ಆಮ್ಸ್ಟರ್ಡ್ಯಾಮ್, ಮೇ 16: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಶನಿವಾರ ತಮ್ಮ ಅಧಿಕೃತ ನೆದರ್ಲ್ಯಾಂಡ್ಸ್ ಪ್ರವಾಸದ ಆರಂಭದಲ್ಲಿ ಹೇಗ್ನಲ್ಲಿ ನೆರೆದಿದ್ದ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ತಮ್ಮ ಪ್ರಸಿದ್ಧ ಝಲ್ಮುರಿ ಹೇಳಿಕೆಯನ್ನು ಪುನರುಚ್ಚರಿಸುವ ಮೂಲಕ ಯುರೋಪ್ ಖಂಡಕ್ಕೂ ಭಾರತದ ಚುನಾವಣಾ ರಂಗನ್ನು ತಂದರು. ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳಂ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ (Puducherry) ವಿಧಾನಸಭಾ ಚುನಾವಣೆಗಳಲ್ಲಿ ಕಂಡುಬಂದಿದ್ದ ಭಾರಿ ಸಾರ್ವಜನಿಕ ಸಹಭಾಗಿತ್ವದ ಬಗ್ಗೆ ಪ್ರಧಾನಿ ಮೋದಿ ಹೆಮ್ಮೆಯಿಂದ ಮಾತನಾಡಿದರು.
ಅವರು ಮಾತನಾಡುತ್ತಿದ್ದಾಗಲೇ ಸಭಿಕರು ಮಧ್ಯದಲ್ಲಿಯೇ ಜೋರಾಗಿ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು. ಇದರಿಂದಾಗಿ ಮೋದಿ ಮಾತು ನಿಲ್ಲಿಸಿ, ಮುಗುಳ್ನಕ್ಕು, "ಝಲ್ಮುರಿ ಇಲ್ಲಿಗೂ ತಲುಪಿದೆಯೇ?" ಎಂದು ಲಘುವಾಗಿ ಕೇಳಿದರು. ಈ ಮಾತು ತಕ್ಷಣವೇ ಸಭಾಂಗಣದಲ್ಲಿದ್ದ ಎಲ್ಲರಲ್ಲೂ ಭಾರಿ ನಗು ಉಕ್ಕಿಸಿತು. ಕಳೆದ ತಿಂಗಳು ಬಂಗಾಳದ ಝಾರ್ಗ್ರಾಮ್ನಲ್ಲಿ ನಡೆದ ಭರ್ಜರಿ ಪ್ರಚಾರದ ವೇಳೆ ಪ್ರಧಾನಿ ಮೋದಿ ರಸ್ತೆಬದಿಯ ಅಂಗಡಿಯೊಂದರಲ್ಲಿ ನಿಂತು ಸಾಂಪ್ರದಾಯಿಕ ಝಲ್ಮುರಿ ಸವಿದಿದ್ದರು. ಇದು ಕೇವಲ ತಿಂಡಿಯಾಗಿ ಉಳಿಯದೆ, ತಕ್ಷಣವೇ ಜನರ ಮನ ಸೆಳೆದ ಪ್ರಮುಖ ರಾಜಕೀಯ ಸಂಕೇತವಾಗಿ ಮಾರ್ಪಟ್ಟಿತ್ತು.
ಪ್ರಧಾನಿ ಮೋದಿ ಅವರ ಮಾತು:
ಹೇಗ್ನ ಸಭಿಕರಿಗೆ ಈ ಹಳೆಯ ಉಲ್ಲೇಖ ತಕ್ಷಣವೇ ಅರ್ಥವಾಯಿತು. ಇಡೀ ಸಭಾಂಗಣವು ನಗು ಮತ್ತು ಚಪ್ಪಾಳೆಯಿಂದ ತುಂಬಿಹೋಯಿತು. ಕೆಲವು ಪ್ರಭಾವಶಾಲಿ ಚುನಾವಣಾ ಒನ್-ಲೈನರ್ಗಳು ಸರ್ಕಾರದ ಅಧಿಕೃತ ನಿಯೋಗಗಳಿಗಿಂತಲೂ ಎಷ್ಟು ವೇಗವಾಗಿ ಪ್ರಯಾಣಿಸುತ್ತವೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿತು. ಈ ಮಾತು ಪಶ್ಚಿಮ ಬಂಗಾಳದ ತೀವ್ರ ಪ್ರಚಾರದ ನೆನಪನ್ನು ಮರುಕಳಿಸಿತು. ಅಲ್ಲಿನ ಪ್ರಸಿದ್ಧ ಬೀದಿಬದಿಯ ಈ ತಿಂಡಿ ಅನಿರೀಕ್ಷಿತವಾಗಿ ರಾಜಕೀಯ ಸಂಭಾಷಣೆಯ ಭಾಗವಾಗಿತ್ತು.
ನೆದರ್ಲ್ಯಾಂಡ್ಸ್ನಲ್ಲಿ ಭಾರತೀಯ ಸಂಸ್ಕೃತಿಯ ಝಲಕ್: ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ
ಹೇಗ್ನಲ್ಲಿ ಇದನ್ನು ಪ್ರಸ್ತಾಪಿಸುವ ಮೂಲಕ, ಪ್ರಧಾನಿ ದೇಶೀಯ ರಾಜಕೀಯ ನೆನಪುಗಳನ್ನು ತಮ್ಮ ವಿದೇಶಿ ರಾಜತಾಂತ್ರಿಕ ಪ್ರವಾಸದೊಂದಿಗೆ ಲಘುವಾಗಿ ಬೆರೆಸಿದರು. ಅಲ್ಲಿ ನೆರೆದಿದ್ದ ಅನಿವಾಸಿ ಭಾರತೀಯರಿಗೆ ಇದು ಕೇವಲ ತಮಾಷೆಯಾಗಿರಲಿಲ್ಲ. ಪ್ರತಿಯೊಂದು ಪದ, ತಿಂಡಿ ಮತ್ತು ಘೋಷಣೆಯು ವಿಶಿಷ್ಟ ರಾಜಕೀಯ ಬಣ್ಣ ಪಡೆದುಕೊಂಡಿದ್ದ ಬಂಗಾಳದ ಚುನಾವಣಾ ಪ್ರಚಾರದ ಸ್ಪಷ್ಟ ಗುರುತಾಗಿತ್ತು. ಭಾರತದಿಂದ ಸಾವಿರಾರು ಕಿಲೋ ಮೀಟರ್ ದೂರದಲ್ಲೂ ಮಸಾಲೆಯುಕ್ತ ದೇಶಿ ತಿಂಡಿಯ ಪ್ರಸ್ತಾಪವು ಆ ಸಂಜೆಯ ಉತ್ಸಾಹವನ್ನು ಸಂಪೂರ್ಣವಾಗಿ ಹೆಚ್ಚಿಸಿತು.
ಮೋದಿ ಅವರ ಈ ಮಾತು ಕೇವಲ ಕೆಲವು ಸೆಕೆಂಡುಗಳ ಕಾಲ ಇರಬಹುದು, ಆದರೆ ಇದು ರಾಜಕೀಯದ ಮತ್ತೊಂದು ಆಕರ್ಷಕ ಕ್ಷಣವನ್ನು ಸೃಷ್ಟಿಸಿತು. ಬಂಗಾಳದ ಚುನಾವಣಾ ಶಾಖವು ಮತದಾನದ ನಂತರ ತಣ್ಣಗಾಗುತ್ತದೆ ಎಂದು ಭಾವಿಸಿದ್ದರೆ, ಪ್ರಧಾನಿಯವರ ನಗು ಮುಖವು 'ಜಲ್ ಮುರಿ' ಅತ್ಯುತ್ತಮ ಅಂತರರಾಷ್ಟಯ ವ್ಯಾಪ್ತಿಯನ್ನು ಹೊಂದಿದೆ ಎಂದು ಸ್ಪಷ್ಟವಾಗಿ ತೋರಿಸಿಕೊಟ್ಟಿತು.