ಮೈಸೂರು, ಜು.2: ಡಿ.ಕೆ. ಶಿವಕುಮಾರ್ ಅವರು (CM DK Shivakumar) ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಬಹಳ ಆತುರಾತುರವಾಗಿ ಬಿಡದಿ ಟೌನ್ಶಿಪ್ ವಿಚಾರದಲ್ಲಿ ರೈತರ ಮೇಲೆ ದಬ್ಬಾಳಿಕೆ ಮಾಡುವಂಥ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ಗುರುವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ನಾನು, ನಮ್ಮ ವಿಪಕ್ಷ ನಾಯಕರು ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ. ಒಂದು ಕಡೆ ಸರ್ಕಾರವು ಶೇ. 80ರಷ್ಟು ರೈತರು ಬಿಡದಿ ಟೌನ್ಶಿಪ್ಗೆ ಅನುಮತಿ ಕೊಟ್ಟಿದ್ದಾರೆಂದು ಹೇಳುತ್ತಿದೆ. ಆದರೆ, ವಾಸ್ತವಿಕವಾಗಿ ಶೇ. 70-80 ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಪೂರಕವಾದ ಜಮೀನನ್ನು ಕಸಿದುಕೊಳ್ಳಲು ಹೊರಟಿದ್ದಾರೆ ಎಂದು ದೂರಿದ ಅವರು, ರೈತರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಮುಖ್ಯಮಂತ್ರಿಗಳು ದಬ್ಬಾಳಿಕೆ ಮಾಡುವುದನ್ನು ಬಿಟ್ಟು ರೈತರ ಜತೆ ಸಮಾಲೋಚನೆ ಮಾಡಬೇಕು. ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈಹಾಕಬಾರದು ಎಂದು ಒತ್ತಾಯಿಸಿದರು.
ಇದರ ಕುರಿತು ಸದನದಲ್ಲಿ ನಿಶ್ಚಿತವಾಗಿ ಚರ್ಚೆ ಆಗಲಿದೆ. ಸರ್ಕಾರ ತಾನು ಮಾಡಿದ್ದೇ ಸರಿ ಎಂಬ ಧೋರಣೆ ಅನುಸರಿಸುತ್ತಿದೆ. ಇದರ ಕುರಿತು ಸಮಗ್ರ ಚರ್ಚೆ ಮಾಡಲಿದ್ದೇವೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಒಂದೆಡೆ ಎಸ್ಐಆರ್ ನಡೆಯುತ್ತಿದೆ. ಇನ್ನೊಂದು ಕಡೆ ಗೃಹಲಕ್ಷ್ಮಿ ಹಗರಣದ ಕುರಿತು ಹೋರಾಟ ಕೈಗೆತ್ತಿಕೊಳ್ಳಲು ಮುಂದಾಗಿದ್ದೇವೆ. ರೈತರ ಪರ ಹೋರಾಟ ರೂಪಿಸುತ್ತಿದ್ದೇವೆ ಎಂದು ಹೇಳಿದರು. ಅಡ್ಡ ಮತದಾನದ ಗೊಂದಲ ಎಲ್ಲ ಮುಕ್ತಾಯವಾಗಿವೆ. ಅದು ಮುಗಿದ ಅಧ್ಯಾಯ ಎಂದರು.
ಸದಾನಂದಗೌಡರೇ ಹೇಳಿದ್ದಾರೆ
ಡಿ.ವಿ. ಸದಾನಂದ ಗೌಡರ ಆಡಿಯೋ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಆಡಿಯೋದಲ್ಲಿರುವುದು ನನ್ನ ಧ್ವನಿ ಅಲ್ಲ ಎಂದು ಸ್ವತಃ ಸದಾನಂದ ಗೌಡರೇ ಹೇಳಿಕೆ ನೀಡಿದ್ದಾರೆ. ಎಲ್ಲವನ್ನು ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಪಕ್ಷದಲ್ಲಿನ ಕೆಲವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಶ್ವನಾಥ್ ಅವರೊಂದಿಗೆ ಸಹ ಮಾತನಾಡಿದ್ದಾರೆ. ಇಂತಹ ಎಲ್ಲ ಬಿಕ್ಕಟ್ಟುಗಳ ನಡುವೆ ಕಾರ್ಯಕರ್ತರಿಗೆ ಧೈರ್ಯ ತುಂಬಿ ಸಂಘಟನೆಯ ಕೆಲಸ ಮಾಡುತ್ತಿರುತ್ತೇವೆ ಎಂದು ಹೇಳಿದರು.