ಬೆಂಗಳೂರು, ಅ.10: ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಶುಕ್ರವಾರ (ಅ. 10) ಕತ್ತಲಾಗುತ್ತಿದ್ದಂತೆ ಮಳೆ ಆರಂಭವಾಗಿದೆ. 10 ಗಂಟೆ ಬಳಿಕ ಬಹುತೇಕ ಎಲ್ಲ ಕಡೆ ಭಾರಿ ಮಳೆಯಾಗುತ್ತಿದೆ (Bengaluru Rain). ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಚಾಮರಾಜಪೇಟೆ, ಕಾರ್ಪೋರೇಷನ್, ಲಾಲ್ಬಾಗ್, ರಿಚ್ಮಂಡ್ ಟೌನ್, ರಾಜರಾಜೇಶ್ವರಿ ನಗರ ಸೇರಿದಂತೆ ಪ್ರಮುಖ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹೊರವಲಯಗಳಲ್ಲೂ ಗುಡುಗು ಸಹಿತ ಮಳೆ ಸುರಿಯುತ್ತದೆ.
ರಸ್ತೆ ಮೇಲೆಲ್ಲ ಪ್ರವಾಹ
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲೆಲ್ಲ ನೀರು ಹರಿಯುತ್ತಿದೆ. ರಸ್ತೆ ಯಾವುದು, ತೋಡು ಯಾವುದು ಎನ್ನುವುದು ಗೊತ್ತಾಗುತ್ತಿಲ್ಲ ಎಂದು ವಾಹನ ಸವಾರರೊಬ್ಬರು ಅವಲತ್ತುಕೊಂಡಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಅಂಗಡಿ ಮುಂಗಟ್ಟು, ಮನೆಗಳಿಗೆ ನೀರು ನುಗ್ಗಿದೆ.
ರಸ್ತೆಯಲ್ಲಿ ನಿಂತ ಮಳೆ ನೀರು:
ಈ ಸುದ್ದಿಯನ್ನೂ ಓದಿ: DK Shivakumar: ಬೆಂಗಳೂರಿನ ಜನರ ಸಮಸ್ಯೆ ಆಲಿಸಲು ವಾರಕ್ಕೆ 2 ದಿನ ‘ಉದ್ಯಾನ ನಡಿಗೆʼ: ಡಿ.ಕೆ. ಶಿವಕುಮಾರ್
ವಾಹನ ಸವಾರರ ಪರದಾಟ
ಸಂಜೆಯಾಗುತ್ತಿದ್ದಂತೆ ಬೆಂಗಳೂರಿನ ಕೆಲ ಭಾಗದಲ್ಲಿ ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದ್ದಾರೆ. ಕೆಲವು ಕಡೆ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಒಟ್ಟಿನಲ್ಲಿ ಭಾರಿ ಮಳೆಗೆ ಬೆಂಗಳೂರು ತತ್ತರಿಸಿದೆ.
ಭಾರಿ ಮಳೆಗೆ ಬೆಂಗಳೂರಿನ ರಸ್ತೆಯಲ್ಲೇ ನಿಂತ ನೀರು:
ಮುಂದುವರಿಯಲಿದೆ ಮಳೆ
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಾಳೆ (ಅಕ್ಟೋಬರ್ 11) ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಸೇರಿ ರಾಜ್ಯದ 21 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದಿಂದ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.