Caste Census: ಜಾತಿ ಗಣತಿ ಮಾಡುತ್ತಿದ್ದಾಗಲೇ ಶಿಕ್ಷಕಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
ಕರ್ನಾಟಕದಲ್ಲಿ (Bengaluru news) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಈ ಸಮೀಕ್ಷೆಗೆ ಶಾಲಾ ಶಿಕ್ಷಕರನ್ನು ಸಮೀಕ್ಷಕರಾಗಿ ಆಯೋಜಿಸಿಲಾಗಿದೆ. ಈ ಹಿನ್ನೆಲೆ ಸಮೀಕ್ಷೆಗೆಂದು ಹೋದ ವೇಳೆ ಶಿಕ್ಷಕರೊಬ್ಬರು ಹೃದಯಾಘಾತಕ್ಕೆ (heart attack) ಒಳಗಾಗಿರುವ ಘಟನೆ ನಡೆದಿದೆ.

-

ಬೆಂಗಳೂರು: ಕರ್ನಾಟಕದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಈ ಸಮೀಕ್ಷೆಗೆ ಶಾಲಾ ಶಿಕ್ಷಕರನ್ನು ಸಮೀಕ್ಷಕರಾಗಿ (Caste Census) ಆಯೋಜಿಸಿಲಾಗಿದೆ. ಈ ಹಿನ್ನೆಲೆ ಸಮೀಕ್ಷೆಗೆಂದು ಹೋದ ವೇಳೆ ಶಿಕ್ಷಕರೊಬ್ಬರು ಹೃದಯಾಘಾತಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಶಿಕ್ಷಕಿ ಆಸ್ಪತ್ರೆಗೆ ದಾಖಲಾಗಿದ್ದು, ಸ್ಟಂಟ್ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಸಮೀಕ್ಷೆಗೆಂದು ಹೋದ ಶಾಲಾ ಶಿಕ್ಷಕಿ ಯಶೋಧ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಇವರು ಬೊಮ್ಮಸಂದ್ರದ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಸಮೀಕ್ಷೆ ನಡೆಸುತ್ತಿರುವಾಗಲೇ ಶಿಕ್ಷಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕುಸಿದು ಬಿದ್ದಿದ್ದ ಶಿಕ್ಷಕಿಯನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ವೈದ್ಯರು ಆಪರೇಷನ್ ಮಾಡಿ ಸ್ಟಂಟ್ ಅಳವಡಿಸಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕೆಲಸದಲ್ಲಿ ನಿರತರಾಗಿರುವ ಶಿಕ್ಷಕರು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಬಿಸಿಲು, ಮಳೆ, ಗಾಳಿ ಎನ್ನದೆ ಮನೆ ಮನೆ ಓಡಾಟ ನಡೆಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಊಟ, ನೀರಿಲ್ಲದೆ ಒದ್ದಾಡುತ್ತಿದ್ದಾರೆ. ಸಮೀಕ್ಷೆ ಪೂರ್ಣಗೊಳ್ಳದೆ ಹೋದರೆ ಶಿಕ್ಷಕರಿಗೆ ನೋಟೀಸ್ ಕಳುಹಿಸಲಾಗುತ್ತದೆ. ಇದರ ನಡುವೆ ಅಮಾನತ್ತಿನ ಭಯದಲ್ಲಿ ಹೆಚ್ಚಿನ ಒತ್ತಡ ಅನುಭವಿಸಿ ಈ ಪರಿಸ್ಥಿತಿ ಎದುರಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ ಸಮೀಕ್ಷೆ ಮುಗಿಸಿ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಬೈಕಿನಿಂದ ಬಿದ್ದು ಶಿಕ್ಷಕಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಬೋಡನಾಯಕನದಿನ್ನಿ ಕ್ರಾಸ್ ಬಳಿ ನಡೆದಿತ್ತು. ಅಪಘಾತದಲ್ಲಿ ರಾಂಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಾನಮ್ಮ ಯಡಹಳ್ಳಿ(51) ಸಾವನ್ನಪ್ಪಿದ್ದರು. ಸೀತಿಮನಿ ಗ್ರಾಮದಲ್ಲಿ ಸಮೀಕ್ಷೆ ಮುಗಿಸಿ ಮಗನ ಜೊತೆ ಬರುವಾಗ ಬೈಕ್ ನಿಯಂತ್ರಣ ತಪ್ಪಿ ಅಪಘಾತ ನಡೆದಿತ್ತು. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಕಾರಣ ದಾನಮ್ಮ ಸಾವನ್ನಪ್ಪಿದ್ದರು.
ಈ ಸುದ್ದಿಯನ್ನೂ ಓದಿ: Digital Arrest: ಬೆಂಗಳೂರು ಪೊಲೀಸರ ಲೋಗೋ ತೋರಿಸಿ ನಿವೃತ್ತ ವೈದ್ಯೆಗೆ 70 ಗಂಟೆ ಡಿಜಿಟಲ್ ಆರೆಸ್ಟ್, ಹೃದಯಾಘಾತದಿಂದ ಸಾವು
ಅದಕ್ಕೂ ಮೊದಲು, ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಜಾತಿ ಗಣತಿ ಮಾಡುವಾಗಲೇ ಹೃದಯಾಘಾತದಿಂದ ರಾಮಕೃಷ್ಣಪ್ಪ(57) ಮೃತಪಟ್ಟಿದ್ದರು. ಚಿಂತಾಮಣಿ ತಾಲ್ಲೂಕಿನ ಬೂರಗಮಾಕಲಹಳ್ಳಿ ಗ್ರಾಮದ ನಿವಾಸಿಯಾಗಿರುವ ರಾಮಕೃಷ್ಣಪ್ಪ , ದಿಗವಕೋಟೆ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಾತಿ ಗಣತಿಯ ಕೆಲಸದಲ್ಲಿ ತೊಡಗಿದ್ದ ವೇಳೆ ಅವರಿಗೆ ದಿಢೀರ್ ಹೃದಯಾಘಾತವಾಗಿತ್ತು.