ಬೆಂಗಳೂರು: ವಿಧಾನ ಪರಿಷತ್ ಸಭಾಪತಿ (Legislative Council Speaker) ಬಸವರಾಜ ಹೊರಟ್ಟಿ (Basavaraj Horatti) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಇಂದು ರಾಜೀನಾಮೆ ನೀಡಿದ್ದಾರೆ. ಕರ್ನಾಟಕ ವಿಧಾನ ಪರಿಷತ್ನ ಸಭಾಪತಿ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಅವರು ಸಹಿ ಹಾಕಿದ್ದಾರೆ. ರಾಜೀನಾಮೆ ಕೊಡುವಂತೆ ಯಾವುದೇ ಒತ್ತಡ ಹೇರಲಾಗಿಲ್ಲ. ಸಿಎಂ ಜೊತೆ ಚರ್ಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೊರಟ್ಟಿ ಹೇಳಿದ್ದಾರೆ.
ಇಂದು ಹೊರಟ್ಟಿ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸುಮಾರು 10 ನಿಮಿಷಗಳ ಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು. ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಹೊರಟ್ಟಿ ಅವರನ್ನ ಬೀಳ್ಕೊಡಲು ಗೇಟ್ ವರೆಗೂ ಮುಖ್ಯಮಂತ್ರಿಗಳು ಹೊರಬಂದಿದ್ದರು. ಈ ವೇಳೆ ಸಿಟ್ಟಲ್ಲಿದ್ದ ಹೊರಟ್ಟಿ ಸಿಎಂ ಅವರನ್ನು ಹಿಂದಿರುಗಿಯೂ ನೋಡದೆ ಹೊರಟು ಹೋಗಿದ್ದಾರೆ.
ಈ ಹಿಂದೆ ಆಗಸ್ಟ್ 14ಕ್ಕೆ ಹೊರಟ್ಟಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿತ್ತು. ಆಗಸ್ಟ್ 14 ರಂದು ಅಧಿವೇಶನದ ಎರಡನೇ ದಿನ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನೆರವೇರಿದ ತಕ್ಷಣವೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರೇ ಖುದ್ದಾಗಿ ಹೇಳಿದ್ದರು. ಆದರೆ ಇದೀಗ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ.
Karnataka Cabinet Expansion: ರಾಜೀನಾಮೆ ನೀಡಿದ್ರೆ ಕ್ಷಣದಲ್ಲಿ ಅಂಗೀಕಾರ; ಅತೃಪ್ತ ಶಾಸಕರಿಗೆ ಸಿಎಂ ಡಿಕೆಶಿ ಎಚ್ಚರಿಕೆ
ಇನ್ನು ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, "ಹೊಸ ಸಭಾಪತಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು" ಎಂದು ಸ್ಪಷ್ಟಪಡಿಸಿದರು. "ಆ.14ರಂದು ವಿಧಾನ ಪರಿಷತ್ ಉಪಸಭಾಪತಿ ಆಯ್ಕೆ ನಡೆಯಲಿದೆ. ಅದಾದ ಬಳಿಕ ನೂತನ ಸಭಾಪತಿ ಆಯ್ಕೆ ಮಾಡಲಾಗುವುದು" ಎಂದು ಸಿಎಂ ಡಿಕೆ ಶಿವಕುಮಾರ್ ಪತ್ರಕರ್ತರಿಗೆ ತಿಳಿಸಿದರು.