ಬೆಂಗಳೂರು: ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದ ಆಶ್ರ ಯದಲ್ಲಿ ಬೆಂಗಳೂರಿನ ಗಾಂಧಿನಗರದ ಶಾಖೆಯಿಂದ ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಸರ್ವೈಕಲ್ ಕ್ಯಾನ್ಸರ್ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದ ಲಕ್ಷ್ಮೀ ಬೋಹ್ರಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಸಾಮಾನ್ಯರಿಗೆ ಅನುಕೂಲವಾಗುವ ಈ ಕಾರ್ಯ ಕ್ರಮ ಮತ್ತಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಫೆ.4 ರಂದು ಈ ಶಿಬಿರ ಆಯೋಜಿಸಲಾಗಿದೆ. 21 ರಿಂದ 65 ವಯೋಮಿತಿಯವರಿಗೆ ಈ ಅಭಿಯಾನ ನಡೆಯುತ್ತಿದ್ದು, ಬೆಂಗಳೂರು ನಗರದ ಜನತೆ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: Vinayaka V Bhat Column: ಸಂಗಮದ ಮಾಘಮೇಳದಲ್ಲೊಂದು ಪಲ್ಲಕ್ಕಿ ಪ್ರಹಸನ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಶಿಬಿರ ಉದ್ಘಾಟಿಸಲಿದ್ದು, ಚಿತ್ರನಟಿ ಸಂಜನಾ ಗುರ್ಲಾನಿ ಈ ಕಾರ್ಯಕ್ರಮದ ರಾಯಭಾರಿಯಾಗಿದ್ದಾರೆ. ಒಟ್ಟು 20 ಆಸ್ಪತ್ರೆ ಗಳಲ್ಲಿ ಉಚಿತ ಚಿಕಿತ್ಸೆ, ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಉದ್ಯೋಗಸ್ಥ ಮಹಿಳೆರಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಅವರಿಗಾಗಿ ಈ ಅಭಿಯಾನ ಹಮ್ಮಿಕೊಳ್ಳ ಲಾಗಿದೆ.
ಸರಳ, ಸುರಕ್ಷಿತ ಮತ್ತು ನೋವು ರಹಿತವಾದ ಪರೀಕ್ಷೆ ಇದಾಗಿದ್ದು, ಸ್ಥಳದಲ್ಲಿಯೇ ತಪಾಸಣೆ ನಡೆಯಲಿದೆ. ಇತ್ತೀಚೆಗೆ ಸರ್ವೈಕಲ್ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಇದಕ್ಕೆ ವಿಶೇಷ ಲಸಿಕಾ ಅಭಿಯಾನವನ್ನು ಸಹ ಆರಂಭಿಸಿದೆ. ರೋಗವನ್ನು ತಡೆಗಟ್ಟುವ ಜೊತೆಗೆ ಸಮಸ್ಯೆ ಇರುವವರಿಗೆ ಚಿಕಿತ್ಸೆ ದೊರಕಿಸಿಕೊಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ವಿಜೇತ ಜೈನ್, ಸಂಚಾಲಕರಾದ ಇಂದು ಕಿನ್ವೇಸರ, ನೀತಾ ಗೋಡಿಯಾ ಮತ್ತಿತರರು ಉಪಸ್ಥಿತರಿದ್ದರು.