ಕೆಪಿಎಸ್ಸಿ ಅಕ್ರಮ: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭಾರೀ ಸಂಘರ್ಷ
ಬೆಂಗಳೂರು: ಕೆಪಿಎಸ್ಸಿಯಲ್ಲಿ ನಡೆದಿರುವ ಹಗರಣ ಖಂಡಿಸಿ ಬೆಂಗಳೂರಿನಲ್ಲಿ ಎಬಿವಿಪಿ ಕಾರ್ಯಕರ್ತರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾಗೆ ಮಂಗಳವಾರ ಮುತ್ತಿಗೆ ಹಾಕಿದ್ದು ಭಾರೀ ಸಂಘರ್ಷಕ್ಕೆ ಕಾರಣವಾಗಿದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ, ಫ್ರೀಡಂ ಪಾರ್ಕ್ ಹಾಗೂ ಮೌರ್ಯ ವೃತ್ತದ ಸುತ್ತಮುತ್ತ ಪ್ರತಿಭಟನೆ ನಡೆಸಿದರು.
ಈ ವೇಳೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧಿಕೃತ ನಿವಾಸ ಕೃಷ್ಣಾದೊಳಗೆ ನುಗ್ಗಿದ್ದರಿಂದ ಭಾರೀ ಗದ್ದಲ- ಗಲಾಟೆ ಏರ್ಪಟ್ಟು, ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ, 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರಿಗೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಬಗ್ಗೆ ಮಾಹಿತಿ ಇಲ್ಲದೇ ಇದ್ದಿದ್ದರಿಂದ ಕೆಲಕಾಲ ಗೊಂದಲ ಸೃಷ್ಟಿಯಾಯಿತು.
ಇದು ಗುಪ್ತಚರ ವೈಫಲ್ಯವೆಂಬ ಟೀಕೆಗಳು ಕೇಳಿ ಬಂದಿವೆ. ಇದರ ಲಾಭ ಪಡೆದ ಕೆಲವರು ಒಳ ನುಗ್ಗಿದರೆ, ಇನ್ನು ಕೆಲ ವಿದ್ಯಾರ್ಥಿಗಳು ಗೋಡೆ ಹಾರಿ ಕೃಷ್ಣಾದೊಳಗೆ ನುಗ್ಗುವಲ್ಲಿ ಯಶಸ್ವಿ ಯಾಗಿದ್ದಾರೆ. ಆದರೆ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಮುಂದಾದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ತೀವ್ರ ನೂಕಾಟ-ತಳ್ಳಾಟ ನಡೆಯಿತು. ಪರಿ ಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿ ಭಟನಾಕಾರರನ್ನು ಚದುರಿಸಿದರು.
ಇದನ್ನೂ ಓದಿ: KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ; ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ CID ನೋಟೀಸ್!
ಇನ್ನು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿ ಭಟನಾಕಾರರು ಮೆಜೆಸ್ಟಿಕ್ ಹಾಗೂ ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳತ್ತ ತೆರಳಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದರು. ಪ್ರತಿಭಟನಾಕಾರರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಪರಿಣಾಮ ಕೆಲವೆಡೆ ಸಂಚಾರಕ್ಕೂ ಅಡಚಣೆ ಉಂಟಾಯಿತು. ಮೌರ್ಯ ವೃತ್ತದ ಬಳಿಯೂ ಎಬಿವಿಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮುಂದು ವರಿಸಿದರು. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆಗೊಂಡಿದ್ದರು. ಪ್ರತಿ ಭಟನಾಕಾರರನ್ನು ಸ್ಥಳದಿಂದ ತೆರವು ಗೊಳಿಸಿ ಬಸ್ಗಳಲ್ಲಿ ಕರೆದೊಯ್ಯಲಾಯಿತು.
ಏನೇನಾಯ್ತು?
ಎಬಿವಿಪಿ ಕಾರ್ಯಕರ್ತರಿಂದ ಮಂಗಳವಾರ ಸಿಎಂ ಅಧಿಕೃತ ನಿವಾಸ ಕೃಷ್ಣಾ, ಫ್ರೀಡಂ ಪಾರ್ಕ್, ಮೌರ್ಯವೃತ್ತದಲ್ಲಿ ಪ್ರತಿಭಟನೆ
ಕೃಷ್ಣಾದೊಳಗೆ ನುಗ್ಗಿದ 100ಕ್ಕೂ ಅಧಿಕ ವಿದ್ಯಾರ್ಥಿಗಳು, ಪೊಲೀಸ್, ವಿದ್ಯಾರ್ಥಿಗಳ ನಡುವೆ ತೀವ್ರ ಸಂಘರ್ಷ, 50 ಮಂದಿ ಬಂಧನ
ಕೆಲವರು ನೇರವಾಗಿ ಕೃಷ್ಣಾದೊಳಗೆ ನುಗ್ಗಿದರೆ, ಇನ್ನು ಕೆಲವರು ಗೋಡೆ ಹಾರಿದರು. ತೀವ್ರ ತಳ್ಳಾಟ, ನೂಕಾಟ, ಲಘು ಲಾಠಿಚಾರ್ಜ್
![]()
ಎಬಿವಿಪಿ ಕಾರ್ಯಕರ್ತರು ಆಗಿರುವ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ನ್ಯಾಯಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಪೊಲೀಸರು ಅವರ ಮೇಲೆ ದಾಳಿ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರಕಾರವು ಭ್ರಷ್ಟರನ್ನು ರಕ್ಷಿಸಲು ಹೊರಟಿದೆ. ಬಂಧಿತ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕು.
-ಸಿ.ಟಿ. ರವಿ, ಪರಿಷತ್ ಸದಸ್ಯ