ಬೆಳಗಾವಿ, ಫೆ. 6: ''ಗ್ರಾಮದಲ್ಲಿ ಗುಡಿ ಕಟ್ಟಿಸಿಕೊಡುವುದಾಗಿ ಹೇಳಿದ ಸಂದರ್ಭದಲ್ಲಿ ನೀವೆಲ್ಲ ಚಪ್ಪಾಳೆ ಹೊಡೆದಿದ್ರಿ. ಆಗ ನಾನು ಗುಡಿ ಕಟ್ಟಿದ ಮೇಲೆ ಚಪ್ಪಾಳೆ ಹೊಡಿಯಿರಿ. ಈಗ ಬೇಡ ಎಂದಿದ್ದೆ. ಇಂದು ಗುಡಿ ಕಟ್ಟಿಸಿ, ಉದ್ಘಾಟಿಸಿದ್ದೇನೆ. ಈಗ ನಿಮ್ಮ ಚಪ್ಪಾಳೆ ನಿಲ್ಲಿಸಲಾಗುತ್ತಿಲ್ಲ. ನೀವು ತೊರುತ್ತಿರುವ ಪ್ರೀತಿಗೆ ಬೆಲೆ ಕಟ್ಟಲಾಗದು. ಊರಲ್ಲೆಲ್ಲ ಮೆರವಣಿಗೆ ಮಾಡಿದಿರಿ, ಚಿನ್ನದ ಸರ ನೀಡಿ ಸನ್ಮಾನ ಮಾಡಿದ್ರಿ. ನಿಮ್ಮ ಈ ಪ್ರೀತಿಯೇ ನನ್ನ ಶಕ್ತಿʼʼ- ಹೀಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಭಾವುಕರಾಗಿ ನುಡಿದಿದ್ದು ತಮ್ಮದೇ (Belagavi News) ಕ್ಷೇತ್ರದ ಕೊಂಡಸ್ಕೊಪ್ಪ ಗ್ರಾಮದಲ್ಲಿ.
ಗ್ರಾಮದಲ್ಲಿ ಅವರು ಒಂದೂವರೆ ಕೊಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ವಿಠ್ಠಲ ಬೀರ ದೇವರ ಮತ್ತು ಬಾಗುಬಾಯಿ ದೇವಸ್ಥಾನ ಉದ್ಘಾಟನೆ ನೆರವೇರಿಸಿದ ಮಾತನಾಡಿದರು. ʼನುಡಿದಂತೆ ನಡೆದ ತಾಯಿ' ಎನ್ನುವ ಫ್ಲೆಕ್ಸ್ ಹಾಕಿದ ಊರ ತುಂಬ ಸಚಿವೆಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಗ್ರಾಮಸ್ಥರು ಚಿನ್ನದ ಸರ ಹಾಕಿ ಸನ್ಮಾನಸಿದರು. ಇದನ್ನೆಲ್ಲ ಕಂಡ ಸಚಿವೆ, ನಿಮ್ಮ ಪ್ರೀತಿಗೆ ಬೆಲೆ ಕಟ್ಟಲಾಗದು, ಇದೇ ನನ್ನ ಶಕ್ತಿ ಎಂದು ಹೇಳಿದರು.
ʼʼಶಾಸಕಿಯಾಗಿ ಕ್ಷೇತ್ರದ ಜನರು ಕೊಟ್ಟ ಅವಕಾಶವನ್ನು ಸೂಕ್ತವಾಗಿ ನಿರ್ವಹಿಸುತ್ತಿರುವೆ. ದಾನ ಧರ್ಮ ಮಾಡಿದ ಕೈಯನ್ನು ದೇವರು ಕಾಪಾಡುತ್ತಾನೆ. ಜನರಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ, ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು, ನನ್ನ ಕೈ ಕಾಲಲ್ಲಿ ಶಕ್ತಿ ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆʼʼ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಉಡುಪಿ ಕೃಷ್ಣನ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಆರೋಪ ಮಾಡಲು ಸಮಯವಿಲ್ಲ
ʼʼಎಲ್ಲ ಸಮಾಜ ಒಂದಾಗಿ ಹಂಚಿಕೊಂಡು ಹೋಗುವ ರೀತಿ ಇರಬೇಕು, 300 ಓಟು ಇದ್ದಲ್ಲಿ 15 ಕೋಟಿ ರುಪಾಯಿ ಕೆಲಸ ಮಾಡಿಸಿದ್ದೇನೆ. ಬೇರೆಯವರ ಮೇಲೆ ಆರೋಪ ಮಾಡಲು ಸಮಯವಿಲ್ಲ. ಪ್ರೀತಿಯಿಂದ ಕೆಲಸ ಮಾಡುತ್ತೇನೆ. ನನಗೆ ಕೆಲಸ ಒಂದೇ ಗೊತ್ತು, ನಿಮ್ಮ ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ ಪ್ರೀತಿಯ ಕಾಣಿಕೆ ಬೆಲೆ ಕಟ್ಟಲು ಸಾಧ್ಯವಿಲ್ಲʼʼ ಎಂದರು.
ʼʼಶಾಸಕಿಯಾಗುವ ಅವಕಾಶ ಕೊಟ್ರಿ, ಜಾತಿ, ಭಾಷೆ ರಾಜಕಾರಣ ಮಾಡದೆ ಕೆಲಸ ಮಾಡುತ್ತಿದ್ದೇನೆ. ದಾನ, ಧರ್ಮ ಮಾಡಿದ ಕೈಯನ್ನು ದೇವರು ಕಾಪಾಡುತ್ತಾನೆ ಎನ್ನುವುದಕ್ಕೆ ದೊಡ್ಡ ಅಪಘಾತದಲ್ಲೂ ನಾನು ಬದುಕಿ ಬಂದಿದ್ದೇ ಸಾಕ್ಷಿ. ನಿಮ್ಮ ಸೇವೆ ಮಾಡುವ ಸೌಭಾಗ್ಯಕ್ಕಾಗಿ ದೇವರು ನನ್ನನ್ನು ಉಳಿಸಿದʼʼ ಎಂದು ಭಾವುಕರಾದರು.
ʼʼನಿಮ್ಮ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ನನ್ನ ಕೈ - ಕಾಲಲ್ಲಿ ಶಕ್ತಿ ಇರುವವರೆಗೆ ನಿಮ್ಮ ಸೇವೆ ಮಾಡುತ್ತೇನೆ. ದೇವಸ್ಥಾನ ಪೂರ್ಣವಾಗಿದ್ದರಿಂದ ನನಗೆ ನೆಮ್ಮದಿಯ ಕೆಲಸ ಆಗಿದೆ. ಎಲ್ಲ ಸಮಾಜದವರ ದೇವಸ್ಥಾನಗಳನ್ನೂ ಕಟ್ಟಿಸಿಕೊಟ್ಟಿದ್ದೇನೆ. ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರು, ಹಾಲು ಮತ ಸಮಾಜ. ಎಲ್ಲ ಸಮಾಜಗಳೂ ಒಂದಾಗಿ ಹೊಂದಿಕೊಂಡು ಹೋಗುವ ರೀತಿ ಈ ಗ್ರಾಮದಲ್ಲಿ ಇರಬೇಕುʼʼ ಎಂದರು.
ಪ್ರೀತಿಗೆ ಬೆಲೆ ಕಟ್ಟಲಾಗದು
ʼʼಓಟು ಎಣಿಸಿ ರೊಕ್ಕ ಹಾಕುವ ಹೆಣ್ಣು ಮಗಳಲ್ಲ ನಾನು. 300 ಓಟು ಇದ್ದಲ್ಲಿ 15 ಕೋಟಿ ರುಪಾಯಿ ಮೌಲ್ಯದ ಕೆಲಸ ಮಾಡಿಸಿದ್ದೇನೆ. ಇಲ್ಲಿ 1,200 ಓಟು ಇದೆ. ಆದರೆ ಯಾರು ನನಗೆ ಮತ ಹಾಕಿದ್ದೀರಿ ನೋಡಿಲ್ಲ. ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ. ಬೇರೆಯವರ ಮೇಲೆ ಆರೋಪ ಮಾಡಲು ನನಗೆ ಸಮಯವಿಲ್ಲ. ಪ್ರೀತಿಯಿಂದ ಕೆಲಸ ಮಾಡುತ್ತೇನೆ, ಕೆಲಸ ಒಂದೇ ನನಗೆ ಗೊತ್ತು, ನಿಮ್ಮ ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ, ನಿಮ್ಮ ಪ್ರೀತಿಯ ಕಾಣಿಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಮಾಳಿಂಗ ಸಾಂಬ್ರೇಕರ್ ಮಾತನಾಡಿ, ʼʼಹಿಂದೆಲ್ಲ ಶಾಸಕರಾದವರು ಚಪ್ಪಾಳೆ ಹೊಡೆಸಿಕೊಂಡು ಹೋಗುತ್ತಿದ್ದರು. ಕೆಲಸ ಮಾಡುತ್ತಿರಲಿಲ್ಲ, ದೇವಸ್ಥಾನ ನಿರ್ಮಾಣ ಮಾಡಲು, ಊರಿನ ಅಭಿವೃದ್ಧಿ ಮಾಡಲು ಈ ಹಿಂದೆ ಮಾಡಿದ ನಮ್ಮ ಪ್ರಯತ್ನಗಳು ಯಶಸ್ವಿಯಾಗಲಿಲ್ಲ, ಈಗ ಆಗಿದೆ. ಲಕ್ಷ್ಮೀ ಹೆಬ್ಬಾಳಕರ್ ನಿಜವಾಗಿ ಕೊಂಡಸಕೊಪ್ಪದ ಮಗಳುʼʼ ಎಂದು ಹೇಳಿದರು.
ಹಲಗಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಿಠ್ಠಲ ಸಾಂಬ್ರೆಕರ್ ಮಾತನಾಡಿ, ʼʼಎಷ್ಟು ಪೂಜೆ ಮಾಡಿದರೂ ಇಂತಾ ತಾಯಿ, ಇಂತಹ ಜನಪ್ರತಿನಿಧಿ ಸಿಗೋದಿಲ್ಲ. ಇಂತಹ ಶಾಸಕರು ಎಲ್ಲ ಕ್ಷೇತ್ರಗಳಲ್ಲಿ ಇದ್ದರೆ ಯಾವುದಕ್ಕೂ ಕೊರತೆಯಾಗುವುದಿಲ್ಲ. ಇರುವುದೇ 1,200 ಓಟು. ಆದರೆ ಎಷ್ಟೊಂದು ಅಭಿವೃದ್ದಿ ಮಾಡುತ್ತಿದ್ದಾರೆ. ಕೋಟ್ಯಂತರ ರುಪಾಯಿ ವೆಚ್ಚ ಮಾಡಿ 3 -4 ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. 6 ತಿಂಗಳಲ್ಲಿ 50 ಲಕ್ಷ ರುಪಾಯಿ ರಸ್ತೆಗಳಿಗೆ ನೀಡಿದ್ದಾರೆ. ಶಿವಾಜಿ ಮೂರ್ತಿಗೂ ಹಣ ನೀಡಿದ್ದಾರೆʼʼ ಎಂದರು.
ಭಾರತದ ಹೆಮ್ಮೆಯ ಸೈನಿಕರಿಗೊಂದು ದೊಡ್ಡ ಸಲಾಂ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ʼʼಇಂದು ಸುವರ್ಣಾಕ್ಷರಗಳಿಂದ ಬರೆಯಬೇಕಾದ ದಿನ. ವಾಗ್ದಾನದಂತೆ ಸಚಿವೆ ಮಂದಿರ ನಿರ್ಮಾಣ ಮಾಡಿದ್ದಾರೆ. ನಾವು ಕೆಲಸಗಾರರು, ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇವೆ. ನೆಪ ಹೇಳದೆ ಕೊಟ್ಟ ಜವಾಬ್ದಾರಿಯನ್ನು ತಲೆಯ ಮೇಲೆ ಹೊತ್ತು ಕೆಲಸ ಮಾಡುತ್ತಿದ್ದೇವೆʼʼ ಎಂದರು.
ಗಣ್ಯರ ಉಪಸ್ಥಿತಿ
ಶ್ರೀ ಸುಜಯ ಮಹಾಸ್ವಾಮಿಗಳು, ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಸಾಗರ್ ಪೂಜಾರಿ, ಬಾಳಾರಾಮ ಪಾಟೀಲ, ಮನೋಹರ ಮುಚ್ಚಂಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ, ಸುರೇಶ ಕರಿಗುಪ್ಪಿಕರ, ರಮೇಶ ಹುಣಶೀಮರದ, ಈರಪ್ಪ ಚೌಗುಲೆ, ಯಲ್ಲಪ್ಪ ಪೂಜೇರಿ, ಮಲ್ಲಪ್ಪ ಸಾಂಬ್ರೇಕರ, ವಿಠ್ಠಲ ಸಾಂಬ್ರೇಕರ, ಮಲ್ಲಪ್ಪ ಪೂಜೇರಿ, ರಮೇಶ ಸಾಂಬ್ರೇಕರ ಮತ್ತಿತರರು ಉಪಸ್ಥಿತರಿದ್ದರು.