ಪಾಟ್ನಾ, ಮೇ 18: ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ರಕ್ತ ಸಂಬಂಧವನ್ನೇ ಸಂಪೂರ್ಣವಾಗಿ ಮರೆತ ತಮ್ಮನೊಬ್ಬ ಅಣ್ಣ, ಅತ್ತಿಗೆ ಹಾಗೂ ಅವರ ಇಬ್ಬರು ಮುಗ್ಧ ಮಕ್ಕಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಶವಗಳನ್ನು ಹತ್ತಾರು ತುಂಡುಗಳಾಗಿ ಕತ್ತರಿಸಿ ಸೂಟ್ಕೇಸ್ ಮತ್ತು ಗೋಣಿಚೀಲಗಳಲ್ಲಿ ತುಂಬಿ ನದಿ ಹಾಗೂ ಕಾಲುವೆಗೆ ಎಸೆದಿರುವ ಅತ್ಯಂತ ಆಘಾತಕಾರಿ ಮತ್ತು ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ 10ರಂದು ನದಿಯ ತಳದಲ್ಲಿ ಪತ್ತೆಯಾದ ಎರಡು ರಹಸ್ಯ ಸೂಟ್ಕೇಸ್ಗಳಲ್ಲಿ ಅಪರಿಚಿತ ಮಾನವ ದೇಹದ ಭಾಗಗಳು ಸಿಕ್ಕಾಗ ಈ ಭಯಾನಕ ಕೃತ್ಯದ ಮೊದಲ ಸುಳಿವು ಪೊಲೀಸರಿಗೆ ಸಿಕ್ಕಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರಿಗೆ ಮೇ 12ರಂದು ರಾಮಗಢದ ಅಭೇದೆ ಗ್ರಾಮದ ಬಳಿಯ ಕಾಲುವೆಯಲ್ಲಿ ಇನ್ನೂ ಎರಡು ಚೀಲಗಳಲ್ಲಿ ತುಂಬಿದ್ದ ದೇಹದ ಉಳಿದ ಪ್ರಮುಖ ಭಾಗಗಳು ಪತ್ತೆಯಾದವು. ಮೃತರನ್ನು ದಹರಕ್ ಗ್ರಾಮದ ನಿವಾಸಿ ಕೃಷ್ಣ ಮುರಾರಿ ಗುಪ್ತ, ಅವರ ಪತ್ನಿ ದುರ್ಗೇಶ್ ಕುಮಾರಿ ಮತ್ತು ಅವರ ಇಬ್ಬರು ಅಪ್ರಾಪ್ತ ಮಕ್ಕಳು ಎಂದು ಗುರುತಿಸಲಾಗಿದೆ. ಪೊಲೀಸರು ಅವರ ಮನೆಗೆ ತನಿಖೆಗೆ ಹೋದಾಗ ಇಡೀ ಮನೆಗೆ ಬೀಗ ಹಾಕಿರುವುದು ಕಂಡುಬಂತು.
ಕೈಮೂರ್ ಪೊಲೀಸ್ ವರಿಷ್ಠಾಧಿಕಾರಿಗಳು ಈ ರಕ್ತಸಿಕ್ತ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದರು. ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಕೃಷ್ಣ ಮುರಾರಿ ಅವರ ಕಿರಿಯ ಸಹೋದರ ವಿಕಾಸ್ ಗುಪ್ತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಆತ ತನ್ನ ಕ್ರೌರ್ಯದ ಕಥೆಯನ್ನು ಒಪ್ಪಿಕೊಂಡಿದ್ದಾನೆ. ದೀರ್ಘಕಾಲದ ಕೌಟುಂಬಿಕ ಭಿನ್ನಾಭಿಪ್ರಾಯ ಹಾಗೂ ಹಣಕಾಸಿನ ವಿವಾದಗಳ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ವಿಕಾಸ್ ಗುಪ್ತ ಮತ್ತು ಆತನ ಗೆಳೆಯರು ಈ ಕೃತ್ಯ ಎಸಗಿದ್ದಾರೆ.
ಮೇ 7ರಂದು ಷೇರು ಮಾರುಕಟ್ಟೆ ಹೂಡಿಕೆಯ ಬಗ್ಗೆ ಚರ್ಚಿಸುವ ನೆಪದಲ್ಲಿ ಅಣ್ಣನನ್ನು ಕೊಠಡಿಗೆ ಕರೆದು ಚಾಕುವಿನಿಂದ ಇರಿದು ಕೊಂದಿದ್ದಾರೆ. ಗಲಾಟೆ ಕೇಳಿ ಓಡಿ ಬಂದ ಅತ್ತಿಗೆ ಮತ್ತು ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಬಂದ ಇಬ್ಬರು ಮುಗ್ಧ ಮಕ್ಕಳನ್ನೂ ಸಹ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಜೀವಂತವಾಗಿ ಬಿಡದೆ ಹತ್ಯೆ ಮಾಡಿದ್ದಾರೆ. ನಂತರ ಶವಗಳನ್ನು ತುಂಡರಿಸಿ, ಸ್ಕೂಟರ್ ಮೂಲಕ ನದಿಗೆ ಎಸೆದಿದ್ದಾರೆ. ಕೊಠಡಿಯ ರಕ್ತದ ಕಲೆಗಳನ್ನು ಸಿಮೆಂಟ್ ಹಾಕಿ ಮುಚ್ಚಲು ಯತ್ನಿಸಿದ್ದರೂ ಫೋರೆನ್ಸಿಕ್ ತಂಡಕ್ಕೆ ಗಂಭೀರ ಸಾಕ್ಷ್ಯಗಳು ಲಭ್ಯವಾಗಿವೆ. ಪೊಲೀಸರು ಕೊಲೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.