ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ಸ್ನ ಚೇರ್ಮನ್ ಸಿ.ಜೆ ರಾಯ್ (C.J. Roy) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಇವರು ಸಮಾಜ ಸೇವೆಯ ಮೂಲಕ ಕೂಡ ಗುರುತಿಸಿಕೊಂಡಿದ್ದರು. ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದ್ದರು. ಇನ್ನು ಇವರ ಬಳಿ ಕೋಟ್ಯಂತರ ಆಸ್ತಿ, ಐಷಾರಾಮಿ ಕಾರುಗಳು ಇದ್ದರೂ ಕೂಡ, ಮಾರಾಟವಾಗಿದ್ದ ತಮ್ಮ ಮೊದಲ ಕಾರನ್ನು (Maruti 800) ಹುಡುಕಿ ಮರು ಖರೀದಿಸುವ ಮೂಲಕ ಗಮನ ಸೆಳೆದಿದ್ದರು.
ಕಾರು ಹುಡುಕಿ ಕೊಟ್ಟವರಿಗೆ 10 ಲಕ್ಷ ಬಹುಮಾನ!
ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ಸಿ.ಜೆ ರಾಯ್ ಅವರು ಹಲವು ಐಷಾರಾಮಿ, ದುಬಾರಿ ಕಾರುಗಳನ್ನು ಹೊಂದಿದ್ದರು. ಇವರ ಬಳಿ 12 ರೋಲ್ಸ್ ರಾಯ್, ಬುಗಾಟಿ, ಬೆಂಟ್ಲಿ ಸೇರಿ ಹತ್ತು ಹಲವು ಕಾರುಗಳು ಇವೆ. ಇಷ್ಟೆಲ್ಲಾ ಕಾರುಗಳು ಇದ್ದರೂ ಸಿ.ಜೆ ರಾಯ್ ಅವರು ತಮ್ಮ ಮೊದಲ ಕಾರನ್ನು ಹುಡುಕಿ ಮರು ಖರೀದಿಸಿದ್ದರು. ಕಾರನ್ನು ಹುಡುಕಲು ಸಹಾಯ ಮಾಡಿದ್ದ ವ್ಯಕ್ತಿಗಳಿಗೆ 10 ಲಕ್ಷ ಬಹುಮಾನ ಕೊಟ್ಟಿದ್ದರು.
ರಾಯ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಅಂದದರೆ ಸುಮಾರು 25 ವರ್ಷ ವಯಸ್ಸಿನಲ್ಲಿರುವಾಗ ಮಾರುತಿ 800 ಕಾರನ್ನು ಖರೀದಿಸಿದ್ದರು. ಒಂದು ಸಮಯದಲ್ಲಿ ಮನಸ್ಸು ಇಲ್ಲದ್ದಿದ್ದರೂ ಮಾರಾಟ ಮಾಡಿದ್ದರು. ಆದರೆ ಇತ್ತೀಚಿಗೆ ಆ ಕಾರನ್ನು ಮತ್ತೆ ಪಡೆಯಲು ರಾಯ್ ಅವರು ನಿರ್ಧರಿಸಿದ್ದರು. ಕಾರಿನ ಸಂಖ್ಯೆ ಮತ್ತು ಹಳೆ ದಾಖಲೆಗಳ ಮೂಲಕ ಮತ್ತೆ ಕಾರನ್ನು ಪತ್ತೆ ಮಾಡಿಸಿದ್ದರು. ಕಾರನ್ನು ಪತ್ತೆ ಮಾಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡಿದ್ದರು. ಈ ಬಗ್ಗೆ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
1.10 ಲಕ್ಷ ರೂ.ಗೆ ಖರೀದಿಸಿದ್ದ ಕಾರು
ಮಾರುತಿ ಕಾರು ಮರು ಖರೀದಿ ಮಾಡಿದಾಗ ಪ್ರತಿಕ್ರಿಯಿಸಿದ್ದ ಸಿಜೆ ರಾಯ್ ಅವರು, ಈ ಮಾರುತಿ 800 ಅನ್ನು ನಾನು 1994 ರಲ್ಲಿ 25 ವರ್ಷದವನಿದ್ದಾಗ ನನ್ನ ಸ್ವಂತ ಸಂಪಾದನೆಯಿಂದ ಖರೀದಿಸಿದ್ದೆ. 31 ವರ್ಷಗಳ ಹಿಂದೆ ಮಾರುತಿ 800 ಭಾರತದಲ್ಲಿ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿತ್ತು. ನಾನು ಅದನ್ನು 1.10 ಲಕ್ಷ ರೂ.ಗೆ ಖರೀದಿಸಿದೆ, 1994 ರಲ್ಲಿ ಅದೇ ಮೊತ್ತದ ಹಣವು ನನಗೆ ಸರ್ಜಾಪುರದಲ್ಲಿ 2 ಎಕರೆ ಭೂಮಿ ಸಿಗುತ್ತಿತ್ತು. ಇಂದು ಸರ್ಜಾಪುರದ 2 ಎಕರೆ ಭೂಮಿ 20 ಕೋಟಿ ರೂ.ಗೂ ಹೆಚ್ಚು ಮೌಲ್ಯದ್ದಾಗಿದೆ.
ಆದ್ದರಿಂದ ಈ ಕಥೆಯ ನೀತಿ ಏನೆಂದರೆ, ಕಾರು ಖರೀದಿಸಿ, ಅದರ ಜತೆಗೆ ಒಂದು ಸಣ್ಣ ತುಂಡು ಭೂಮಿಯನ್ನು ಸಹ ಖರೀದಿಸಿ. ಭೂಮಿಯು ಕುಟುಂಬದ ಸಂಪತ್ತಾಗುತ್ತದೆ ಎಂದು ಹೇಳಿದ್ದರು.
ಸಿಜೆ ರಾಯ್ ಅವರು 1997ರಲ್ಲಿ ಈ ಮಾರುತಿ 800 ಕಾರನ್ನು ಮಾರಾಟ ಮಾಡಿದ್ದರು. ಅದೇ ವರ್ಷ ಮಾರುತಿ ಎಸ್ಟೀಮ್ ಅನ್ನು ಖರೀದಿಸಿದರು, ಅದು ಭಾರತೀಯ ರಸ್ತೆಗಳಲ್ಲಿ ಅತ್ಯಂತ ದುಬಾರಿ ಮತ್ತು ಅತ್ಯುತ್ತಮ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಾನು ಯಾವಾಗಲೂ ಕಾರು ಪ್ರಿಯನಾಗಿದ್ದೇನೆ ಎಂದು ತಿಳಿಸಿದ್ದರು.
ಮಕ್ಕಳ ವಿದ್ಯಾಭ್ಯಾಸಕ್ಕೆ 1 ಕೋಟಿ ನೆರವು
ಉದ್ಯಮಿ ಸಿ.ಜೆ ರಾಯ್ ಅವರು ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿದ್ದರು. ಬಿಗ್ ಬಾಸ್ 11ರ ಸಿಸನ್ ವಿನ್ನರ್ ಹನುಮಂತುಗೆ 50 ಲಕ್ಷ ರೂ. ನೀಡಿದ್ದರು, ಇದಷ್ಟೇ ಅಲ್ಲದೇ 1 ಕೋಟಿ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದರು. ಪರೀಕ್ಷೆಯಲ್ಲಿ 80 ಪರ್ಸೆಂಟ್ ಮಾರ್ಕ್ ಪಡೆದಿದ್ದ 201 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಈ ಹಣವನ್ನು ಮೀಸಲಿಟ್ಟಿದ್ದರು.