ಬೆಳಗಾವಿ, ಏ. 23: ಕರ್ನಾಟಕದ 2025-26ನೇ ಸಾಲಿನ ಎಸ್ಎಸ್ಎಲ್ಸಿ (SSLC) ಪರೀಕ್ಷೆಯ ರಿಸಲ್ಟ್ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಈ ವರ್ಷ ರಾಜ್ಯದ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರ ಕೂಡ ಸೇರಿದ್ದು, ಸರ್ಕಾರಿ ಶಾಲೆಯಲ್ಲೂ ಓದಿ ಟಾಪರ್ ಆಗಬಹುದು ಎನ್ನುವುದನ್ನು ಸಾಬೀತುಪಡಿಸಿದ್ದಾಳೆ. ಆಕೆಯ ತಂದೆ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಮಗಳನ್ನು ಅದೇ ಶಾಲೆಯಲ್ಲಿ ಓದಿಸಿ ಮಾದರಿಯಾಗಿದ್ದಾರೆ.
ಸಾಮಾನ್ಯವಾಗಿ ಸರ್ಕಾರಿ ಶಾಲೆ ಎಂದಾಗ ಕಡೆಗಣಿಸುವವರೇ ಹೆಚ್ಚು. ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂದು ಖಾಸಗಿ ಶಾಲೆಯತ್ತ ಪೋಷಕರು ಮುಖ ಮಾಡುತ್ತಾರೆ. ಆದರೆ ಪ್ರಾರ್ಥನಾ ಬಿರಾದಾರ್ ಅವರ ತಂದೆ ನಾಗಪ್ಪ ಬಿರಾದಾರ್ ಮಗಳನ್ನು ತಮ್ಮ ಶಾಲೆಯಲ್ಲಿಯೇ ಓದಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸುವಂತೆ ಮಾರ್ಗದರ್ಶನ ನೀಡಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ, ಶೇ. 94.10 ಉತ್ತೀರ್ಣ
ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರ ಚಿಕ್ಕೋಡಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದವರು. ಅದೇ ಗ್ರಾಮದ ಪ್ರೌಢ ಶಾಲೆಯಲ್ಲಿ ತಂದೆ ನಾಗಪ್ಪ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪುತ್ರಿಯನ್ನು ತಮ್ಮ ಶಾಲೆಯಲ್ಲೇ ಓದಿಸಿದ್ದು, ಸರ್ಕಾರಿ ಶಾಲೆಗೆ ಹೆಮ್ಮೆ ತಂದಿದ್ದಾರೆ. 1ನೇ ತರಗತಿಯಿಂದಲೂ ಪುತ್ರಿಯನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ ಹುರಿದುಂಬಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಪ್ರಾರ್ಥನಾ, ʼʼಎಲ್ಲ ಶಿಕ್ಷಕರು ನನಗೆ ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ ಪೋಷಕರ ಬೆಂಬಲದಿಂದ ಟಾಪರ್ ಆಗಲು ಸಾಧ್ಯವಾಗಿದೆʼʼ ಎಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ವಿಶೇಷ. ಉಳಿದ ಆರು ಟಾಪರ್ಗಳು ಅನುದಾನ ರಹಿತ ಶಾಲೆಯ ವಿದ್ಯಾರ್ಥಿಗಳು.