ಚಂಡೀಗಢ, ಮೇ 27: ಡೇರಾ ಸಚ್ಚಾ ಸೌದಾ (Dera Sacha Sauda) ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ (Gurmeet Ram Rahim Singh) ಮಂಗಳವಾರ ರೋಹ್ಟಕ್ (Rohtak)ನ ಸುನಾರಿಯಾ ಜೈಲಿ (Sunaria Jail)ನಿಂದ ಹೊರಬಂದಿದ್ದಾರೆ. ಅವರಿಗೆ 30 ದಿನಗಳ ಪರೋಲ್ (parole) ಮಂಜೂರಾಗಿದ್ದು, 2017ರಲ್ಲಿ ಅತ್ಯಾಚಾರ ಪ್ರಕರಣ (rape case)ದಲ್ಲಿ ದೋಷಿ ಎಂದು ಸಾಬೀತಾದ ನಂತರ ಅವರು ಜೈಲಿನಿಂದ ತಾತ್ಕಾಲಿಕವಾಗಿ ಬಿಡುಗಡೆಯಾಗುತ್ತಿರುವುದು ಇದು 16ನೇ ಬಾರಿಯಾಗಿದೆ.
ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್, ಈ ಪರೋಲ್ ಅವಧಿಯಲ್ಲಿ ಸಿರ್ಸಾದಲ್ಲಿರುವ ಡೇರಾ ಪ್ರಧಾನ ಕಚೇರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಮ್ ರಹೀಮ್ ಪರ ವಕೀಲ ಜಿತೇಂದ್ರ ಖುರಾನಾ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು, ರಾಜ್ಯದ ಸಕ್ಷಮ ಪ್ರಾಧಿಕಾರವು 30 ದಿನಗಳ ಪರೋಲ್ ನೀಡಿದೆ ಎಂದು ತಿಳಿಸಿದ್ದಾರೆ. ಈ ವಿಷಯವು ಸಂಪೂರ್ಣವಾಗಿ ಜೈಲು ಅಧಿಕಾರಿಗಳು ಹಾಗೂ ಕಾರಾಗೃಹ ಆಡಳಿತದ ವ್ಯಾಪ್ತಿಗೆ ಬರುತ್ತದೆ ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ರಾಮ್ ರಹೀಮ್ ಅವರ ಈ ಇತ್ತೀಚಿನ ಬಿಡುಗಡೆಯು ಈ ವರ್ಷದ ಜನವರಿಯಲ್ಲಿ ಪಡೆದಿದ್ದ ಪರೋಲ್ನ ಕೆಲವೇ ತಿಂಗಳುಗಳ ನಂತರ ಬಂದಿದೆ. ಅದಕ್ಕೂ ಮುನ್ನ ಅವರು ಆಗಸ್ಟ್ 2025 ರಲ್ಲಿ 40 ದಿನಗಳ ಪರೋಲ್, ಏಪ್ರಿಲ್ 2025 ರಲ್ಲಿ 21 ದಿನಗಳ ಫರ್ಲೋ ಮತ್ತು ಜನವರಿ 2025 ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 30 ದಿನಗಳ ಪರೋಲ್ ಪಡೆದುಕೊಂಡಿದ್ದರು. ಹರಿಯಾಣದ ಸಿರ್ಸಾ, ಫತೇಹಾಬಾದ್, ಕುರುಕ್ಷೇತ್ರ, ಕೈತಾಲ್ ಮತ್ತು ಹಿಸಾರ್ ಸೇರಿದಂತೆ ಪಂಜಾಬ್ ಹಾಗೂ ರಾಜಸ್ಥಾನಗಳಲ್ಲಿ ಡೇರಾ ಸಚ್ಚಾ ಸೌದಾ ದೊಡ್ಡ ಮಟ್ಟದ ಮತ ಬ್ಯಾಂಕ್ ಮತ್ತು ಅನುಯಾಯಿಗಳನ್ನು ಹೊಂದಿದೆ. ಚುನಾವಣಾ ಸಮಯದಲ್ಲೇ ಇವರಿಗೆ ಪದೇ ಪದೇ ರಿಯಾಯಿತಿ ಸಿಗುತ್ತಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಹಲವು ರಾಜಕೀಯ ಅನುಮಾನಗಳಿಗೆ ಕಾರಣವಾಗಿದೆ.
ಡ್ರೋನ್, ಹೆಲಿಕಾಪ್ಟರ್ ಬಳಸಿ ಮೂವರು ಭಯೋತ್ಪಾದಕರಿಗಾಗಿ ರಾಜೌರಿಯಲ್ಲಿ ತೀವ್ರ ಶೋಧ
ರಾಮ್ ರಹೀಮ್ಗೆ ಪದೇ ಪದೇ ಪರೋಲ್ ನೀಡುತ್ತಿರುವುದು ಪಂಜಾಬ್ನಲ್ಲಿ ತೀವ್ರ ರಾಜಕೀಯ ಆಕ್ರೋಶ ಮತ್ತು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಶಿರೋಮಣಿ ಅಕಾಲಿದಳ ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ನಾಯಕರು ನ್ಯಾಯಾಂಗ ವ್ಯವಸ್ಥೆಯಲ್ಲಿ ಸರ್ಕಾರ "ದ್ವಿಮುಖ ನೀತಿ" ಅನುಸರಿಸುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ರಾಜಕೀಯ ಲಾಭದ ಕಾರಣಗಳಿಗಾಗಿ ಜೈಲಿನಲ್ಲಿರುವ ಡೇರಾ ಮುಖ್ಯಸ್ಥನಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದ್ದು, ಇದು ಕಾನೂನಿನ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ನುಚ್ಚುನೂರು ಮಾಡುತ್ತದೆ ಎಂದು ಪಂಜಾಬ್ ಮಾಜಿ ಸಚಿವ ವಿಕ್ರಮ್ ಸಿಂಗ್ ಮಜಿಥಿಯಾ ಕಟುವಾಗಿ ಟೀಕಿಸಿದ್ದಾರೆ. ಗಂಭೀರ ಅಪರಾಧಿಗಳಿಗೆ ಪದೇ ಪದೇ ಪರಿಹಾರ ಸಿಗುತ್ತಿದೆ, ಆದರೆ ಸಿಖ್ ಕೈದಿಗಳು ಇನ್ನೂ ಜೈಲಿನಲ್ಲೇ ಇದ್ದಾರೆ ಎಂದು ಎಸ್ಜಿಪಿಸಿ ಸದಸ್ಯ ಭಗವಂತ್ ಸಿಂಗ್ ಸಿಯಾಲ್ಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.