ಬೆಂಗಳೂರು: ತಮಿಳುನಾಡಿಗೆ (Tamil Nadu) ನೀರು ಬಿಡುವುದನ್ನ ವಿರೋಧಿಸಿ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ, ಆಗಸ್ಟ್ 13ರಂದು ಕರ್ನಾಟಕ ಬಂದ್ (Karnataka Bandh) ನಡೆಸಲು ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ. ಹಲವು ಸಂಘಟನೆಗಳು ಈಗಾಗಲೇ ಬೆಂಬಲವನ್ನೂ ಘೋಷಿಸಿವೆ. ಆದರೆ ಇದೀಗ ಬಂದ್ ನಡೆಯುತ್ತದೆಯೇ? ಇಲ್ಲವೇ? ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಹಲವು ಸಂಘಟನೆಗಳು ಬಂದ್ನಿಂದ ಹಿಂದೆ ಸರಿದಿವೆ ಎಂದೂ ಹೇಳಲಾಗುತ್ತಿದೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಆಗಸ್ಟ್ 13ರಂದು ಬಂದ್ ನಡೆಸುವುದು ನಿಶ್ಚಿತ ಎಂದಿದ್ದಾರೆ. ಆದರೆ ಇನ್ನೊಂದೆಡೆ ವಾಟಾಳ್ ನಾಗರಾಜ್ ಬಣದೊಂದಿಗೇ ಗುರುತಿಸಿಕೊಂಡಿರುವ ಸಾರಾ ಗೋವಿಂದ್ ಅವರು ʼಬಂದ್ಗೆ ನಾನು ಬೆಂಬಲ ನೀಡುವುದಿಲ್ಲʼ ಎಂದು ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಕರವೇ ಪ್ರವೀಣ್ ಶೆಟ್ಟಿ ಬಣ ಕೂಡ ಬಂದ್ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದೆ ಎನ್ನಲಾಗಿದೆ.
ತಮಿಳುನಾಡು ಕ್ಯಾತೆಗೆ ಈಗಾಗಲೇ 10 ಟಿಎಂಸಿಗೂ ಹೆಚ್ಚು ನೀರು ಹರಿಸಲಾಗಿದ್ದು, ಕೇಳಿದ್ದಕ್ಕಿಂತ ಹೆಚ್ಚಿನ ನೀರು ಹರಿದುಹೋಗಿದೆ. ಅಲ್ಲದೆ ರಾಜ್ಯದಲ್ಲಿಯೂ ಉತ್ತಮ ಮಳೆಯಾಗಿದೆ. ನೀರು ಹರಿದು ಹೋದ ಮೇಲೆ ಈಗ ಬಂದ್ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಇದು ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟುಮಾಡುತ್ತದೆ” ಎನ್ನುವುದು ಬಂದ್ ವಿರೋಧಿಸುತ್ತಿರುವ ಸಂಘಟನೆಗಳ ವಾದ. ಹೋಟೆಲ್ ಸಂಘಟನೆ, ಓಲಾ-ಉಬರ್ ನೈತಿಕ ಬೆಂಬಲ ಘೋಷಿಸಿವೆ.
Cauvery Water Dispute: ಬಂದ್ ಬೇಡ; ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ನಾವು ಬದ್ಧ ಎಂದ ಸಿಎಂ ಡಿಕೆಶಿ
ವಾಟಾಳ್ ನಾಗರಾಜ್ ಹೇಳುತ್ತಿರುವುದೇನು?
ಯಾರು ಬೆಂಬಲ ನೀಡಿದಿದ್ದರೂ ಸರಿ ಆಗಸ್ಟ್ 13ರಂದು ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಮಾತನಾಡಿದ ಅವರು, ʼಆಗಸ್ಟ್ 13ರಂದು ಕರ್ನಾಟಕ ಬಂದ್ ಮಾಡಿಯೇ ಮಾಡ್ತೇವೆ. ಬಂದ್ ದಿನ ಪ್ರತಿಯೊಬ್ಬ ಜನರೂ ಬೀದಿಗೆ ಇಳಿಯಬೇಕು. ಅವತ್ತು ದೇವರಿಗೆ ಹರಕೆಯನ್ನ ಕಟ್ಟಿ, ಪ್ರತಿ ಮನೆಯವರು ಈಡುಗಾಯಿ ಒಡೆಯಬೇಕು. ಬಂದ್ ಯಶಸ್ವಿಯಾಗಬೇಕೆಂದು ಪ್ರತಿಯೊಬ್ಬರು ಪೂಜೆ ಮಾಡಿʼ ಎಂದೂ ಹೇಳಿದರು.