ಚಿಂತಾಮಣಿ: ನಗರದ ಸಿವಿಲ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಯುವಕನೊಬ್ಬನನ್ನು ಬಲವಂತ ವಾಗಿ ದ್ವಿಚಕ್ರ ವಾಹನದಲ್ಲಿ ಅಪಹರಿಸಿಕೊಂಡು ಹೋಗಿ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಗ್ರಾಮದ ನಿವಾಸಿ, ಖಾಸಗಿ ಕಂಪನಿ ಉದ್ಯೋಗಿಯಾದ ಹೇಮಂತ್ ಕುಮಾರ್(೨೭)ಎಂಬುವವರೇ ಈ ಕೃತ್ಯಕ್ಕೆ ಒಳಗಾದ ದುರ್ದೈವಿ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ.14ರಂದು ಮಧ್ಯಾಹ್ನ ಸುಮಾರು೧:೩೦ರ ವೇಳೆಗೆ ಹೇಮಂತ್ ಕುಮಾರ್ ಅವರು ಚಿಂತಾಮಣಿ ಯ ಸಿವಿಲ್ ಬಸ್ ನಿಲ್ದಾಣದ ಬಳಿ ಇರುವ ಗುರು ಭವನದ ಮುಂಭಾಗ ರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನೀನು ನಮ್ಮ ತಮ್ಮನಿಗೆ ಚಾಕುವಿನಿಂದ ಇರಿದು 24000 ರೂ. ಕಿತ್ತುಕೊಂಡಿದ್ದೀಯಾ, ನಿನ್ನ ಫೋಟೋ ನಮ್ಮ ಬಳಿ ಇದೆ" ಎಂದು ಸುಳ್ಳು ಆರೋಪ ಹೊರಿಸಿದ್ದಾರೆ.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಹೇಮಂತ್ ಅವರು ನನಗೆ ನೀವ್ಯಾರೋ ಗೊತ್ತಿಲ್ಲ ಎಂದಾಗ ಆರೋಪಿಗಳು ಚಾಕು ಹೊರತೆಗೆದು ಹೊಟ್ಟೆಗೆ ಇಟ್ಟು,ಕೊಲೆ ಮಾಡುವುದಾಗಿ ಹೆದರಿಸಿ ಬಲವಂತವಾಗಿ ತಮ್ಮ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ.
ಬಲಿಪಶು ಹೇಮಂತ್ನನ್ನು ಚೇಳುರು ರಸ್ತೆಯ ರೈಲ್ವೇ ಗೇಟ್ ದಾಟಿದ ಬಳಿಕ ಇರುವ ಒಂದು ನಿರ್ಜನ ಪ್ರದೇಶದ ಇಟ್ಟಿಗೆ ಫ್ಯಾಕ್ಟರಿಯೊಳಗೆ ಕರೆದೊಯ್ಯಲಾಗಿದೆ. ಅಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಮತ್ತಿಬ್ಬರು ಸೇರಿದಂತೆ ಒಟ್ಟು ಆರು ಜನ ದುಷ್ಕರ್ಮಿಗಳು ಸೇರಿಕೊಂಡು ಹೇಮಂತ್ ಅವರ ಕತ್ತಿನ ಮೇಲೆ ಮಚ್ಚು ಇಟ್ಟು, 5000 ರೂಪಾಯಿ ನೀಡುವಂತೆ ಪೀಡಿಸಿದ್ದಾರೆ. ಹಣ ಇಲ್ಲ ವೆಂದಾಗ ಕೈಗಳಿಂದ ಮತ್ತು ಕಾಲಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ದುಷ್ಕರ್ಮಿಗಳ ಮಚ್ಚು ಹಾಗೂ ಚಾಕುವಿನ ಬೆದರಿಕೆಗೆ ಹೆದರಿದ ಹೇಮಂತ್,ತಕ್ಷಣವೇ ತಮ್ಮ ತಮ್ಮನಾದ ನಂದಕುಮಾರ್ ಡಿ.ಎಂ.ಅವರಿಗೆ ಕರೆ ಮಾಡಿದ್ದಾರೆ. ಆರೋಪಿಗಳು ನೀಡಿದ ಮೊಬೈಲ್ ಸಂಖ್ಯೆಗೆ ತಮ್ಮನ ಮುಖಾಂತರ 5000 ರೂ.ಗಳನ್ನು ಫೋನ್ ಪೇ ಮಾಡಿಸಿದ್ದಾರೆ. ಹಣ ವರ್ಗಾವಣೆ ಯಾದ ಬಳಿಕ ಹೇಮಂತ್ ಅವರ ಮೊಬೈಲ್ ಫೋನನ್ನು ದೂರಕ್ಕೆ ಎಸೆದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ನಗರ ಠಾಣೆಯ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಚಿಂತಾಮಣಿ ನಗರದ ಹೂರವಲಯದ ಕರಿಯಪಲ್ಲಿ ಮೂಲದ ೨೨ ವರ್ಷದ ಬನ್ನಿ,ಮತ್ತೊಬ್ಬ ಚಿಂತಾಮಣಿ ನಗರದ 21 ವರ್ಷದ ವಿಶ್ವನಾಥ್ ಈ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಂಧಿತರು ಈ ಹಿಂದೆಯೂ ಸಹ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ಗೊತ್ತಾಗಿದೆ.