ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಶುಕ್ರವಾರ ನಡೆಯಲಿದೆ. ಸೆಷನ್ಸ್ ಕೋರ್ಟ್ನಲ್ಲಿ ಕೇಸ್ ವಿಚಾರಣೆ ವಿಳಂಬವಾಗುತ್ತಿದೆ. 273 ಸಾಕ್ಷ್ಯಗಳ ಪೈಕಿ ಈತನಕ 10 ಮಂದಿಯ ವಿಚಾರಣೆಯನ್ನೂ ಮುಗಿಸಿಲ್ಲ. ತಾವು ಜೈಲು ಸೇರಿ ಈಗಾಗಲೇ 8 ತಿಂಗಳು ಆಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಕೋರಿ ಪೀಠದ ಮುಂದೆ ದರ್ಶನ್ ಮನವಿ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ಗೆ ಬೆಂಗಳೂರು ಪೊಲೀಸರು ಎರಡು ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಕೇಸ್ನ ವಿಚಾರಣೆ ವಿಳಂಬ ಯಾರಿಂದಾಯ್ತು? ಎಂಬ ಬಗ್ಗೆ ಉಲ್ಲೇಖಿಸಿದ್ದಾರೆ. ಜತೆಗೆ ಜೈಲಿನಲ್ಲಿ ಕನಿಷ್ಠ ಮಟ್ಟದ ಸೌಲಭ್ಯವೂ ನೀಡುತ್ತಿಲ್ಲ ಎಂಬ ದರ್ಶನ್ ಆರೋಪದ ಕುರಿತೂ ಪೊಲೀಸರು ಅಫಿಡವಿಟ್ನಲ್ಲಿ ಮಾಹಿತಿ ತಿಳಿಸಿದ್ದಾರೆ.
ಕಳೆದ ವಾರವೇ ದರ್ಶನ್ ಅರ್ಜಿ ಸಲ್ಲಿಸಿದ್ದು, ನ್ಯಾಯಪೀಠ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತ್ತು. ಈ ಸಂಬಂಧ ಸೆಷನ್ಸ್ ನ್ಯಾಯಾಲಯ, ಕಾರಾಗೃಹ ಇಲಾಖೆಗೆ ನೊಟೀಸ್ ನೀಡಿ, ವರದಿ ಸಲ್ಲಿಸುವಂತೆ ಸೂಚಿಸಿತ್ತು. ಇನ್ನು ಕ್ವಾರಂಟೈನ್ ಸೆಲ್ನಲ್ಲಿ ತನ್ನನ್ನು ಇಟ್ಟಿದ್ದು, ಕನಿಷ್ಠ ಮಟ್ಟದ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಆರೋಪಿಸಿದ್ದು, ಈ ಬಗ್ಗೆಯೂ ಜೈಲು ಅಧಿಕಾರಿಗಳು ಅಫಿಡವಿಟ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದ ವಿಚಾರಣೆ ಶುಕ್ರವಾರಕ್ಕೆ ನಿಗದಿಯಾಗಿದೆ.
ಮತ್ತೊಂದೆಡೆ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬೇಗ ಜೈಲಿನಿಂದ ಬಿಡುಗಡೆಯಾಗಿ ಸಿನಿಮಾ ಜಗತ್ತಿಗೆ ಮರಳಬೇಕು ಎಂದು ಕಾಯುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಕುಟುಂಬದವರು ನಿಯಮಿತವಾಗಿ ಜೈಲಿಗೆ ಭೇಟಿ ನೀಡಿ ದರ್ಶನ್ ಅವರಿಗೆ ಧೈರ್ಯ ತುಂಬುತ್ತಿದ್ದಾರೆ.
ದರ್ಶನ್ಗೆ ಪರಪ್ಪನ ಅಗ್ರಹಾರದಲ್ಲಿ ಸಹ ಕೈದಿಗಳಿಂದ ನಿಂದನೆ, ಬೆದರಿಕೆ! ಜಾಮೀನು ಅರ್ಜಿಯಲ್ಲಿ ನೋವು ತೋಡಿಕೊಂಡ ದಾಸ
ಈ ಹಿಂದೆ ಪ್ರಕರಣದ ಎ1 ಪವಿತ್ರಾ ಗೌಡ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಕೇಳಿದ್ದರೂ ಅರ್ಜಿ ತಿರಸ್ಕೃತವಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ಗೆ ಜಾಮೀನು ಸಿಗುವುದು ಸುಲಭವಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಚಿತ್ರರಂಗ ಮತ್ತು ದರ್ಶನ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.