ದೆಹಲಿ, ಜು. 8: ಇರಾನ್-ಅಮೆರಿಕ ನಡುವಿನ ಸಂಘರ್ಷ (Iran-US War) ಕೆಲವು ದಿನಗಳ ಬಿಡುವಿನ ಬಳಿಕ ಮತ್ತೆ ತಾರಕಕ್ಕೇರಿದೆ. ಆ ಮೂಲಕ ಶಾಂತವಾಗಿದ್ದ ಪಶ್ಚಿಮ ಏಷ್ಯಾ ಮತ್ತೆ ಸಂಘರ್ಷಭರಿತವಾಗಿದ್ದು, ಈ ಪರಿಸ್ಥಿತಿ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇರಾನ್ನ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಸಂಚರಿಸುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದ ಬಳಿಕ ಅಮೆರಿಕ ಪ್ರತಿದಾಳಿ ಮೂಲಕ ತಿರುಗೇಟು ನೀಡಿದೆ. ಇರಾನ್ ಮೇಲೆ ಮತ್ತೆ ಪ್ರಬಲ ದಾಳಿ ನಡೆಸುವುದಾಗಿ ಅಮೆರಿಕ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗುಡುಗಿದ್ದು, ಜಗತ್ತನ್ನು ತಲ್ಲಣಗೊಳಿಸಿದೆ.
ಇತ್ತೀಚಿನ ಬೆಳವಣಿಗೆಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಗಂಭೀರ ಬೆದರಿಕೆ ಒಡ್ಡುತ್ತಿವೆ ಮತ್ತು ಜಾಗತಿಕ ಇಂಧನ ಸರಬರಾಜು ಮತ್ತು ಕಡಲ ವ್ಯಾಪಾರವನ್ನು ಅಪಾಯಕ್ಕೆ ಸಿಲುಕಿಸುತ್ತಿವೆ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ಹೇಳಿಕೆ:
"ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುವ ವಾಣಿಜ್ಯ ಹಡಗಿನ ಮೇಲಿನ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇಂತಹ ಬೆಳವಣಿಗೆಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಹಾಳು ಮಾಡುತ್ತವೆ ಮತ್ತು ಜಾಗತಿಕ ಇಂಧನ ಸರಬರಾಜು, ಕಡಲ ವಾಣಿಜ್ಯದ ಅಡೆತಡೆಯಿಲ್ಲದ ಹರಿವಿಗೆ ಬೆದರಿಕೆ ಒಡ್ಡುತ್ತವೆ" ಎಂದು ಎಂಇಎ ಹೇಳಿದೆ.
ಅಮೆರಿಕ-ಇರಾನ್ ಸಂಘರ್ಷ ಮತ್ತೆ ತಾರಕಕ್ಕೆ: ಇಂದೇ ರಾತ್ರಿ ದಾಳಿ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಪರಿಸ್ಥಿತಿಯನ್ನು ತಕ್ಷಣ ನಿಯಂತ್ರಿಸುವಂತೆ ಕರೆ ನೀಡಿದ ಭಾರತ, ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಪುನರುಚ್ಚರಿಸಿದೆ. ಎರಡೂ ಕಡೆಯವರು ಸಂಯಮ ಕಾಪಾಡಿಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಬಹುದಾದ ಕ್ರಮಗಳನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದೆ. ನಾಗರಿಕರ ಸುರಕ್ಷತೆ ಮತ್ತು ಅಂತಾರಾಷ್ಟ್ರೀಯ ಸಮುದ್ರ ಮಾರ್ಗಗಳ ಮೂಲಕ ಸಾಗುವ ವಾಣಿಜ್ಯ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ವಿದೇಶಾಂಗ ಸಚಿವಾಲಯ ಒತ್ತಿ ಹೇಳಿದೆ.
ರಾಜತಾಂತ್ರಿಕ ಮಾತುಕತೆ
ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಎಂಇಎ ತಿಳಿಸಿದೆ. ಎರಡು ದಿನಗಳಲ್ಲಿ ಒಮಾನ್ ಕೊಲ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಈ ಹೇಳಿಕೆ ಬಿಡುಗಡೆ ಮಾಡಿದೆ. ಜುಲೈ 6ರಂದು ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದವು.
ಈ ದಾಳಿಗಳ ನಂತರ ಅಮೆರಿಕ ಪ್ರತಿದಾಳಿ ನಡೆಸಿತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ (IRGC) ನೌಕಾ ನೆಲೆ ಸೇರಿ 80ಕ್ಕೂ ಹೆಚ್ಚು ಇರಾನಿನ ಮಿಲಿಟರಿ ಗುರಿಗಳ ಮೇಲೆ ವಾಷಿಂಗ್ಟನ್ ದಾಳಿ ಮಾಡಿತು. ಹೊರ್ಮುಜ್ ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ಸಾಗಣೆಗೆ ಬೆದರಿಕೆ ಒಡ್ಡುವ ಇರಾನ್ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶವನ್ನು ಈ ಕಾರ್ಯಾಚರಣೆ ಹೊಂದಿದೆ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಸೇವಾ ಶುಲ್ಕ ದೃಢಪಡಿಸಿದ ಇರಾನ್; ಸ್ನೇಹಪರ ರಾಷ್ಟ್ರಗಳಿಗೆ ವಿಶೇಷ ಸೌಲಭ್ಯ ಘೋಷಣೆ
ಭಾರತವು ತನ್ನ ಕಚ್ಚಾ ತೈಲದ ಗಣನೀಯ ಭಾಗವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಮತ್ತು ಇಂಧನ ಸಾಗಣೆಗೆ ಹೊರ್ಮುಜ್ ಜಲಸಂಧಿಯನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ಈ ಬೆಳವಣಿಗೆಗಳು ರಾಷ್ಟ್ರದ ಹಿತಾಸಕ್ತಿಗೂ ಮಾರಕ ಎನಿಸಿಕೊಂಡಿದೆ. ಜತೆಗೆ ಭಾರತೀಯ ವಾಣಿಜ್ಯ ಹಡಗುಗಳ ಸುರಕ್ಷತೆ ವಿಚಾರದಲ್ಲೂ ಕಳವಳ ಮೂಡಿದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.