ಬೆಂಗಳೂರು: ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಕ್ಕೆ ಉನ್ನತ ನಿಖರತೆಯ ಎಲೆಕ್ಟ್ರೋ-ಮೆಕ್ಯಾನಿಕಲ್ ಉತ್ಪನ್ನಗಳನ್ನು ತಯಾರಿಸುವ ಬೆಂಗಳೂರಿನ ಹೈಕಲ್ ಟೆಕ್ನಾಲಜೀಸ್ ಸಂಸ್ಥೆಗೆ ಬವೇರಿಯಾ ಆರ್ಥಿಕ ವ್ಯವಹಾರಗಳು, ಪ್ರಾದೇಶಿಕ ಅಭಿವೃದ್ಧಿ ಮತ್ತು ಇಂಧನ ಸಚಿವಾಲಯದ ಗೌರವಾನ್ವಿತ ಉಪ ಸಚಿವ ಟೋಬಿಯಾಸ್ ಗೊಟ್ಹಾರ್ಟ್ ಭೇಟಿ ನೀಡಿದರು.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹೈಕಲ್ನ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಉಪ ಸಚಿವರು, ಉತ್ಪಾದನಾ ಶ್ರೇಷ್ಠತೆ, ತಾಂತ್ರಿಕ ನವೀನತೆ ಹಾಗೂ ಭಾರತ ಮತ್ತು ಬವೇರಿಯಾದ ಕೈಗಾರಿಕಾ ವಲಯಗಳ ನಡುವಿನ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳ ಕುರಿತು ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, 2025–26ನೇ ಹಣಕಾಸು ವರ್ಷದಲ್ಲಿ ದೇಶದ ರಕ್ಷಣಾ ರಫ್ತು ದಾಖಲೆಯ ₹38,424 ಕೋಟಿಗೆ ತಲುಪಿದೆ. ಉನ್ನತ ನಿಖರತೆಯ ಎಲೆಕ್ಟ್ರಾನಿಕ್ ವ್ಯವಸ್ಥೆಗಳ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೈಕಲ್ ತನ್ನ ತಾಂತ್ರಿಕ ಸಾಮರ್ಥ್ಯ ಹಾಗೂ ದೀರ್ಘಾವಧಿಯ ಬೆಳವಣಿಗೆ ದೃಷ್ಟಿಕೋನವನ್ನು ಜರ್ಮನಿಯ ಹಿರಿಯ ನೀತಿ ನಿರ್ಧಾರಕರಿಗೆ ಪರಿಚಯಿಸುವ ಅವಕಾಶ ಈ ಭೇಟಿಯಿಂದ ದೊರೆಯಿತು.
ಈ ಭೇಟಿ 2026ರ ಏಪ್ರಿಲ್ನಲ್ಲಿ ಜರ್ಮನಿಯ ಮ್ಯೂನಿಕ್ನಲ್ಲಿ ನಡೆದ ಭಾರತ–ಜರ್ಮನಿ ರಕ್ಷಣಾ ಕೈಗಾರಿಕಾ ದುಂಡುಮೇಜಿನ ಸಭೆಯ ಮುಂದುವರಿದ ಭಾಗವಾಗಿದೆ. ಆ ಸಭೆಯಲ್ಲಿ ಹೈಕಲ್ ಟೆಕ್ನಾಲ ಜೀಸ್ನ ವ್ಯವಸ್ಥಾಪಕ ನಿರ್ದೇಶಕ ಯಶಸ್ ಜೈವೀರ್ ಭಾಗವಹಿಸಿದ್ದು, ಜರ್ಮನಿಯ ಕೈಗಾರಿಕೆ ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ನೇರ ಸಂವಾದ ನಡೆಸಿದ ಭಾರತದ ಆಯ್ದ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಸಂಸ್ಥೆಗಳಲ್ಲಿ ಹೈಕಲ್ ಕೂಡ ಒಂದಾಗಿತ್ತು.
ಭೇಟಿಯ ವೇಳೆ ಉಪ ಸಚಿವ ಟೋಬಿಯಾಸ್ ಗೊಟ್ಹಾರ್ಟ್ ಅವರು ಹೈಕಲ್ನ ಉತ್ಪಾದನಾ ಘಟಕ, ವಿನ್ಯಾಸ ಕೇಂದ್ರ ಹಾಗೂ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ, ಎಂಜಿನಿಯರಿಂಗ್ ಪರಿಣತಿ ಮತ್ತು ಏರೋಸ್ಪೇಸ್ ಹಾಗೂ ರಕ್ಷಣಾ ಕ್ಷೇತ್ರದಲ್ಲಿನ ತಾಂತ್ರಿಕ ನವೀನತೆಗಳನ್ನು ಸಮೀಪದಿಂದಲೇ ಅವಲೋಕಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬವೇರಿಯಾ ಆರ್ಥಿಕ ವ್ಯವಹಾರಗಳು, ಪ್ರಾದೇಶಿಕ ಅಭಿವೃದ್ಧಿ ಮತ್ತು ಇಂಧನ ಸಚಿವಾಲಯದ ಉಪ ಸಚಿವ ಟೋಬಿಯಾಸ್ ಗೊಟ್ಹಾರ್ಟ್, “ಬೆಂಗಳೂರಿನ ಹೈಕಲ್ ಟೆಕ್ನಾಲಜೀಸ್ಗೆ ಭೇಟಿ ನೀಡಿ ಸಂಸ್ಥೆಯ ಅತ್ಯುತ್ತಮ ಉತ್ಪಾದನಾ ಸಾಮರ್ಥ್ಯ, ವಿನ್ಯಾಸ ಪರಿಣತಿ ಹಾಗೂ ಸಂಶೋಧನಾ ಶ್ರೇಷ್ಠತೆಯನ್ನು ನೇರವಾಗಿ ನೋಡುವ ಅವಕಾಶ ದೊರೆತಿರುವುದು ಸಂತಸದ ಸಂಗತಿ. ಬವೇರಿಯಾ ಮತ್ತು ಭಾರತವು ಪರಸ್ಪರ ನಂಬಿಕೆ, ನವೀನತೆ ಹಾಗೂ ಮುಕ್ತ ಸಹಕಾರದ ಆಧಾರದ ಮೇಲೆ ದೀರ್ಘಕಾಲದ ಬಾಂಧವ್ಯ ಹೊಂದಿವೆ.
ಬಾಹ್ಯಾಕಾಶ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳು ಈಗ ಹೆಚ್ಚು ಕಾರ್ಯತಂತ್ರದ ಮಹತ್ವ ಪಡೆದಿರುವ ಹಿನ್ನೆಲೆಯಲ್ಲಿ, ಎರಡೂ ದೇಶಗಳ ಕೈಗಾರಿಕೆಗಳ ನಡುವೆ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು, ಸ್ಥಿರ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ವ್ಯಾಪಾರದ ಮನೋಭಾವ ದೊಂದಿಗೆ ಹೊಸ ಸಹಭಾಗಿತ್ವಗಳನ್ನು ರೂಪಿಸಲು ಉತ್ತಮ ಅವಕಾಶ ಗಳಿವೆ,” ಎಂದು ಹೇಳಿದರು.
ಹೈಕಲ್ ಟೆಕ್ನಾಲಜೀಸ್ನ ವ್ಯವಸ್ಥಾಪಕ ನಿರ್ದೇಶಕ ಯಶಸ್ ಜೈವೀರ್ ಮಾತನಾಡಿ, “ಗೌರವಾನ್ವಿತ ಉಪ ಸಚಿವರನ್ನು ನಮ್ಮ ಘಟಕದಲ್ಲಿ ಆತಿಥ್ಯ ವಹಿಸಿರುವುದು ಹೈಕಲ್ಗೆ ಮಾತ್ರವಲ್ಲ, ಭಾರತದ ಏರೋಸ್ಪೇಸ್ ಉತ್ಪಾದನಾ ವಲಯಕ್ಕೂ ಹೆಮ್ಮೆಯ ಕ್ಷಣವಾಗಿದೆ. ಈ ವರ್ಷದ ಆರಂಭದಲ್ಲಿ ಮ್ಯೂನಿಕ್ನಲ್ಲಿ ನಡೆದ ಭಾರತ–ಜರ್ಮನಿ ರಕ್ಷಣಾ ಕೈಗಾರಿಕಾ ದುಂಡುಮೇಜಿನ ಸಭೆಯಲ್ಲಿ ಉಭಯ ದೇಶಗಳ ಹಿರಿಯ ಕೈಗಾರಿಕಾ ಹಾಗೂ ಸರ್ಕಾರಿ ಪ್ರತಿನಿಧಿಗಳೊಂದಿಗೆ ಭಾಗವಹಿಸುವ ಅವಕಾಶ ನನಗೆ ದೊರಕಿತ್ತು.
ಇಂದು ಶ್ರೀ ಟೋಬಿಯಾಸ್ ಗೊಟ್ಹಾರ್ಟ್ ಅವರ ಭೇಟಿ ಆ ಸಂವಾದವನ್ನು ನಮ್ಮ ಉತ್ಪಾದನಾ ಘಟಕದ ಮಟ್ಟಕ್ಕೆ ತಂದಿದೆ. ಭಾರತದ ಏರೋಸ್ಪೇಸ್ ಕ್ಷೇತ್ರದ ವಿಶ್ವಾಸಾರ್ಹತೆ ಪ್ರತಿಯೊಂದು ಗುಣಮಟ್ಟದ ಘಟಕ, ಪ್ರತಿಯೊಂದು ಕಟ್ಟುನಿಟ್ಟಿನ ಪರಿಶೀಲನೆ ಹಾಗೂ ಪ್ರತಿಯೊಂದು ವಿಶ್ವಾಸಾರ್ಹ ಸಹಭಾಗಿತ್ವದ ಮೂಲಕ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ನಮ್ಮದು. ಬವೇರಿಯಾ ಸೇರಿದಂತೆ ಜಾಗತಿಕ ಮೂಲ ಉಪಕರಣ ತಯಾರಕರಿಗೆ (ಒಇಎಂ) ದೀರ್ಘಾವಧಿಗೆ ವಿಶ್ವಾಸಾರ್ಹ ಪೂರೈಕೆದಾರರಾಗಿರುವ ಬದ್ಧತೆ ನಮ್ಮದಾಗಿದೆ,” ಎಂದು ಹೇಳಿದರು.
ಹೈಕಲ್ ಟೆಕ್ನಾಲಜೀಸ್ ಕುರಿತು: ಬೆಂಗಳೂರು ಮೂಲದ ಹೈಕಲ್ ಟೆಕ್ನಾಲಜೀಸ್ ಸಂಸ್ಥೆಯು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಕ್ಕೆ ಉನ್ನತ ನಿಖರತೆಯ ಎಲೆಕ್ಟ್ರೋ-ಮೆಕ್ಯಾನಿಕಲ್ ವ್ಯವಸ್ಥೆಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದೆ. ಜಾಗತಿಕ ಮಟ್ಟದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಮೂಲ ಉಪಕರಣ ತಯಾರಕರಿಗೆ ವಿಶ್ವಾಸಾರ್ಹ ಪೂರೈಕೆದಾರವಾಗಿರುವ ಹೈಕಲ್, ವಿಶ್ವದರ್ಜೆಯ ಎಂಜಿನಿಯರಿಂಗ್ ಸಾಮರ್ಥ್ಯ, ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಗೆ ವಿಶೇಷ ಆದ್ಯತೆ ನೀಡುತ್ತದೆ. ಭಾರತದ ಬೆಳೆಯುತ್ತಿರುವ ಏರೋಸ್ಪೇಸ್ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸ್ಥೆಯು, ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯ ಸಾಕಾರಕ್ಕೂ ತನ್ನ ಕೊಡುಗೆ ನೀಡುತ್ತಿದೆ.