ನವದೆಹಲಿ, ಜೂ. 15: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸುಮಾರು 18,000 ಭಾರತೀಯ ನಾವಿಕರು (Indian Sailors) ಗಲ್ಫ್ ಪ್ರದೇಶದಾದ್ಯಂತ ನಿಯೋಜಿಸಲ್ಪಟ್ಟಿದ್ದಾರೆ. ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ ಅವರ ಸುರಕ್ಷತೆ ಮತ್ತು ವ್ಯಾಪಾರಿ ಹಡಗುಗಳ ಚಲನೆಯನ್ನು ಭಾರತ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಸ್ತುತ ಭದ್ರತಾ ಕಳವಳಗಳ ನಡುವೆಯೂ ಭಾರತೀಯ ಧ್ವಜ ಹೊಂದಿರುವ 10 ಹಡಗುಗಳು ಹಾಗೂ ವಿದೇಶಿ ಧ್ವಜ ಹೊಂದಿರುವ 5 ಹಡಗುಗಳು ಯಶಸ್ವಿಯಾಗಿ ಹೊರ್ಮುಜ್ ಜಲಸಂಧಿಯನ್ನು ದಾಟಿವೆ ಎಂದು ಹಡಗು ಸಾಗಣೆ ಸಚಿವಾಲಯದ ವಕ್ತಾರ ಓಪೇಶ್ ಶರ್ಮಾ ತಿಳಿಸಿದ್ದಾರೆ.
ಕಳೆದ ವಾರ ಗಲ್ಫ್ ಪ್ರದೇಶದಲ್ಲಿ ಭಾರತೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ಹಲವು ಹಡಗುಗಳ ಮೇಲೆ ನಡೆದ ದಾಳಿಗಳಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಹೇಳಿಕೆಯನ್ನು ನೀಡಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ಹಡಗು ದಿಶಾ 62,370 ಟನ್ ದ್ರವೀಕೃತ ನೈಸರ್ಗಿಕ ಅನಿಲವನ್ನು (LNG) ಹೊತ್ತು ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. ಅದು ಜೂನ್ 18ರಂದು ಭಾರತವನ್ನು ತಲುಪುವ ನಿರೀಕ್ಷೆಯಿದೆ. ದೇಶಕ್ಕೆ ಇಂಧನ ಪೂರೈಕೆ ನಿರಂತರವಾಗಿ ಸಾಗಲು ಇದು ನೆರವಾಗಲಿದೆ ಎಂದು ಹೇಳಲಾಗಿದೆ.
ಹೊರ್ಮುಜ್ ಜಲಸಂಧಿಯ ಪಶ್ಚಿಮಕ್ಕೆ ಕಾರ್ಯನಿರ್ವಹಿಸುತ್ತಿರುವ ಹಡಗುಗಳಲ್ಲಿ 325 ಭಾರತೀಯ ನಾವಿಕರು ಉಳಿದಿದ್ದಾರೆ. 200ಕ್ಕೂ ಹೆಚ್ಚು ಜನರು ಓಮನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಸಂಪರ್ಕ ಮತ್ತು ನಿಗಾ ವಹಿಸುತ್ತಿದ್ದಾರೆ.
ಹೊರ್ಮುಜ್ ಜಲಸಂಧಿ ಸ್ಥಗಿತಗೊಂಡರೂ ಮುಂದುವರಿದ ಭಾರತೀಯ ಹಡಗುಗಳ ಸಂಚಾರ: ಇದು ಹೇಗೆ?
ಈ ಪ್ರದೇಶದ ಭಾರತೀಯ ಸಿಬ್ಬಂದಿ ಮತ್ತು ಹಡಗು ನಿರ್ವಾಹಕರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಹಡಗು ಸಚಿವಾಲಯ ತಿಳಿಸಿದೆ. ಜೂನ್ 12–13ರ ರಾತ್ರಿ ಹೊರ್ಮುಜ್ ಜಲಸಂಧಿಯನ್ನು ದಾಟುತ್ತಿದ್ದ ವೇಳೆ ಹಾಂಗ್ಕಾಂಗ್ ಧ್ವಜ ಹೊಂದಿದ್ದ ತೈಲ ಮತ್ತು ರಾಸಾಯನಿಕ ಟ್ಯಾಂಕರ್ 'ಬೋಕೆಮ್ ಮರೇಂಗೊ' ಮೇಲೆ ಮಾನವರಹಿತ ಡ್ರೋನ್ ದಾಳಿ ನಡೆದಿರುವ ವರದಿಗಳನ್ನು ಸಚಿವಾಲಯ ದೃಢಪಡಿಸಿದೆ. ದಾಳಿಯ ಹೊರತಾಗಿಯೂ ಟ್ಯಾಂಕರ್ನಲ್ಲಿ 21 ಭಾರತೀಯ ಸಿಬ್ಬಂದಿ ಇದ್ದರು. ಅವರೆಲ್ಲರೂ ಸುರಕ್ಷಿತವಾಗಿದ್ದರು.
ಈ ಮಧ್ಯೆ ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾದ ತಮ್ಮ 107 ದಿನಗಳ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ಒಪ್ಪಂದವನ್ನು ಅಂತಿಮಗೊಳಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದನ್ನು ಇರಾನ್ ದೃಢಪಡಿಸಿದೆ. ಜೂನ್ 19ರಂದು ಸ್ವಿಟ್ಜರ್ಲೆಂಡ್ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಮತ್ತು ಇರಾನಿನ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವನ್ನು ಕೊನೆಗೊಳಿಸುವ ನಿರೀಕ್ಷೆಯಿದೆ.