ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ನಾಳೆಯಿಂದ (ಫೆ.9) ಟಿಕೆಟ್ ದರ ಹೆಚ್ಚಳವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿತ್ತು. ಆದರೆ, ಇದೀಗ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದ್ದು, ಈ ಬಗ್ಗೆ ಬಿಎಂಆರ್ಸಿಎಲ್ ಮಾಹಿತಿ ನೀಡಿದೆ. ದರ ಏರಿಕೆ (Bengaluru Metro Fare Hike) ಮಾಡದಂತೆ ಬಿಎಂಆರ್ಸಿಎಲ್ ಎಂಡಿಗೆ ಕೇಂದ್ರದಿಂದ ಇ-ಮೇಲ್ ಸಂದೇಶ ರವಾನೆಯಾದ ಬೆನ್ನಲ್ಲೇ ದರ ಏರಿಕೆಗೆ ಬ್ರೇಕ್ ಬಿದ್ದಿದೆ.
ನಾಳೆಯಿಂದ ದರ ಏರಿಕೆಯಾಗಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು. ಆದರೆ, ಬಿಎಂಆರ್ಸಿಯಲ್ ಎಂಡಿ ರವಿಶಂಕರ್ ಅವರು ನಮಗೆ ಲಿಖಿತ ಸೂಚನೆ ಬಂದಿಲ್ಲ. ಹೀಗಾಗಿ ಪರಿಷ್ಕೃತ ದರ ನಾಳೆಯಿಂದ ಜಾರಿಯಾಗಲಿದೆ ಎಂದು ತಿಳಿಸಿದ್ದರು. ಇದರ ನಡುವೆ ಬಿಎಂಆರ್ಸಿಯಲ್ಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಬಂದಿದೆ. ಹಾಗಾಗಿ ಬಿಎಂಆರ್ಸಿಯಲ್ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.
ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ಏನಿದೆ?
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸುವುದೇನೆಂದರೆ, ಫೆಬ್ರವರಿ 5ರಂದು ಪ್ರಕಟಿಸಿದ್ದ ಮಾಧ್ಯಮ ಪ್ರಕಟಣೆಯಲ್ಲಿ ಫೆ. 9ರಿಂದ ವಾರ್ಷಿಕ ಸ್ವಯಂಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೆ ಈ ನಿರ್ಧಾರವನ್ನು ಮುಂದಿನ ಆದೇಶದ ತನಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಪ್ರಕಟಿಸಲಾಗುವುದು. ಬಿಎಂಆರ್ಸಿಎಲ್ ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಗಸ್ತ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ನಿಗಮ ತಿಳಿಸಿದೆ.
ಸಂಸದ ತೇಜಸ್ವಿ ಸೂರ್ಯ ಅವರ ಫೇಸ್ಬುಕ್ ಪೋಸ್ಟ್
ಕೇಂದ್ರ ಸರ್ಕಾರಕ್ಕೆ ತೇಜಸ್ವಿ ಸೂರ್ಯ ಧನ್ಯವಾದ
ನೀಡಿದ ಭರವಸೆಯಂತೆ, ನಾಳೆಯಿಂದ ಪ್ರಸ್ತಾಪಿತ ಮೆಟ್ರೋ ದರ ಹೆಚ್ಚಳವನ್ನು BMRCL ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಅನ್ಯಾಯಕರ ಹೆಚ್ಚಳವನ್ನು ನಿರಂತರವಾಗಿ ವಿರೋಧಿಸಿದ ಬೆಂಗಳೂರು ಜನತೆಗೆ ಇದು ಒಂದು ಜಯವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಮೆಟ್ರೋ ದರ ಹೆಚ್ಚಳಕ್ಕೆ ತಾತ್ಕಾಲಿಕ ತಡೆ ನೀಡಿರುವ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರದ ಜನವಿರೋಧಿ ಪ್ರಸ್ತಾಪವನ್ನು ತಡೆಯಲು ಸಮಯೋಚಿತವಾಗಿ ಹಸ್ತಕ್ಷೇಪ ಮಾಡಿದ ಮಾನ್ಯ ನಗರ ವ್ಯವಹಾರಗಳ ಸಚಿವ ಶ್ರೀ ಖಟ್ಟರ್ ಜೀ ಹಾಗೂ ಭಾರತ ಸರ್ಕಾರಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಇದು ಕೇವಲ ತಾತ್ಕಾಲಿಕ ಪರಿಹಾರ ಮಾತ್ರ. ಹಿಂದಿನ ಸರ್ಕಾರಗಳು ಮಾಡಿದಂತೆ ರಾಜ್ಯ ಸರ್ಕಾರವು ಮೆಟ್ರೋಗೆ ಶ್ಯಾಡೋ ಕ್ಯಾಶ್ ಸಹಾಯವನ್ನು ಪುನಃ ನೀಡಬೇಕು ಮತ್ತು ನ್ಯಾಯಸಮ್ಮತ, ವೈಜ್ಞಾನಿಕ ಹಾಗೂ ಪಾರದರ್ಶಕ ಭಾಡಿ ಪರಿಷ್ಕರಣೆಗೆ ಹೊಸ ದರ ನಿಗದಿ ಸಮಿತಿಯನ್ನು ಪುನರ್ ರಚಿಸಲು ಮುಂದಾಗಬೇಕು.
ಪಾಪ ಆತನಿಗೆ ಅನುಭವ ಕಡಿಮೆ; ಮೆಟ್ರೋ ದರ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯಗೆ ಡಿ.ಕೆ. ಶಿವಕುಮಾರ್ ತಿರುಗೇಟು
ಭಾರೀ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನಲ್ಲಿ ಕೈಗೆಟುಕುವ ಸಾರ್ವಜನಿಕ ಸಾರಿಗೆಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸಂಸದ ತಿಳಿಸಿದ್ದಾರೆ.