ಬೆಂಗಳೂರು: ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ್ (B. Dayanand), ವಿಕಾಸ್ ಕುಮಾರ್, ಶೇಖರ್ ಎಚ್. ತೆಕ್ಕಣ್ಣನವರ್ ವಿರುದ್ಧ ನಡೆದಿದ್ದ ವಿಭಾಗೀಯ ವಿಚಾರಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರವು ಮುಕ್ತಾಯಗೊಳಿಸಿದ್ದು, ಇವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ.
2025ರ ಜೂನ್ 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭಾರಿ ಅಪಘಾತದ ಘಟನೆಯ ಹಿನ್ನೆಲೆಯಲ್ಲಿ ಭದ್ರತಾ ಲೋಪ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿದ್ದವು. ಆ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಿ. ದಯಾನಂದ್ ಸೇರಿ ಮೂವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.
ಅಮಾನತಿನ ಬಳಿಕ ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ಅವರ ವಿರುದ್ಧ ಇಲಾಖಾ ವಿಚಾರಣೆ ಮುಂದುವರಿದಿತ್ತು. ಈ ಪ್ರಕ್ರಿಯೆಯ ಭಾಗವಾಗಿ ಹಿರಿಯ ಅಧಿಕಾರಿ ಬಿ. ದಯಾನಂದ್ ಅವರು ತಮ್ಮ ಪರವಾಗಿ ಲಿಖಿತ ಪ್ರತಿರಕ್ಷಣಾ ಹೇಳಿಕೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿದ್ದರು. ಈ ಹೇಳಿಕೆ ಹಾಗೂ ಸಂಬಂಧಪಟ್ಟ ಆಡಳಿತ ಇಲಾಖೆಯು ನೀಡಿದ ಕಾನೂನಾತ್ಮಕ ಅಭಿಪ್ರಾಯಗಳನ್ನು ಸರ್ಕಾರ ಜಂಟಿಯಾಗಿ ಕೂಲಂಕಷವಾಗಿ ಪರಿಶೀಲಿಸಿದೆ. ಅಧಿಕಾರಿಯ ವಿರುದ್ಧ ಹೊರಿಸಲಾದ ಆರೋಪಗಳಿಗೆ ಪೂರಕ ಸಾಕ್ಷ್ಯಾಧಾರಗಳು ಇಲ್ಲದಿರುವುದನ್ನು ಮನಗಂಡು, ಕೊನೆಗೆ ಎಲ್ಲಾ ಆರೋಪಗಳನ್ನು ಕೈಬಿಡಲು ತೀರ್ಮಾನಿಸಿದೆ.
ಪಿಎಸ್ಐಗೆ ಪರಸ್ತ್ರೀ ವ್ಯಾಮೋಹ; ವರದಕ್ಷಿಣೆಗಾಗಿ ಪತ್ನಿ, ಮಾವನ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ಅರೆಸ್ಟ್
ಈ ಕುರಿತು ರಾಜ್ಯ ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿದೆ. ಬಿ. ದಯಾನಂದ್ ಅವರನ್ನು ಇಲಾಖಾ ವಿಚಾರಣೆಯ ಎಲ್ಲಾ ಆಯಾಮಗಳಿಂದಲೂ ದೋಷಮುಕ್ತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ದಯಾನಂದ್ ಅವರಿಗೆ ಮುಂದಿನ ಪ್ರಮುಖ ಹುದ್ದೆಗಳ ನಿಯೋಜನೆಗೆ ಇದ್ದ ಆಡಳಿತಾತ್ಮಕ ಅಡ್ಡಿಗಳು ದೂರವಾಗಿವೆ.