ಚಿಂತಾಮಣಿ: ಸರಿಯಾಗಿ ನೀರು ಬಿಡದ ವಿಚಾರವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡು, ಯುವಕರು ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿರುವ ಘಟನೆ ಚಿಂತಾಮಣಿ ತಾಲೂಕಿನ ಮುಂಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ ಗ್ರಾಮದ ವಾಟರ್ಮ್ಯಾನ್ ನಾಗಮ್ಮ ಎಂಬುವವರು ಸರಿಯಾಗಿ ನೀರು ಬಿಡುತ್ತಿರಲಿಲ್ಲ ಎನ್ನಲಾಗಿದೆ.ಈ ವಿಚಾರವಾಗಿ ಗಾಯಾಳು ಪ್ರಭಾಕರ್ ಅವರ ಅಣ್ಣ ಸುಧಾಕರ್ ಅವರು ಪಿ.ಡಿ.ಓ ಅವರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪಿ.ಡಿ.ಓ ಅವರು ಗ್ರಾಮಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಿದ್ದರು. ಆದರೆ ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟು ಕೊಂಡ ಎದುರುದಾರರು ಜಗಳಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ರಾತ್ರಿ ಸುಮಾರು 8.30ರ ವೇಳೆಗೆ ಸುಧಾಕರ್ ಅವರು ಮನೆಗೆ ಹೋಗುತ್ತಿದ್ದ ರಸ್ತೆಯಲ್ಲಿ ಗ್ರಾಮದ ದಿಲೀಪ್ ಬಿನ್ ಲೇಟ್ ಕೋನಪ್ಪ,ಅರುಣ್ ಬಿನ್ ಲೇಟ್ ಕೋನಪ್ಪ ಹಾಗೂ ನಾಗಮ್ಮ ಕೋಂ ಲೇಟ್ ಕೋನಪ್ಪ ಎಂಬುವವರು ಗಲಾಟೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಸುಧಾಕರ್ ಅವರ ಸಹೋದರರಾದ ಪ್ರಭಾಕರ್ ಹಾಗೂ ಅಶೋಕ್ ಅವರು ಯಾಕೆ ವಿನಾಕಾರಣ ನಮ್ಮ ಅಣ್ಣನ ಮೇಲೆ ಗಲಾಟೆ ಮಾಡುತ್ತಿದ್ದೀರಿ?ಎಂದು ಕೇಳಿದ್ದಾರೆ.
ಈ ವೇಳೆ ದಿಲೀಪ್ ಮತ್ತು ಅರುಣ್ ಅವರು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
ಸದ್ಯ ಹಲ್ಲೆ ಹಾಗೂ ಬೆದರಿಕೆ ಹಾಕಿದ ದಿಲೀಪ್, ಅರುಣ್ ಕುಮಾರ್ ಮತ್ತು ನಾಗಮ್ಮ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾ ಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.