ಮಂಗಳೂರು: ರಸ್ತೆ ಅಪಘಾತದಂತೆ ಬಿಂಬಿಸಿರುವ ಕೊಲೆ ಪ್ರಕರಣದಲ್ಲಿ (Murder case) ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು (life imprisonment) ವಿಧಿಸಲಾಗಿದೆ. ಮಂಗಳೂರಿನಲ್ಲಿ 2014ರಲ್ಲಿ ನಡೆದಿರುವ ಕೊಲೆ ಪ್ರಕರಣಕ್ಕೆ (Mangaluru crime) ಸಂಬಂಧಿಸಿ ಅಪರಾಧಿಗಳಾದ ಸತೀಶ್ ಬೈಕಂಪಾಡಿ (57), ಹರೀಶ್ ಬೈಕಂಪಾಡಿ (61), ಭಾಸ್ಕರ್ ಬೈಕಂಪಾಡಿ (63) ಮತ್ತು ಪುಷ್ಪರಾಜ್ (47) ಎಂಬವರಿಗೆ ಮಂಗಳೂರಿನ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. 2014ರ ಮೇ 15ರಂದು ನಡೆದ ಗಂಗಾಧರ ಪಾಂಗಳ ಎಂಬವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ನಾಲ್ವರನ್ನು ಅಪರಾಧಿಗಳೆಂದು ಗುರುತಿಸಲಾಗಿತ್ತು.
2014ರ ಮೇ 15ರಂದು ಗಂಗಾಧರ ಪಾಂಗಳ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ತನಿಖೆ ವೇಳೆ ಇದು ಅಪಘಾತವಲ್ಲ. ವೈಯಕ್ತಿಕ ದ್ವೇಷದಿಂದ ಪ್ರೇರಿತವಾದ ಯೋಜಿತ ಕೊಲೆ ಎಂಬುದು ಬಂದಿದೆ.
ಸಿಜೆಪಿ ಪ್ರತಿಭಟನೆ ವೇಳೆ ಸುಳ್ಳು ಪ್ರಚಾರ ಬಯಲು: 500ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕ್ರಮ
ಸುಮಾರು 12 ವರ್ಷಗಳ ಕಾಲ ತನಿಖೆಯಲ್ಲಿದ್ದ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಸತೀಶ್ ಬೈಕಂಪಾಡಿ ಎಂಬಾತನನ್ನು ಗುರುತಿಸಲಾಗಿದ್ದು, ಹರೀಶ್ ಬೈಕಂಪಾಡಿ, ಭಾಸ್ಕರ್ ಬೈಕಂಪಾಡಿ ಮತ್ತು ಪುಷ್ಪರಾಜ್ ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದರು. ಕೊಲೆ ಮಾಡಿ ಅಪರಾಧವನ್ನು ಮರೆಮಾಚಿದ್ದಕ್ಕಾಗಿ ಮಂಗಳೂರಿನ ನ್ಯಾಯಾಲಯವು ಈ ನಾಲ್ವರು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಗಂಗಾಧರ ಪಾಂಗಳ ಅವರು 2014ರ ಮೇ 15ರಂದು ಸ್ಕೂಟರ್ನಲ್ಲಿ ಬರುತ್ತಿದ್ದ ವೇಳೆ ಆರೋಪಿಗಳು ತಮ್ಮ ಕಾರನ್ನು ಡಿಕ್ಕಿ ಹೊಡೆಸಿದ್ದಾರೆ. ಬಳಿಕ ಇದು ಅಪಘಾತವೆಂಬಂತೆ ಬಿಂಬಿಸಿದ್ದಾರೆ. ಗಂಗಾಧರ ಪಾಂಗಳ ಅವರಿಗೆ ಮಾರಣಾಂತಿಕ ಗಾಯವಾಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಮಂಗಳೂರು ಮತ್ತು ಸುತ್ತಮುತ್ತಲಿನ ಮೀನುಗಾರ ಸಮುದಾಯದ ಮೊಗವೀರ ಮಹಾಸಭಾದಿಂದತನ್ನನ್ನು ಅಮಾನತುಗೊಳಿಸಿದ್ದಕ್ಕಾಗಿ ಸತೀಶ್ ಬೈಕಂಪಾಡಿ ಇತರ ಆರೋಪಿಗಳೊಂದಿಗೆ ಸೇರಿ ಗಂಗಾಧರ ಪಾಂಗಳ ಅವರನ್ನು ಕೊಲ್ಲುವ ಸಂಚು ರೂಪಿಸಿದ್ದಾನೆ. ತನಿಖೆಯ ವೇಳೆ ಇದು ಪೂರ್ವ ಯೋಜಿತ ಕೊಲೆ ಎಂಬುದನ್ನು ತೀರ್ಮಾನಿಸಲಾಗಿದೆ.
ಈ ಕುರಿತು ವಿಚಾರಣೆ ನಡೆಸಿದ ಮಂಗಳೂರು ನ್ಯಾಯಾಲಯವು ಸತೀಶ್ ಬೈಕಂಪಾಡಿ, ಹರೀಶ್ ಬೈಕಂಪಾಡಿ, ಭಾಸ್ಕರ್ ಬೈಕಂಪಾಡಿ ಮತ್ತು ಪುಷ್ಪರಾಜ್ ಅವರನ್ನು ಕೊಲೆ ಮತ್ತು ಕ್ರಿಮಿನಲ್ ಪಿತೂರಿಯ ಆರೋಪದಲ್ಲಿ ದೋಷಿಗಳೆಂದು ತೀರ್ಮಾನಿಸಿ ಸೋಮವಾರ ನಾಲ್ವರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ಅವರಿಗೆ ತಲಾ 15,000 ರೂ. ದಂಡ ವಿಧಿಸಲಾಗಿದ್ದು, ದಂಡ ಪಾವತಿ ಮಾಡದಿದ್ದರೆ ಹೆಚ್ಚುವರಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಪರಾಧಿಗಗಳಿಗೆ ಎರಡು ವರ್ಷಗಳ ಸರಳ ಜೈಲು ಶಿಕ್ಷೆ ಮತ್ತು ಸಾಕ್ಷ್ಯ ನಾಶಕ್ಕಾಗಿ ತಲಾ 1,000 ರೂ. ದಂಡ ವಿಧಿಸಿಸಲಾಗಿದೆ. ಸಂಗ್ರಹವಾದ ಒಟ್ಟು ದಂಡದ ಮೊತ್ತ 66,000 ರೂ. ಗಳಲ್ಲಿ 50,000 ರೂ. ಗಳನ್ನು ಗಂಗಾಧರ ಪಂಗಾಲ ಅವರ ಮಗಳಿಗೆ ಪರಿಹಾರವಾಗಿ ಪಾವತಿಸಲು ಮತ್ತು ಉಳಿದ ಮೊತ್ತವನ್ನು ಸರ್ಕಾರಕ್ಕೆ ಠೇವಣಿ ಇಡಲು ನ್ಯಾಯಾಲಯ ಆದೇಶಿಸಿದೆ. ಇದರೊಂದಿಗೆ ಅಪರಾಧಕ್ಕೆ ಬಳಸಿರುವ ವಾಹನಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಲಾಗಿದೆ.