ಲಖನೌ, ಮಾ. 28: ನರರೂಪದ ರಾಕ್ಷಸರು, ಕ್ರೂರಿಗಳ ವರ್ತನೆ ಹೇಗಿರುತ್ತದೆ ಎನ್ನುವುದನ್ನು ಸಿನಿಮಾಗಳಲ್ಲಿ ನೋಡಿ ಬೆಚ್ಚಿ ಬಿದ್ದಿದ್ದೇವೆ. ಇದೀಗ ಸಿನಿಮಾದ ಕ್ರೂರತ್ವವನ್ನೂ ಮೀರಿಸುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇದನ್ನು ತಿಳಿದರೆ ಒಂದು ಕ್ಷಣ ನೀವು ಸ್ತಬ್ಧರಾಗುವುದು ಖಚಿತ (Uttar Pradesh Horror). ಮಧ್ಯ ವಯಸ್ಕನೊಬ್ಬ 25 ವರ್ಷದ ವ್ಯಕ್ತಿಯನ್ನು ಕೊಲೆಗೈದು ರುಂಡವನ್ನು ಮನೆಗೊಯ್ದು ಏನೂ ನಡೆದೇ ಇಲ್ಲದಂತೆ ಅಡುಗೆ ಮಾಡಿದ್ದಾನೆ (Crime News). ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಈ ವೀಭತ್ಸ ಘಟನೆ ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ.
25 ವರ್ಷದ ಐಸ್ಕ್ರೀಂ ಮಾರಾಟಗಾರನ ಕೊರಳು ಕೊಯ್ದ ಮಧ್ಯ ವಯಸ್ಕ ರುಂಡವನ್ನು ತನ್ನ ಮನೆಗೆ ಕೊಂಡೊಯ್ದಿದ್ದಾನೆ. ಮಾತ್ರವಲ್ಲ ಈ ಬಗ್ಗೆ ಯಾವುದೇ ಪ್ರಾಯಶ್ಚಿತವೂ ಇಲ್ಲದೆ, ಏನೂ ನಡೆದೇ ಇಲ್ಲವೆನ್ನುವಂತೆ ವರ್ತಿಸಿದ್ದಾನೆ.
ಘಟನೆ ವಿವರ
ಬಾರಬಂಕಿ ಜಿಲ್ಲೆಯ ಪರ್ಸಾವಲ್ನಲ್ಲಿ ಶನಿವಾರ (ಮಾರ್ಚ್ 28) ಕೊಲೆಗೀಡಾದ ವ್ಯಕ್ತಿಯನ್ನು ಬಬ್ಲು ಎಂದು ಗುರುತಿಸಲಾಗಿದೆ. ಈತ ಗ್ರಾಮದಲ್ಲಿ ಐಸ್ಕ್ರೀಂ ಮಾರಾಟ ಮಾಡುತ್ತಿದ್ದ. 50 ವರ್ಷದ ಶಂಕರ್ ಯಾದವ್ ಆತನನ್ನು ಕೊಲೆಗೈದ ಪಾಪಿ. ಶನಿವಾರ ಬಬ್ಲುವಿನ ಗ್ರಹಚಾರ ಕೆಟ್ಟಿತ್ತು. ಎಂದಿನಂತೆ ಐಸ್ಕ್ರೀಂ ಮಾರಾಟ ಮಾಡುತ್ತಿದ್ದಾಗ ಸ್ಥಳೀಯ ವ್ಯಕ್ತಿ ಶಂಕರ್ ಯಾದವ್ ಜತೆ ವಾಗ್ದಾದ ನಡೆದಿತ್ತು. ಮುಂದೆ ನಡೆದಿದ್ದೇ ಭಯಾನಕ ಬೆಳವಣಿಗೆ.
ಸಾರ್ವಜನಿಕರು ನೋಡ ನೋಡುತ್ತಿದ್ಧಂತೆ ಜಗಳ ತಾರಕಕ್ಕೇರಿತು. ಬಳಿಕ ಶಂಕರ್ ಯಾದವ್ ಬಬ್ಲುವನ್ನು ಗಟ್ಟಿಯಾಗಿ ಹಿಡಿದು ಆತನ ಗಂಟಲು ಸೀಳಿದ. ಅಲ್ಲದೆ ಕುತ್ತಿಗೆಯನ್ನು ಕಡಿದು ಬಬ್ಲುವಿನ ರುಂಡವನ್ನು ಹಿಡಿದುಕೊಂಡು ಮನೆಗೆ ತೆರಳಿದ. ರುಂಡವನ್ನು ಒಂದು ಬದಿಗೆ ಇಟ್ಟು ಏನೂ ಆಗೇ ಇಲ್ಲ ಎನ್ನುವಂತೆ ಅಡುಗೆ ಮಾಡತೊಡಗಿದ. ಪೊಲೀಸರು ಆಗಮಿಸುವ ವೇಳೆಗೆ ಅಡುಗೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಅಬ್ಬಾ... ಎಂಥಾ ಘೋರ ಘಟನೆ! ಸಲಿಂಗ ಪ್ರೇಮಕ್ಕೆ 5ತಿಂಗಳ ಮಗುವನ್ನೇ ಕೊಂದ ಪಾಪಿ ತಾಯಿ
ಭಾರಿ ಭದ್ರತೆಯೊಂದಿಗೆ ದಾಳಿ
ವಿಷಯ ತಿಳಿದ ಪೊಲೀಸರು ಭಾರಿ ಭದ್ರತೆಯೊಂದಿಗೆ ಶಂಕರ್ ಯಾದವ್ ಮನೆಗೆ ದಾಳಿ ನಡೆಸಿದರು. ಎಸ್ಪಿ ಅರ್ಪಿತ್ ವಿಜಯವರ್ಗೀಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮನೆ ಒಳಗೆ ನುಗ್ಗಿದ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬೀಳಿಸುವ ದೃಶೈ ಕಂಡುಬಂತು. ʼʼಬಬ್ಲು ರುಂಡ ಮೂಲೆಯಲ್ಲಿ ಬಿದ್ದಿದ್ದರೆ ಶಂಕರ್ ಯಾದವ್ ಅಡುಗೆ ಮಾಡುವುದರಲ್ಲಿ ನಿರತನಾಗಿದ್ದʼʼ ಎಂದು ಪೊಲೀಸರೊಬ್ಬರು ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಆತನನ್ನು ಬಂಧಿಸಿದ್ದಾರೆ. ಜತೆಗೆ ಕೃತ್ಯಕ್ಕೆ ಬಳಸಿದ ಆಯುಧ ವಶಪಡಿಸಿಕೊಳ್ಳಲಾಗಿದೆ.
ಬಬ್ಲು ಕುಟುಂಬದ ಹಿನ್ನೆಲೆ
ಬಡ ಕುಟುಂಬ ಹಿನ್ನೆಲೆಯ ಬಬ್ಲು ಮೂವರು ಮಕ್ಕಳ ಪೈಕಿ ಹಿರಿಯವ. ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಗ್ರಾಮದಲ್ಲಿ ಐಸ್ಕ್ರೀಂ ಮಾರಾಟ ಮಾಡುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಬಬ್ಲು ಮತ್ತು ಶಂಕರ್ ಯಾದವ್ ಮಧ್ಯೆ ಯಾವ ಕಾರಣಕ್ಕೆ ಜಗಳ ಆರಂಭವಾಯಿತು ಎನ್ನುವ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಂಕರ್ ಯಾದವ್ನ ಮಾನಸಿಕ ಆರೋಗ್ಯದ ಬಗ್ಗೆಯೂ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.