ನವದೆಹಲಿ: ಭಾರತವು ಉಷ್ಣವಲಯದಿಂದ ಕೂಡಿದ್ದು ಸೂರ್ಯನ ಬೆಳಕು ಹೇರಳವಾಗಿ ಕಂಡುಬಂದರೂ ಸಹ ಜನಸಂಖ್ಯೆಯಲ್ಲಿ ಶೇ.80ರಷ್ಟು ಜನರು ವಿಟಮಿನ್ ಡಿ (Vitamin D) ಕೊರತೆ ಯಿಂದ ಬಳಲುತ್ತಿದ್ದಾರೆ. ಪರೀಕ್ಷೆ ನಡೆಸಿದಾಗ ಎಲ್ಲಾ ವಯೋಮಾನದವರಲ್ಲೂ ಸಹ ವಿಟಮಿನ್ ಡಿ ಮತ್ತು ವಿಟಮಿನ್ ಬಿ12 ಕೊರತೆ ಇರುವುದು ತಿಳಿದುಬರುತ್ತಿದೆ. ಬಹುತೇಕ ಮಂದಿ ಈ ಸಮಸ್ಯೆಗೆ ಪರಿಹಾರ ಮಾಂಸಹಾರ ಸೇವನೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ವಿವರಿಸಿದ್ದಾರೆ.
ಸಸ್ಯಾಹಾರಿಗಳೂ ಕೂಡ ಈ ಪೋಷಕಾಂಶ ದೊರೆಯುವ ಆಹಾರವನ್ನು ಸೇವಿಸಬಹುದು. ಉದಾಹರಣೆಗೆ ಅಣಬೆ, ಕಿತ್ತಳೆ, ಕಲ್ಲಂಗಡಿ, ಬಾಳೆಹಣ್ಣು, ಪೇರಳೆ, ನೆಲ್ಲಿಕಾಯಿ ಮತ್ತು ಪಪ್ಪಾಯಿಯಂತಹ ಹಣ್ಣುಗಳ ಮೂಲಕ ವಿಟಮಿನ್ ಡಿ ಅನ್ನು ಪಡೆಯಬಹುದು. ಬಾಳೆಹಣ್ಣು ಮೆಗ್ನೀಶಿಯಂ ನಿಂದ ಕೂಡಿದ್ದು, ದೇಹದಲ್ಲಿ ವಿಟಮಿನ್ ಡಿ ಸಕ್ರಿಯಗೊಳಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಊಟದ ನಂತರ ಬಾಳೆಹಣ್ಣು ತಿನ್ನುವ ಅಭ್ಯಾಸವಿದೆ. ಅಧಿಕ ತೂಕ ಹೊಂದಿರುವ ವ್ಯಕ್ತಿಗಳು ಚಿಕ್ಕ ಬಾಳೆಹಣ್ಣುಗಳನ್ನು ಸೇವಿಸುವುದು ಒಳಿತು. ಪ್ಯಾರಾಥೈರಾಯ್ಡ್ ಹಾರ್ಮೋನ್ ಅನ್ನು ನಿಯಂತ್ರಿಸಲು, ವಿಟಮಿನ್ ಡಿ ಅನ್ನು ಸಕ್ರಿಯಗೊಳಿಸಲು ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೆಗ್ನೀಶಿಯಂ ಸಮೃದ್ಧ ಆಹಾರಗಳು ಸಹಾಯ ಮಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಶಿಶುಗಳಲ್ಲಿ ಮೂಳೆ ಬೆಳೆಯುವ ಹಂತದಲ್ಲಿರುತ್ತದೆ ಮತ್ತು ವಯಸ್ಕರಲ್ಲಿ ಸ್ನಾಯು ಸೆಳೆತ ಜೊತೆಗೆ ಮೂಳೆ ಸವೆತದ ಸಮಸ್ಯೆಗಳು ಕಂಡುಬರುತ್ತದೆ ಹೀಗಾಗಿ ಆಯಾ ವಯಸ್ಸಿನ ಹಂತಕ್ಕೆ ಅನುಗುಣ ವಾಗಿ ಅಗತ್ಯತೆಗಳು ವಿಭಿನ್ನವಾಗಿರುತ್ತವೆ. ವೃದ್ಧರಲ್ಲಿ ವಿಟಮಿನ್ ಡಿ ಕೊರತೆಯು ಕಡಿಮೆ ಕ್ಯಾಲ್ಸಿಯಂನಿಂದಾಗಿ ಮೂಳೆ ಬಾಗುವಿಕೆ ಮತ್ತು ದುರ್ಬಲ ಮೂಳೆ ರಚನೆ ರೂಪದಲ್ಲಿ ಕಾಣಿಸಿ ಕೊಳ್ಳುತ್ತದೆ.
ಹಣ್ಣುಗಳ ಮೂಲಕ ದೇಹಕ್ಕೆ ವಿಟಮಿನ್ ಡಿ ಅನ್ನು ಸೂಕ್ಷ್ಮ ಅಂಶಗಳಾಗಿ ಸೇರಿಸಬಹುದು. ಆದರೆ ಮಾಂಸಾಹಾರಿ ಆಹಾರಗಳಲ್ಲಿ ವಿಟಮಿನ್ ಡಿ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಮೀನು ಪ್ರಿಯರಲ್ಲಿಈ ಕೊರತೆ ಕಡಿಮೆಯಿರುತ್ತದೆ, ಏಕೆಂದರೆ ಮೀನು ಯಥೇಚ್ಚವಾದ ವಿಟಮಿನ್ ಡಿ ಅನ್ನು ಹೊಂದಿ ರುತ್ತದೆ. ಮಾಂಸ, ಕೋಳಿ ಮತ್ತು ಲಿವರ್ ನಿಂದ ಕಡಿಮೆ ಪ್ರಮಾಣದಲ್ಲಿ ವಿಟಮಿನ್ ಡಿ ಲಭ್ಯವಿದ್ದು, ಹಾಲು, ಸೋಯಾ ಹಾಲಿನಂತಹ ಫೋರ್ಟಿಫೈಡ್ ಆಹಾರಗಳಿಂದಲೂ ವಿಟಮಿನ್ ಡಿ ಅನ್ನು ಪಡೆಯಬಹುದು.
ವಿಟಮಿನ್ ಡಿ ಅನ್ನು ದೇಹಕ್ಕೆ ಪೂರೈಸಲು ಬೆಳಗಿನ ಸಮಯ ಕಾಫಿ ಬದಲಿಗೆ ಒಂದು ಚಿಟಿಕೆ ಅರಿಶಿನ, ಮೆಣಸು ಮತ್ತು ಬೆಲ್ಲವನ್ನು ಒಳಗೊಂಡಿರುವ ಅರಿಶಿನ ಹಾಲನ್ನು ಕುಡಿಯ ಬಹುದು. ಇದು ಕ್ಯಾಲ್ಸಿಯಂ ಸಮತೋಲನಕ್ಕೆ ಅಡ್ಡಿಪಡಿಸುವ ಕೆಫೀನ್ಗಿಂತ ಉತ್ತಮ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮತ್ತು ಆರೋಗ್ಯಕ್ಕೆ ಪೂರಕವಾಗಿ ಅರಿಶಿನ ಮತ್ತು ಮೆಣಸು ಕಾರ್ಯ ನಿರ್ವಹಿಸುತ್ತದೆ. ಜೀರಿಗೆ ನೀರು, ಚಿಯಾ ಬೀಜದ ನೀರು, ಪುದೀನಾ ನೀರು ಅಥವಾ ಹಣ್ಣು-ಬೆರೆಸಿದ ಗ್ರೀನ್ ಟೀ ಸೇವನೆಯೊಂದಿಗೆ ದಿನವನ್ನು ಆರಂಭಿಸಬಹುದು. ಗ್ರೀನ್ ಟೀಯಲ್ಲಿರುವ ನಿಂಬೆ ಪದಾರ್ಥವು ಹೊಟ್ಟೆ ಭಾಗದಲ್ಲಿರುವ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಲು ಸಹ ಕರಿಸುತ್ತದೆ ಎನ್ನುತ್ತಾರೆ ತಜ್ಞರು.
Health Tips: ಚಳಿಗಾಲದಲ್ಲಿ ನೆಲ್ಲಿಕಾಯಿ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭ ಇದೆ ಗೊತ್ತಾ?
ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯದಲ್ಲಿ ವಿಟಮಿನ್ ಡಿ ಪಾತ್ರ
ಪ್ರತಿರಕ್ಷಣಾ ಕೋಶಗಳನ್ನು ನಿಯಂತ್ರಿಸಲು, ಉರಿಯೂತವನ್ನು ಕಡಿಮೆ ಮಾಡಲು, ಮಲ್ಟಿಪಲ್ ಸ್ಕ್ಲೆರೋಸಿಸ್, ಸಂಧಿವಾತ ಮತ್ತು ಕೆಲವು ಉಸಿರಾಟದ ಸೋಂಕುಗಳಂತಹ ಸ್ವಯಂ ನಿರೋಧಕ ಅಸ್ವಸ್ಥತೆಗಳನ್ನು ತಡೆಗಟ್ಟುವಲ್ಲಿ ವಿಟಮಿನ್ ಡಿ ಪಾತ್ರ ಹೆಚ್ಚಿದೆ. ವಿಟಮಿನ್ ಡಿ ಕೊರತೆಯು ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರಲಿದೆ. ಅನೇಕ ಯುವ ವಯಸ್ಕರು ವಿಶೇಷ ವಾಗಿ ತಂತ್ರಜ್ಞಾನ ವಲಯದಲ್ಲಿ ಕೆಲಸ ಮಾಡುತ್ತಿರುವವರು ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ದಿನಕ್ಕೆ 5-10 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ಕಳೆಯುವುದರಿಂದ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ ಮತ್ತು ಉಸಿರಾಟ ಹಾಗೂ ವಿಸರ್ಜನಾ ಕ್ರಿಯೆಗೆ ಸಹಕರಿಸುತ್ತದೆ ಎಂದು ಡಾ. ಸುನಿತಾ ತಿಳಿಸಿದ್ದಾರೆ.
ನಿಮ್ಮ ದೈನಂದಿನ ಆಹಾರ ಸೇವನೆಯ ಒಂದು ಭಾಗ ವಿಟಮಿನ್ ಡಿ ಯ ಸೂಕ್ಷ್ಮ ಪ್ರಮಾಣವನ್ನು ಹೊಂದಿರುವ ಹಣ್ಣಿನಿಂದ ಕೂಡಿರಬೇಕು. ಸಂಜೆ ಸಮಯ ಚಹಾದ ಬದಲಿಗೆ ಬಾದಾಮಿ ಹಾಲು ಅಥವಾ ಅರಿಶಿನ ಹಾಲನ್ನು ಸೇವಿಸುವುದು ಸೂಕ್ತ. ಹಾಲಿನ ಪದಾರ್ಥಗಳಿಂದ ಅಲರ್ಜಿ ಹೊಂದಿರದವರು ಚಪಾತಿ ಹಿಟ್ಟಿನಲ್ಲಿ ಹಾಲನ್ನು ಸೇರಿಸಿ ಅಥವಾ ಪ್ರೋಬಯಾಟಿಕ್ಸ್ ನೀಡುವ ಮಜ್ಜಿಗೆಯನ್ನು ಸೇವಿಸಬಹುದು ಎನ್ನುತ್ತಾರೆ ತಜ್ಞೆ ಡಾ. ಸುನಿತಾ.
ವಿಟಮಿನ್ ಡಿ ಕೊರತೆಯಿಂದಾಗುವ ಸಮಸ್ಯೆಗಳು:
ದೇಹದಲ್ಲಿ ವಿಟಮಿನ್ ಡಿ ಮಟ್ಟ ತುಂಬಾ ಕಡಿಮೆಯಾದಾಗ ಮೂಳೆಗಳು ಸರಿಯಾಗಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಮೂಳೆಯ ಬಲ ಅಭಿವೃದ್ಧಿಯಾಗಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಲು ದೇಹಕ್ಕೆ ಸಾಕಷ್ಟು ವಿಟಮಿನ್ ಡಿ ಅತ್ಯಗತ್ಯ. ಬೆಳಗಿನ ಉಪಾಹಾರವನ್ನು ತ್ಯಜಿಸುವವರು ಒಂದು ಬಾಳೆಹಣ್ಣು, ಪೇರಳೆ ಅಥವಾ ಸೇಬು ಹಣ್ಣನ್ನು ಸೇವಿಸಬಹುದು ಎಂದು ಆಹಾರ ತಜ್ಞೆ ಡಾ. ಸುನಿತಾ ಸಲಹೆ ನೀಡಿದ್ದಾರೆ.