ಪುಣೆ: ಉದ್ಯಮಿ ಹತ್ಯೆ ಕೇಸ್ಗೆ (Ketan Murder Case) ಸಂಬಂಧಿಸಿದಂಗೆ ಎಸ್ಐಟಿ ಹಲವು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿ ಸಿಯಾ ಹಾಗೂ ಚೇತನ್ನನ್ನು ವಿಚಾರಣೆಗೆ ಒಳಪಡಿಸಿದೆ. ಕೊಲೆ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದ್ದು, ಸಿಯಾ ಗೋಯಲ್ (Siya) ಕೇತನ್ನನ್ನು ಕೊಲೆ ಮಾಡಲು ಕಾರಣ ಊಹಿಸಲಾಗಿದೆ. ಮೂಲಗಳ ಪ್ರಕಾರ, ಸಿಯಾಳ ಪ್ರಿಯಕರ ಚೇತನ್ ಚೌಧರಿ ತನ್ನ ವೃತ್ತಿಜೀವನದಲ್ಲಿ ನೆಲೆಗೊಳ್ಳಲು ಬಯಸಿದ್ದರಿಂದ ಮದುವೆಯಾಗಲು ಕನಿಷ್ಠ ಮೂರು ವರ್ಷಗಳಾದರೂ ಕಾಯುವಂತೆ ಕೇಳಿಕೊಂಡಿದ್ದ. ಆದರೆ ಕೇತನ್ ಜೊತೆ ಸಿಯಾಳ ಮದುವೆ ಈಗಾಗಲೇ ನಿಗದಿಯಾಗಿತ್ತು ಮತ್ತು ನವೆಂಬರ್ನಲ್ಲಿ ನಿಗದಿಯಾಗಿತ್ತು.
ಕೇತನ್ನನ್ನು ಕೊಂದರೆ ಶೋಕದಿಂದಾಗಿ ಮುಂದಿನ ಕೆಲವು ವರ್ಷಗಳ ಕಾಲ ಸಿಯಾಳ ಮದುವೆಯ ಬಗ್ಗೆ ಚರ್ಚೆ ನಡೆಯದೇ ಇರಬಹುದು ಮತ್ತು ಅವಳಿಗೆ ಸ್ವತಂತ್ರವಾಗಿ ಬದುಕುವ ಅವಕಾಶ ಸಿಗುತ್ತಿದ್ದರೂ, ಚೇತನ್ ತನ್ನ ವೃತ್ತಿಜೀವನದತ್ತ ಗಮನ ಹರಿಸುತ್ತಿದ್ದ. ಆಗ ಸಿಯಾ ಮತ್ತು ಚೇತನ್ ಪರಸ್ಪರ ಮದುವೆಯಾಗಲು ಸಮಸ್ಯೆ ಇರಲಿಲ್ಲ ಎಂದು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಈ ವರ್ಷದ ಫೆಬ್ರವರಿಯಿಂದಲೇ ಸಿಯಾ ಮತ್ತು ಚೇತನ್ ಕೇತನ್ ಹತ್ಯೆಗೆ ಸಂಚು ರೂಪಿಸಲು ಪ್ರಾರಂಭಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ನೇಹಿತರೊಬ್ಬರು ಆಯೋಜಿಸಿದ್ದ ಪಾರ್ಟಿಯಲ್ಲಿ ಸಿಯಾ ಮತ್ತು ಚೇತನ್ ಮತ್ತೆ ಭೇಟಿಯಾಗಿದ್ದರು. ಈ ಭೇಟಿಯ ನಂತರ ಇಬ್ಬರ ನಡುವಿನ ಸಂಪರ್ಕ ಹೆಚ್ಚಾಯಿತು ಎನ್ನಲಾಗಿದೆ. ಪೊಲೀಸರು ಆರೋಪಿಗಳ ಕಾಲ್ ಡಿಟೇಲ್ ರೆಕಾರ್ಡ್ಸ್ ಪರಿಶೀಲಿಸಿದಾಗ ಆಘಾತಕಾರಿ ಸತ್ಯಾಂಶಗಳು ಹೊರಬಂದಿವೆ. ಜನವರಿ ತಿಂಗಳಿನಿಂದ ಈ ಇಬ್ಬರ ನಡುವೆ ಬರೋಬ್ಬರಿ 2,004 ಬಾರಿ ಫೋನ್ ಕರೆಗಳು ವಿನಿಮಯವಾಗಿವೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಆರೋಪಿಗಳಿಬ್ಬರೂ ತಮ್ಮ ಮೊಬೈಲ್ ಫೋನ್ಗಳಿಂದ ವಾಟ್ಸಾಪ್ ಚಾಟ್ಗಳು, ಇನ್ಸ್ಟಾಗ್ರಾಮ್ ಸಂಭಾಷಣೆಗಳು ಸೇರಿದಂತೆ ಇಡೀ ಆನ್ಲೈನ್ ಚಟುವಟಿಕೆಯ ಹಿಸ್ಟರಿಯನ್ನು ಡಿಲೀಟ್ ಮಾಡಿರುವುದು ಪತ್ತೆಯಾಗಿದೆ. ಲೋಹಗಢದಲ್ಲಿ ಘಟನೆ ನಡೆಯುವ ಮುನ್ನ ಮತ್ತು ನಂತರದ ಚಾಟ್ಗಳನ್ನು ಉದ್ದೇಶಪೂರ್ವಕವಾಗಿಯೇ ಅಳಿಸಿಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳು ಕೇವಲ ಮೆಸೇಜ್ ಡಿಲೀಟ್ ಮಾಡದೆ, ರಿಸೈಕಲ್ ಬಿನ್ ಹಾಗೂ ಇತರೆ ಡಿಜಿಟಲ್ ಗುರುತುಗಳನ್ನೂ ಅಳಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಸಂಭಾಷಣೆಯ ಟೈಮ್ಲೈನ್ ತಿಳಿಯಲು ಫೋನ್ಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಲಾಗಿದೆ.