ಪೇಶಾವರ, ಏ.3: ಪಾಕಿಸ್ತಾನದ (Pakistan) ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ಗುರುವಾರ (ಏ.2) ತಡರಾತ್ರಿ ಆತ್ಮಾಹುತಿ ಕಾರು ಬಾಂಬ್ ದಾಳಿ (suicide car bomb blast) ನಡೆಸಲಾಗಿದೆ. ಈ ದಾಳಿಯಲ್ಲಿ ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಹತ್ತಿರದಲ್ಲಿರುವ ಹಲವಾರು ಮನೆಗಳು ಹಾನಿಗೊಳಗಾಗಿದ್ದು, ಕನಿಷ್ಠ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬನ್ನು ಜಿಲ್ಲೆಯ ಡೊಮೆಲ್ ತಹಸಿಲ್ನಲ್ಲಿ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಪೊಲೀಸ್ ಠಾಣೆಗೆ ಡಿಕ್ಕಿ ಹೊಡೆಸಿದ ಪರಿಣಾಮ ಈ ಸ್ಫೋಟ ಸಂಭವಿಸಿದೆ. ಇದರಿಂದ ಪ್ರಬಲವಾದ ಸ್ಫೋಟದ ಶಬ್ಧವು ಪ್ರದೇಶದಾದ್ಯಂತ ಕೇಳಿಬಂತು.
ಏಕಾಏಕಿ ಸ್ಫೋಟದ ಶಬ್ಧ ಕೇಳಿ ನಿವಾಸಿಗಳು ಭೀತಿಗೊಂಡರು. ಘಟನೆಯ ನಂತರ ತಕ್ಷಣವೇ ಗುಂಡಿನ ಚಕಮಕಿ ನಡೆದಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದವು. ಪೊಲೀಸ್ ಠಾಣೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಮೂವರು ಮಹಿಳೆಯರು ಮತ್ತು ಒಂದು ಮಗುವಿನ ಮೃತದೇಹ ಸೇರಿದಂತೆ ಐದು ಶವಗಳನ್ನು ಅವಶೇಷಗಳಿಂದ ಹೊರತೆಗೆದವು. ತುರ್ತು ಪ್ರತಿಕ್ರಿಯೆ ತಂಡಗಳಿಂದ ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದೆ.
ಪಾಕಿಸ್ತಾನ ಇನ್ನೂ ಭಯೋತ್ಪಾದಕರಿಗೆ ಸುರಕ್ಷಿತ ತಾಣ: ಅಮೆರಿಕ ವರದಿ
ಕಳೆದ ತಿಂಗಳು, ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ (CRS) ವರದಿಯೊಂದು, ಭಾರತವನ್ನು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವನ್ನು (UT) ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಭಯೋತ್ಪಾದಕರಿಗೆ ಇಸ್ಲಾಮಾಬಾದ್ ಸುರಕ್ಷಿತ ತಾಣವಾಗಿ ಉಳಿದಿದೆ ಎಂದು ಹೇಳಿತ್ತು.
ಮಾರ್ಚ್ 25, 2026ರ ಈ ವರದಿಯಲ್ಲಿ, ಪಾಕಿಸ್ತಾನ ಮತ್ತು ಅದರ ಸೇನೆಯು ಭಯೋತ್ಪಾದಕ ಗುಂಪುಗಳ ವಿರುದ್ಧ ಅಸಮಾನವಾಗಿ ವರ್ತಿಸಿವೆ. ದೇಶದಲ್ಲಿ ಕೆಲವು ಭಯೋತ್ಪಾದಕ ಗುಂಪುಗಳು ಮತ್ತು ವ್ಯಕ್ತಿಗಳು ಬಹಿರಂಗವಾಗಿ ಕಾರ್ಯನಿರ್ವಹಿಸುವುದನ್ನು ತಡೆಯಲು ಹಾಗೂ ಕ್ರಮ ಕೈಗೊಳ್ಳುವಲ್ಲಿ ಅಲ್ಲಿನ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಹೇಳಿದೆ.
ವರದಿಯ ಪ್ರಕಾರ, ಲಷ್ಕರ್-ಎ-ತೈಬಾ ಮತ್ತು ಜೈಶ್-ಇ-ಮೊಹಮ್ಮದ್ ಸಂಘಟನೆಗಳು ಪಾಕಿಸ್ತಾನದಿಂದಲೇ ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಯಾವುದೇ ಸಶಸ್ತ್ರ ಆತಂಕವಾದಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು ಎಂದು ಇಸ್ಲಾಮಾಬಾದ್ನ ರಾಷ್ಟ್ರೀಯ ಕ್ರಿಯಾ ಯೋಜನೆ ಹೇಳಿದ್ದರೂ, ಈ ಸಂಘಟನೆಗಳು ಇನ್ನೂ ಚಟುವಟಿಕೆ ನಡೆಸುತ್ತಿವೆ ಎಂದು ವರದಿ ಹೇಳಿದೆ.
1980 ರ ದಶಕದ ಉತ್ತರಾರ್ಧದಲ್ಲಿ ಮರ್ಕಜ್ ಉದ್ ದಾವಾ ಉಲ್-ಇರ್ಷಾದ್ನ ಭಯೋತ್ಪಾದಕ ವಿಭಾಗವಾಗಿ ರೂಪುಗೊಂಡ ಎಲ್ಇಟಿ, 1993 ರಿಂದಲೂ ಭಾರತದ ವಿರುದ್ಧ ದಾಳಿಗಳನ್ನು ನಡೆಸುತ್ತಾ ಬಂದಿದೆ. ಈ ಗುಂಪು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿಯೂ ದಾಳಿಗಳನ್ನು ನಡೆಸಿದೆ ಎಂದು ವರದಿ ಹೇಳಿದ್ದು, ಜಮಾತ್-ಉದ್-ದಾವಾದ ಮಾಧ್ಯಮಗಳ ಮೂಲಕ ತನ್ನ ಸಂದೇಶವನ್ನು ಹರಡುತ್ತದೆ ಎಂದು ವರದಿ ಹೇಳಿದೆ.