ರಾಮದುರ್ಗ: ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯು ವಂತಾಗಲು ಸರಕಾರ ಕಟ್ಟಡ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ(Assembly Chief Whip Ashoka Pattana) ಕರೆ ನೀಡಿದರು.
ತಾಲೂಕಿನ ಜಾಲಿಕಟ್ಟಿ ಗ್ರಾಮದಲ್ಲಿ ನಬಾರ್ಡ್ ಯೋಜನೆ ಅಡಿಯಲ್ಲಿ ನಿರ್ಮಿಸಿದ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದಲ್ಲಿ 6 ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಉನ್ನತೀಕರಣಗೊಂಡಿವೆ. ಪಾಲಕರು ತಮ್ಮ ಮಕ್ಕಳನ್ನು ಪ್ರತಿದಿನ ತಪ್ಪದೆ ಶಾಲೆಗೆ ಕಳುಹಿಸಿ, ಸರಕಾರದಿಂದ ದೊರೆಯುವ ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: MLA Ashoka Pattana: ಡಿಸಿಸಿ ಬ್ಯಾಂಕ್ ಗೆ ನಾಮನಿರ್ದೇಶಕ ಸದಸ್ಯರಾಗಿ ಶಾಸಕ ಪಟ್ಟಣ ಆಯ್ಕೆ
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಮಾತನಾಡಿ, ಶಾಸಕರ ಮುತವರ್ಜಿಯಿಂದ ತಾಲೂಕಿ ನಲ್ಲಿ ಈಗಾಗಲೇ 35 ಪ್ರಾಥಮಿಕ, 10 ಪ್ರೌಢಶಾಲಾ ಕೊಠಡಿಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ವರ್ಷದಿಂದ ತಾಲೂಕಿನ 30 ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಎಲ್ಕೆಜಿ, ಯುಕೆಜಿ ತರಗತಿ ಗಳನ್ನು ಆರಂಭಿಸಲಾಗುತ್ತಿದೆ. ತಾಲೂಕಿನಾದ್ಯಂತ ಅಲ್ಲಲ್ಲಿ ಶಿಕ್ಷಕರ ಕೊರತೆ ಇದ್ದು, ಶಾಸಕರು ಸರಕಾರದ ಮಟ್ಟದಲ್ಲಿ ಈ ಕುರಿತು ಚರ್ಚಿಸಿ, ಅಗತ್ಯ ಶಿಕ್ಷಕರು ತಾಲೂಕಿನಲ್ಲಿ ಸೇವೆ ಮಾಡುವಂತಾ ಗಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ತಾ.ಪಂ ಇಓ ಬಸವರಾಜ ಐನಾಪೂರ ಮಾತನಾಡಿ, ಸರಕಾರಿ ಶಾಲೆಗಳು ಸಾರ್ವಜನಿಕ ಆಸ್ತಿಯಾಗಿವೆ. ಸಮುದಾಯದ ಸಹಭಾಗಿತ್ವದಿಂದ ಶಾಲೆಗಳ ಪ್ರಗತಿ ಸಾಧ್ಯವಿದೆ. ಗ್ರಾಮಸ್ಥರು ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಿತ್ತೂರ ಗ್ರಾ.ಪಂ ಅಧ್ಯಕ್ಷೆ ಪದ್ಮವ್ವ ಬಡಕಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯಲ್ಲಪ್ಪ ಬೆಳಗಂಟಿ, ಸದಸ್ಯೆ ನಾಗವ್ವ ಕಂಬಳಿ, ಎಸ್ಡಿಎಂಸಿ ಅಧ್ಯಕ್ಷ ಬರಮಪ್ಪ ಬೆಳಗಂಟಿ, ಪಿಡಿಓ ಸದಾಶಿವ ಹರನಟ್ಟಿ, ಅವಪ್ಪ ಅಂಗಡಿ, ಬಿಆರ್ಸಿ ಪ್ರಕಾಶ ಚಾಯಪ್ಪಗೋಳ, ಸಿಆರ್ಸಿ ರವೀಂದ್ರ ಬಾರಿಗಿಡದ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತಿತರರಿದ್ದರು.
ಪ್ರಧಾನ ಗುರು ಎಸ್.ಕೆ. ಬಡಿಗೇರ ಸ್ವಾಗತಿಸಿದರು. ಶಿಕ್ಷಕ ವಾಸು ಮುಗಳಿ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಸುಣಗಾರ ವಂದಿಸಿದರು.