ಜೂ.21ಕ್ಕೆ ಬಿಡದಿ ಆಸುಪಾಸು ಬೃಹತ್ ಪಾದಯಾತ್ರೆ
26 ಗ್ರಾಮಗಳಲ್ಲಿ ಜೆಡಿಎಸ್ ಸಂಚಾರ, ನಿಖಿಲ್ ನೇತೃತ್ವ
ಬೆಂಗಳೂರು: ರೈತರ ವಿರೋಧದ ನಡುವೆಯೇ ರಾಜ್ಯ ಸರಕಾರ ಬಿಡದಿ ಟೌನ್ಶಿಪ್ಗೆ ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲೇ, ಸರಕಾರದ ವಿರುದ್ಧ ಜೆಡಿಎಸ್ ತಿರುಗಿ ಬಿದ್ದಿದೆ. ಜೂ.21ರಂದು ಬಿಡದಿ ಸುತ್ತಲಿನ 26 ಗ್ರಾಮಗಳಲ್ಲಿ ಬೃಹತ್ ಪಾದಯಾತ್ರೆ ನಡೆಸಲು ಜೆಡಿಎಸ್ ಸಜ್ಜಾಗಿದೆ. ಇನ್ನೊಂದೆಡೆ ಬಿಜೆಪಿ ನಾಯಕರೂ ಕಾಂಗ್ರೆಸ್ ಸರಕಾರದ ಈ ತೀರ್ಮಾನವನ್ನು ಟೀಕಿಸಿದ್ದು, ರಿಯಲ್ ಎಸ್ಟೇಟ್ಗೆ ಅನುಕೂಲ ಮಾಡಿಕೊಡಲು ಸರಕಾರ ಈ ದಾರಿ ಹಿಡಿದಿದೆ ಎಂದು ಟೀಕಿಸಿದ್ದಾರೆ. ಆದರೆ ಕಾಂಗ್ರೆಸ್ಸಿ ಗರು ಈ ಟೌನ್'ಶಿಪ್ ಬಗ್ಗೆ ಮೊದಲು ಆಲೋಚಿಸಿದ್ದೇ ಕುಮಾರಸ್ವಾಮಿ ಅವರು ಎನ್ನುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಈ ನಡುವೆ ಬಿಡದಿ ಸುತ್ತಮುತ್ತಲಿನ ಭಾಗದಲ್ಲಿ ರೈತರ ಪ್ರತಿಭಟನೆಗಳು ಜೋರಾಗುತ್ತಿದೆ. ಈ ಹೋರಾಟಕ್ಕೆ ಬೆಂಬಲ ಸೂಚಿಸಲು ಮುಂದಾಗಿರುವ ಜೆಡಿಎಸ್ ಪಾದಯಾತ್ರೆಗೆ ಸಿದ್ಧತೆ ನಡೆಸಿ ಕೊಂಡಿದೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆದರೂ, ಒಂದೆರೆಡು ಕಡೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ದೇವೇಗೌಡರು ಪಾಲ್ಗೊಳ್ಳುವ ಸಾಧ್ಯತೆಯಿದೆ.
ಈ ಬಗ್ಗೆ ಮಾತನಾಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಸರಕಾರ ನಡೆಸುತ್ತಿರುವ ಅನ್ಯಾಯದ ಭೂಸ್ವಾಧೀನದ ವಿರುದ್ಧ ನಮ್ಮ ಹೋರಾಟ ಈಗ ಬೀದಿಗೆ ಬಂದಿದೆ. ಇದೊಂದು ಸರಕಾರಿ ರಿಯಲ್ ಎಸ್ಟೇಟ್ ಯೋಜನೆ ಯಾಗಿದೆ.
ಇದನ್ನೂ ಓದಿ: Bidadi Township: ಬಿಡದಿ ಟೌನ್ಶಿಪ್ ಸರ್ಕಾರಿ ರಿಯಲ್ ಎಸ್ಟೇಟ್ ಯೋಜನೆ: ಎಚ್.ಡಿ. ಕುಮಾರಸ್ವಾಮಿ ಕಿಡಿ
ಸಂಪೂರ್ಣವಾಗಿ ಹಣ ಲೂಟಿ ಮಾಡುವ ಯೋಚನೆ ಇದರಲ್ಲಿದೆ. ಸರಕಾರದ ಖಜಾನೆಯಲ್ಲಿ ಹಣವಿಲ್ಲದಿದ್ದರೂ, ಆರ್ಥಿಕ ಇಲಾಖೆಯ ವರದಿಯನ್ನು ಗಾಳಿಗೆ ತೂರಿ ಶೇ.87ರಷ್ಟು ಸಾಲ ಪಡೆದು ಈ ಯೋಜನೆ ಮಾಡಲು ಹೊರಟಿರುವುದು ಯಾರ ಹಿತಾಸಕ್ತಿ ಗಾಗಿ? ಹೈನುಗಾರಿಕೆ, ರೇಷ್ಮೆ, ಕೃಷಿ ನಂಬಿ ಬದುಕುತ್ತಿರುವ ರೈತರನ್ನು ಬೀದಿಗೆ ತಳ್ಳಲು ಹೊರಟಿರುವ ಸರಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ. ಈ ಯೋಜನೆಯನ್ನು ತಕ್ಷಣ ಕೈಬಿಡಲು ಒತ್ತಾಯಿಸಿ, ಬರುವ ಜೂನ್ 21ರಂದು ನಡೆಯಲಿರುವ ಬೃಹತ್ ಪಾದಯಾತ್ರೆಯಲ್ಲಿ ಹೆಚ್ಚಿನ ರೈತ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.
ರಾಹುಲ್ಗೆ ಪತ್ರ ಬರೆದ ನಿಖಿಲ್, ವಿಜಯೇಂದ್ರ: ಬಿಡದಿ ಟೌನ್ಶಿಪ್ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಿವಿಮಾತು ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬಿಡದಿ ಟೌನ್ಶಿಪ್ ಕೈಬಿಡುವಂತೆ ಡಿ.ಕೆ.ಶಿವಕುಮಾರ್ಗೆ ಸೂಚನೆನೀಡಲು ರಾಹುಲ್ ಗಾಂಽ ಅವರಿಗೆ ಪತ್ರ ಬರೆದಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಸರಕಾರ, ರಾಜ್ಯದ ರೈತರ ಅಳಲನ್ನು ಕೇಳಿಸಿಕೊಳ್ಳದೇ ಇರುವುದರಿಂದ, ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಕರ್ನಾಟಕದ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರು ಸಾವಿರಾರು ಶೋಷಿತ, ಅನ್ನದಾತ ರೈತ ಕುಟುಂಬಗಳ ಧ್ವನಿಯಾಗಿ ನಿಮ್ಮ ಗಮನಕ್ಕೆ ಕೆಲವು ವಿಷಯಗಳನ್ನು ತರಲು ಬಯಸುತ್ತಿದ್ದೇನೆ ಮತ್ತು ತಾವು ನ್ಯಾಯಯುತ ಪ್ರತಿಕ್ರಿಯೆಯನ್ನು ನೀಡಬೇಕು ಎಂದು ಈ ಮೂಲಕ ಕೋರುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.
![]()
ಕಾನೂನು ಪ್ರಕಾರ ಏನು ಹೋರಾಟ ಮಾಡಬೇಕೋ ಮಾಡುತ್ತೇವೆ. ರೈತರಿಗೆ ನ್ಯಾಯ ಕೊಡಿಸ ಲಿದ್ದೇವೆ. ರೈತರ ಪರ ನಿಲ್ಲುವುದು ಜನಪ್ರತಿನಿಧಿಗಳ ಕರ್ತವ್ಯ. ಆ ಕೆಲಸವನ್ನು ನಾವು ಮಾಡುತ್ತೇವೆ. ಯಾವುದೇ ಕಾರಣಕ್ಕೂ ರೈತರ ಭೂಮಿ ಕೊಳ್ಳೆ ಹೊಡೆಯಲು ಬಿಡುವುದಿಲ್ಲ. ನಾವು ಭಾಗದ ರೈತರೊಂದಿಗೆ ಇದ್ದೇವೆ. ಈ ಭಾಗದ ರೈತರೊಂದಿಗೆ ಹೋರಾಟ ಮಾಡಲು ನಾವು ಸದಾ ಸಿದ್ಧ.
- ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ
![]()
ರೈತರ ಪರವಾಗಿ ನಾನು 2018ರಲ್ಲಿ ಯೋಜನೆಯನ್ನು ನಿಲ್ಲಿಸಲು ಒಪ್ಪಿದ್ದೆ ಅಂತ ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ದೇವಿಯ ಮೇಲೆ ಪ್ರಮಾಣ ಮಾಡಲಿ. ಕುಮಾರಸ್ವಾಮಿ ಕೇಂದ್ರ ಸಚಿವರಾದ ಮೇಲೆ ವಿರೋಧ ಮಾಡುತ್ತಿದ್ದಾರೆ. ಸಮಸ್ಯೆ ಹುಟ್ಟು ಹಾಕಿದವರೇ ಈಗ ಹೋರಾಟ ಮಾಡುತ್ತಿದ್ದಾರೆ.
ಮಾಗಡಿ ಬಾಲಕೃಷ್ಣ, ಶಾಸಕ
![]()
ಯಾವ ಆಣೆ ಪ್ರಮಾಣ, ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ? ದೇವರ ಭಕ್ತಿಯನ್ನು ನಾನು ಅವರಿಂದ ಕಲಿಯಬೇಕಿಲ್ಲ. ನಾನು ರೈತರ ಪರ ಇದ್ದಿದ್ದಕ್ಕಾಗಿಯೇ ಸುಮ್ಮನೆ ಆದೆ. ಇಲ್ಲದಿದ್ದರೆ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಟೌನ್ಶಿಪ್ ಮಾಡಬಹುದಿತ್ತು. ರೈತರಿಗೆ ತೊಂದರೆ ಕೊಡಬೇಕು ಎಂದಿದ್ದರೆ ನಾನು ಆಗಲೇ ಮಾಡುತ್ತಿದ್ದೆ.
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ