ಬೆಂಗಳೂರು: ಬೆಂಗಳೂರಿನಲ್ಲಿ ಇರಬೇಕಾದರೆ ಹಿಂದಿ ಕಲಿ ಎಂದು ಇತ್ತೀಚೆಗೆ ಹಿಂದಿ ಭಾಷಿಕನೊಬ್ಬ ಆಟೋ ಚಾಲಕನ ಮೇಲೆ ದರ್ಪ ಮೆರೆದಿದ್ದ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಉತ್ತರ ಭಾರತದ ವ್ಯಕ್ತಿ ಕನ್ನಡದಲ್ಲೇ ಕ್ಷಮೆ ಯಾಚಿಸಿರುವುದು ಕಂಡುಬಂದಿದೆ. ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಕನ್ನಡಿಗ ಆಟೋ ಚಾಲಕನಿಗೆ ಧಮ್ಕಿ ಹಾಕಿದ್ದ ಹಿಂದಿ ಭಾಷಿಕ, ಕನ್ನಡಿಗರ ಕ್ಷಮೆ ಕೋರಿದ್ದಾನೆ.
ಈ ಕುರಿತು ವಿಡಿಯೋ ಮಾಡಿರುವ ಹಿಂದಿ ಭಾಷಿಕ ಕನ್ನಡದಲ್ಲೇ ಮಾತನಾಡಿದ್ದು, ನಾನು ಬಳಸಿದ ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾನೆ.'ಮೊದಲಿಗೆ ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಕನ್ನಡ ಜನರಿಗೆ ನಾನು ಕ್ಷಮೆ ಯಾಚಿಸುತ್ತೇನೆ. ನಾನು ಕಳೆದ 9 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನಾನು ಈ ಸುಂದರ ನಗರದ ಭಾಗವಾಗಿದ್ದೇನೆ. ಈ ನಗರದ ಜೊತೆ ನನ್ನ ಸಾಕಷ್ಟು ಭಾವನಾತ್ಮಕ ಕ್ಷಣಗಳಿವೆ. ಬೆಂಗಳೂರು ನನಗೆ ಜೀವನ ಕೊಟ್ಟಿದೆ.
ಹೀಗಾಗಿ ಈ ನಗರದ ಬಗ್ಗೆ ಅತೀವ ಗೌರವವಿದೆ. ನಾನು ಇಲ್ಲಿದ್ದುಕೊಂಡೇ ಹೊರಗಿನ ದೇಶದ ಕಂಪನಿಗೆ ಕೆಲಸ ಮಾಡುತ್ತಿದ್ದೇನೆ. ಅಲ್ಲಿಂದಲೇ ನನಗೆ ಸಂಬಳ ಬರುತ್ತದೆ. ನನಗೆ ಈ ಬೆಂಗಳೂರು ತುಂಬಾ ಇಷ್ಟ. ಕನ್ನಡಿಗರಿಗೆ ನಾನಾಡಿರುವ ಮಾತುಗಳಿಂದ ನೋವಾಗಿದ್ದರೆ ನಾನು ಮನಃಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ. ಈಗಾಗಲೇ ನಾನು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಕ್ಷಮೆ ಕೋರಲು ನಿರ್ಧರಿಸಿದ್ದೇನೆ. ಅಂದು ನಡೆದ ಒಂದೇ ಒಂದು ಸಣ್ಣ ಗಲಾಟೆ ವೇಳೆ ಆಕ್ರೋಶದಿಂದ ಆಟೋ ಚಾಲಕನೊಂದಿಗೆ ನಾನು ಆಡಿದ ಮಾತುಗಳಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಕ್ಷಮಿಸಿ' ಎಂದು ಕೋರಿದ್ದಾನೆ.
ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಕನ್ನಡಿಗ ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡು ಎಂದು ಹಿಂದಿ ಭಾಷಿಕ ಧಮ್ಕಿ ಹಾಕಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಈ ವೇಳೆ ಚಾಲಕ ಕೂಡ ತಿರುಗೇಟು ನೀಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿತ್ತು.
ಈ ಸುದ್ದಿಯನ್ನೂ ಓದಿ | Om Prakash Murder Case: ಕೊಲೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್ಗೆ ಒಂದು ವಾರದಿಂದ ಟಾರ್ಚರ್? ಪತ್ನಿ- ಮಗಳ ಮೇಲೆ ಎಫ್ಐಆರ್
ಚಾಲಕ ಮತ್ತು ಹಿಂದಿ ಭಾಷಿಕನ ನಡುವಿನ ವಾಗ್ವಾದವನ್ನು ಒಬ್ಬಾತ ವಿಡಿಯೋ ಮಾಡುತ್ತಿದ್ದರೆ, ಹಿಂದಿ ಭಾಷಿಕನ ಜತೆಗಿದ್ದ ಯವತಿ, ಆತನನ್ನು ಕರೆದೊಯ್ದಿದ್ದಳು. ಹಿಂದಿಯಲ್ಲಿ ಮಾತನಾಡು ಎಂದು ಯುವಕ ಧಮ್ಮಿ ಹಾಕಿದ್ದಕ್ಕೆ ಆಟೋ ಚಾಲಕ, 'ಏನೂ ಮಾಡಕ್ಕಾಗಲ್ಲ. ಕನ್ನಡ ಮಾತನಾಡೋದನ್ನು ಕಲಿ ನೀನು. ನೀನು ಬೆಂಗಳೂರಿಗೆ ಬಂದಿರುವುದು ಆಯ್ತಾ...' ಎಂದು ತಿರುಗೇಟು ಕೊಟ್ಟಿದ್ದ. ಈ ವೇಳೆ ಯುವಕನ ಜತೆಗಿದ್ದ ಯುವತಿ ಆತನನ್ನು ಕರೆದೊಯ್ದಿದ್ದಳು.