ಬೆಂಗಳೂರು: ನಗರದ ಖಾಲಿ ನಿವೇಶನಗಳನ್ನು ಮಾಲೀಕರೇ ಸ್ವತಃ ಸ್ವಚ್ಛಗೊಳಿಸಿಕೊಂಡು ಪಾಲಿಕೆ ಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲು ತಗಲುವ ಹೆಚ್ಚಿನ ವೆಚ್ಚದಿಂದ ತಪ್ಪಿಸಿಕೊಳ್ಳಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ(Minister Krishna ByreGowda) ಮನವಿ ಮಾಡಿದ್ದಾರೆ.
ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ ದಡಿ ಖಾಲಿ ನಿವೇಶನ ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಲೀಕ ರಿಗೆ ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರಿನಲ್ಲಿ ಪಾಲಿಕೆಯಿಂದ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿ, ಜುಲೈ 15ರಿಂದ ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿನ ಸಿಡಿ ತ್ಯಾಜ್ಯ ಹಾಗೂ ಗಿಡ-ಗಂಟಿಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ.
ಖಾಸಗಿ ಖಾಲಿ ನಿವೇಶನಗಳ ಮಾಲೀಕರಿಗೆ ಮೊದಲು ಆಗ 15ರವರೆಗೆ ಹಾಗೂ ಬಳಿಕ ಆಗ 22ರವರೆಗೆ ಸ್ವಚ್ಛಗೊಳಿಸಲು ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸುಮಾರು ಶೇ.30ರಷ್ಟು ಮಾಲೀಕರು ತಮ್ಮ ನಿವೇಶನ ಸ್ವಚ್ಛಗೊಳಿಸಿಕೊಂಡಿದ್ದಾರೆ. ಉಳಿದ ಶೇ.70ರಷ್ಟು ನಿವೇಶನಗಳ ಸ್ವಚ್ಛತಾ ಕಾರ್ಯ ಗುರುವಾರದಿಂದ ಪಾಲಿಕೆಯೇ ಕೈಗೊಳ್ಳಲಿದೆ.
ಪಾಲಿಕೆಯಿಂದ ಸ್ವಚ್ಛಗೊಳಿಸುವ ನಿವೇಶನಗಳಿಗೆ ತಗಲುವ ವೆಚ್ಚ ಸಂಬಂಧ ಪಟ್ಟ ಮಾಲೀಕರ ಆಸ್ತಿ ತೆರಿಗೆಯ ಮೂಲಕ ವಸೂಲಿ ಮಾಡಲಾಗುವುದು. ಆದ್ದರಿಂದ ಮಾಲೀಕರು ತಾವೇ ನಿವೇಶನ ಸ್ವಚ್ಛಗೊಳಿಸಿಕೊಂಡರೆ ಕಡಿಮೆ ವೆಚ್ಚದಲ್ಲಿ ಕಾರ್ಯ ಪೂರ್ಣಗೊಳಿಸಬಹುದು ಎಂದರು.