬಂದಿದೆ (Crime News). ಆತ ಅಪರಾಧಿಯಲ್ಲ ಎಂದು ಪೊಲೀಸರೂ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಮಾಡದ ತಪ್ಪಿಗೆ ವ್ಯಕ್ತಿಯೊಬ್ಬ ಬಲಿಯಾದಂತಾಗಿದೆ.
“ಗುಂಪು ಹತ್ಯೆಯಲ್ಲಿ ಕೊಲ್ಲಲ್ಪಟ್ಟ ಯುವಕ ಇಂದ್ರಜಿತ್ ಮಂಡಲ್ ನಿರಪರಾಧಿ. ಪೊಲೀಸರು ನನಗೆ ಹೇಳಿದ್ದು ಇದನ್ನೇ. ಇವು ನನ್ನ ಮಾತುಗಳಲ್ಲ. ಮಂಡಲ್ ಸಾವಿಗೆ ನ್ಯಾಯ ಸಿಗುತ್ತದೆ. ನಾನು ಅವನ ಕುಟುಂಬ ಸದಸ್ಯರನ್ನೂ ಭೇಟಿ ಮಾಡಿದ್ದೇನೆ” ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಮಂಡಲ್ ಅವರ ಮೇಲೆ ಹಲ್ಲೆ ನಡೆಸಿದವರು ಕೊಲೆ ಆರೋಪ ಎದುರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಗೂಂಡಾಗಿರಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸುವೇಂದು ಅಧಿಕಾರಿ ಹೇಳಿದರು.
ಪ್ರತಿಭಟನೆಯ ಸಮಯದಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಮುಖ್ಯಮಂತ್ರಿ ಭೇಟಿಯಾಗಿ, ಅಗತ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದರು. ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ. ಅವರಲ್ಲಿ ಮೂವರು, ಪ್ರವಾಸ್ ಮಂಡಲ್, ಆನಂದ ಸರ್ದಾರ್ ಮತ್ತು ದಿಬಾಕರ್ ಸರ್ದಾರ್ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಮಂಗಳವಾರ (ಜುಲೈ 7) ರಾತ್ರಿ ಪೊಲೀಸ್ ಅಧಿಕಾರಿಯೊಬ್ಬರ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಾಗ ಪ್ರವಾಸ್ ಮಂಡಲ್ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ನಾಲ್ಕನೇ ಶಂಕಿತ ಕಬೀರ್ ಮೊಲ್ಲಾನನ್ನು ಮಂಗಳವಾರ ಬಂಧಿಸಲಾಯಿತು ಎಂದು ಹೇಳಿದ್ದಾರೆ.
ಬಂಗಾಳದ 11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಎನ್ಕೌಂಟರ್ನಲ್ಲಿ ಆರೋಪಿ ಹತ್ಯೆ
ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯು ಲೈಂಗಿಕ ದೌರ್ಜನ್ಯವನ್ನು ದೃಢಪಡಿಸಿದೆ. ತಲೆಗೆ ತೀವ್ರವಾದ ಗಾಯ, ಖಾಸಗಿ ಭಾಗಗಳಿಗೆ ಗಾಯಗಳು ಮತ್ತು ದೇಹದಾದ್ಯಂತ ಕಚ್ಚುವಿಕೆ ಮತ್ತು ಗೀರು ಗುರುತುಗಳನ್ನು ಸಹ ಇದು ಬಹಿರಂಗಪಡಿಸಿದೆ. ಭಾನುವಾರ (ಜು. 5) ಆಕೆಯ ಶವ ಪತ್ತೆಯಾದ ನಂತರ ದಕ್ಷಿಣ ಉಪನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಉದ್ರಿಕ್ತಗೊಂಡ ನೂರಾರು ಸ್ಥಳೀಯರು ರೈಲ್ವೆ ಹಳಿಗಳು ಮತ್ತು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದರು.
20 ಜನರ ಬಂಧನ
ಇಂತಹ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ. ಬಂಧಿತರು ಇಂದ್ರಜಿತ್ ಮಂಡಲ್ ಅವರ ಗುಂಪು ಹತ್ಯೆಯಲ್ಲೂ ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸ್ ತನಿಖೆಯಲ್ಲಿ ಬಾಲಕಿಯ ಕುಟುಂಬ ತೃಪ್ತರಾಗಿದ್ದು, 72 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕ ಸಿದ್ಧನಾಥ್ ಗುಪ್ತಾ ಅವರಿಗೆ ಆದೇಶಿಸಿರುವುದಾಗಿ ಸುವೇಂದು ಅಧಿಕಾರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ದುಷ್ಕರ್ಮಿಗಳು ಆಕೆಯನ್ನು ಕೊಳಕ್ಕೆ ಎಸೆದಿದ್ದರು. ಬಾಲಕಿಯ ಶವ ಪತ್ತೆಯಾದ ಬಳಿಕ ಸ್ಥಳೀಯರು ಆಕ್ರೋಶಗೊಂಡಿದ್ದರು. ಇದು ಭಾರಿ ಪ್ರತಿಭಟನೆಗೂ ಕಾರಣವಾಯಿತು.
ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಶ್ವಾಸಕೋಶ ಮತ್ತು ಹೊಟ್ಟೆಯಲ್ಲಿ ನೀರು ಇರುವುದು ಕಂಡುಬಂದಿದ್ದು, ಆಕೆಯನ್ನು ಕೊಳಕ್ಕೆ ಎಸೆದಾಗ ಆಕೆ ಇನ್ನೂ ಜೀವಂತವಾಗಿದ್ದಾಳೆ ಎಂಬುದನ್ನು ಸೂಚಿಸಿದೆ. ತಲೆಗೆ ಪೆಟ್ಟಾಗಿ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರಿಂದ ಉಂಟಾದ ಅತಿಯಾದ ರಕ್ತಸ್ರಾವ ಆಕೆಯ ಸಾವಿಗೆ ಕಾರಣ ಎಂದು ಪೊಲೀಸ್ ಮೂಲಗಳು ಹೇಳಿವೆ.