ಕರಾಕಾಸ್, ಜೂ.25: ವೆನೆಜುವೆಲಾ (Venezuela) ದಲ್ಲಿ ಶತಮಾನದಲ್ಲೇ ಅತ್ಯಂತ ಪ್ರಬಲ ಭೂಕಂಪ ಸಂಭವಿಸಿದೆ. ಗುರುವಾರ ಮುಂಜಾನೆ (ಭಾರತೀಯ ಕಾಲಮಾನ) ಎರಡು ಸರಣಿ ಪ್ರಬಲ ಭೂಕಂಪಗಳು (Earthquake) ಸಂಭವಿಸಿದ್ದು, ವ್ಯಾಪಕ ಹಾನಿ ಉಂಟುಮಾಡಿದೆ. ಇದರ ಪರಿಣಾಮ ಲ್ಯಾಟಿನ್ ಅಮೆರಿಕ ದೇಶದ ರಾಜಧಾನಿ ಕರಾಕಾಸ್ನಲ್ಲಿ ಹಲವು ಕಟ್ಟಡಗಳು ಕುಸಿದಿವೆ. ರಿಕ್ಟರ್ ಮಾಪಕದಲ್ಲಿ 7.1 ಮತ್ತು 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಳೆದ ನೂರು ವರ್ಷಗಳಲ್ಲಿ ಈ ದೇಶವನ್ನು ಅಪ್ಪಳಿಸಿದ ಅತ್ಯಂತ ಪ್ರಬಲ ಭೂಕಂಪ ಇದಾಗಿವೆ. ಈ ವರೆಗೆ 32 ಜನ ಮೃತಪಟ್ಟಿದ್ದರೆ, 700 ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ತಿಳಿಸಿರುವಂತೆ, ಮೊದಲ ಭೂಕಂಪವು ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ಹೊಂದಿತ್ತು. ಇದರ ಕೇಂದ್ರಬಿಂದು ವೆನೆಜುವೆಲಾದ ಮೊರೊನ್ ನಗರದ ಪಶ್ಚಿಮ ಭಾಗದಲ್ಲಿ, ರಾಜಧಾನಿ ಕರಾಕಾಸ್ನಿಂದ ಸುಮಾರು 168 ಕಿಲೋಮೀಟರ್ ಪಶ್ಚಿಮಕ್ಕೆ ಇತ್ತು. ಈ ಭೂಕಂಪವು ಭೂಮಿಯ ಮೇಲ್ಮೈಯಿಂದ ಕೇವಲ 13 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಸಂಸ್ಥೆ ತಿಳಿಸಿದೆ.
ನಲವತ್ತು ಸೆಕೆಂಡುಗಳ ನಂತರ, ಅದೇ ಪ್ರದೇಶದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತು. ಎರಡನೇ ಕಂಪನವು 10 ಕಿ.ಮೀ ಆಳದಲ್ಲಿ ಸಂಭವಿಸಿತು. ಇದರ ಕೇಂದ್ರಬಿಂದು ಮೊರೊನ್ನಿಂದ ನೈಋತ್ಯಕ್ಕೆ ಸುಮಾರು 16 ಕಿ.ಮೀ ದೂರದಲ್ಲಿತ್ತು. ಇದು ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪರಿಣಾಮವನ್ನು ಮತ್ತಷ್ಟು ತೀವ್ರಗೊಳಿಸಿತು.
ಭಾರಿ ಭೂಕಂಪದಿಂದ ಸುನಾಮಿ: ಫಿಲಿಪೈನ್ಸ್ನಲ್ಲಿ 4 ಮಂದಿ ಸಾವು 200ಕ್ಕೂ ಹೆಚ್ಚು ಮಂದಿಗೆ ಗಾಯ
ಭೂಕಂಪದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಸಂತಾಪ ಸೂಚಿಸಿದರು. ಈ ವರೆಗೆ 32 ಜನ ಮೃತಪಟ್ಟಿದ್ದರೆ, 700 ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜಧಾನಿ ಕರಾಕಾಸ್ನಲ್ಲಿ ಭೂಕಂಪವಾಗುತ್ತಿದ್ದಂತೆ, ನಿವಾಸಿಗಳು ಭೀತಿಗೊಂಡರು. ಎಲ್ಲರೂ ಮನೆಗಳಿಂದ ಹೊರಬಂದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದರು. ಭೂಕಂಪದಿಂದ ಹಲವೆಡೆ ಗೋಡೆಗಳು ಕುಸಿದು ಮನೆಗಳು ಮತ್ತು ಪೀಠೋಪಕರಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಾನಿಗೊಳಗಾದ ಪ್ರದೇಶಗಳು ಧೂಳಿನಿಂದ ಆವೃತವಾಗಿದೆ.
ವೆನೆಜುವೆಲಾದ ಒಳಾಂಗಣ ಸಚಿವ ಡಿಯೋಸ್ಡಾಡೊ ಕ್ಯಾಬೆಲ್ಲೊ ಅವರು, ಭೂಕಂಪದ ಕಂಪನಗಳು ಹಲವು ರಾಜ್ಯಗಳಲ್ಲಿ ಅನುಭವವಾಗಿದ್ದು, ಅಲ್ತಾಮಿರಾ ಪ್ರದೇಶದಲ್ಲಿ ಕಟ್ಟಡಗಳು ಕುಸಿದಿರುವಂತಹ ಆತಂಕಕಾರಿ ಪರಿಸ್ಥಿತಿಗಳು ಉಂಟಾಗಿವೆ ಎಂದು ತಿಳಿಸಿದ್ದಾರೆ. ಭೂಕಂಪಗಳ ಸಾಧ್ಯತೆಯಿಂದ ಹಾನಿ ಮತ್ತಷ್ಟು ಹೆಚ್ಚಾಗಬಹುದಾದ ಕಾರಣ, ನಿವಾಸಿಗಳು ಸುರಕ್ಷತೆಯ ದೃಷ್ಟಿಯಿಂದ ಹೊರಗೇ ಇರಬೇಕೆಂದು ಅವರು ಮನವಿ ಮಾಡಿದ್ದಾರೆ.
ಕ್ಯಾಬೆಲ್ಲೊ ಅವರು ಭೂಕಂಪದಿಂದ ಹಲವರು ಗಾಯಗೊಂಡಿರುವ ಸಾಧ್ಯತೆಯಿದೆ ಎಂದು ಸೂಚಿಸಿ, ಆಂಬುಲೆನ್ಸ್ಗಳ ಸಂಚಾರಕ್ಕೆ ತುರ್ತು ಮಾರ್ಗಗಳನ್ನು ಖಾಲಿ ಇಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ರಕ್ಷಣಾ ಕಾರ್ಯಾಚರಣೆಗಳು ನಿಗದಿತ ತುರ್ತು ಪ್ರೋಟೋಕಾಲ್ಗಳ ಪ್ರಕಾರ ನಡೆಯುತ್ತಿವೆ ಎಂದು ತಿಳಿಸಿದ ಅವರು, ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರ ಸುರಕ್ಷತೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ನಾಗರಿಕರಿಗೆ ಕರೆ ನೀಡಿದರು.