ಕಾನೂನು ತಜ್ಞರೊಂದಿಗೆ ಸಭೆ, ಬಳಿಕ ಹೈಕಮಾಂಡ್ ಜತೆ ಚರ್ಚೆ ಸಾಧ್ಯತೆ
ಬೆಂಗಳೂರು: ಗುರುವಾರವಷ್ಟೇ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಪುನಃ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಭಾನುವಾರ ತಡರಾತ್ರಿ ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎನ್ನಲಾಗಿದೆ. ಸಚಿವ ನಾಗೇಂದ್ರ ರಾಜೀನಾಮೆಯ ಬಳಿಕ ಆ ಸ್ಥಾನವನ್ನು ಯಾರಿಗೆ ನೀಡಬೇಕು ಎನ್ನುವ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ನಾಗೇಂದ್ರ ಅವರ ಸಚಿವ ಸ್ಥಾನವನ್ನು ಅದೇ ಜಿಲ್ಲೆಯ, ಅದೇ ಸಮುದಾಯದ ಅನ್ನ ಪೂರ್ಣ ತುಕಾರಾಂ ಅವರಿಗೆ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ ಬಾಕಿಯಿರುವ ಇನ್ನೊಂದು ಸ್ಥಾನವನ್ನು ಯಾರಿಗೆ ನೀಡ ಬೇಕು ಎನ್ನುವ ಬಗ್ಗೆ ಭಾನುವಾರ ತಡರಾತ್ರಿ ಅಂತಿಮ ವಾಗಲಿದೆ ಎನ್ನಲಾಗಿದೆ.
ಈ ಒಂದು ಸ್ಥಾನದ ಮೇಲೆ ಹಲವು ಹಿರಿಯ ಶಾಸಕರು ಕಣ್ಣಿಟ್ಟಿದ್ದಾರೆ. ಅದರಲ್ಲಿಯೂ ತಮ್ಮ ಆಪ್ತ ಬಸವರಾಜ್ ಶಿವಣ್ಣ ನವರ್ ಅವರಿಗೆ ಸಿಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಎರಡನೇ ಹಂತದ ವಿಸ್ತರಣೆ ವೇಳೆ ಶಿವಣ್ಣ ನವರ್ ಹೆಸರು ಪರಿಗಣಿಸಿಲ್ಲ ಎನ್ನುವ ಕಾರಣಕ್ಕೆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಕಾನೂನು ತಜ್ಞರೊಂದಿಗೆ ಸಭೆ ಭಾನುವಾರ ದೆಹಲಿಗೆ ತೆರಳಿರುವ ಡಿ.ಕೆ.ಶಿವಕುಮಾರ್, ಪಕ್ಷದ ಹೈಕಮಾಂಡ್ ನಾಯಕ ರೊಂದಿಗೆ ಚರ್ಚಿಸುವ ಮೊದಲು ಸುಪ್ರೀಂಕೋರ್ಟ್ನಲ್ಲಿ ಬಾಕಿಯಿರುವ ರಾಜ್ಯದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ್ದಾರೆ. ಪ್ರಕರಣಗಳ ಶೀಘ್ರ ವಿಲೇವಾರಿ, ನೀರಾವರಿ ಯೋಜನೆಗಳ ವಿಷಯದಲ್ಲಿ ಕರ್ನಾಟಕದ ಅರ್ಜಿಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.