ಬೆಂಗಳೂರು, ಜು. 21: ನಗರದಾದ್ಯಂತ ಎಂಟು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ಮಂಗಳವಾರ (ಜುಲೈ 21) ದಾಳಿ ನಡೆಸಿದೆ. ಐಸಿಸ್ ನೇಮಕಾತಿ (ISIS recruitment) ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಲಾಗುತ್ತಿದೆ ಎಂಬ ಆರೋಪದಡಿ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಇಕ್ರಾ ವೆಲ್ಫೇರ್ ಟ್ರಸ್ಟ್, ಗೈಡೆನ್ಸ್ ಫಾರ್ ಮ್ಯಾನ್ಕೈಂಡ್ ಟ್ರಸ್ಟ್ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಕೆಲವು ವ್ಯಕ್ತಿಗಳನ್ನು ಒಳಗೊಂಡ ಐಸಿಸ್ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿರುವ ಎಫ್ಐಆರ್ ಆಧರಿಸಿ ದಾಳಿ ನಡೆಸಲಾಗಿದೆ.
ಇಕ್ರಾ ವೆಲ್ಫೇರ್ ಟ್ರಸ್ಟ್ ಮತ್ತು ಜಿಎಫ್ಎಂ ಟ್ರಸ್ಟ್ ಮೂಲಕ ಬಂದ ಹಣವನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ಗೆ ವ್ಯಕ್ತಿಗಳ ನೇಮಕಾತಿ ನಡೆಸಲು ಬಳಸಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ತಿಳಿಸಿದೆ.
ಎನ್ಐಎ ಈ ಹಿಂದೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 17 (ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವುದು), 18 (ಭಯೋತ್ಪಾದನೆಗೆ ಪಿತೂರಿ ಮತ್ತು ಪೂರ್ವಸಿದ್ಧತಾ ಕೃತ್ಯಗಳು) ಮತ್ತು 18B (ಭಯೋತ್ಪಾದಕ ಕೃತ್ಯಗಳಿಗೆ ವ್ಯಕ್ತಿಗಳ ನೇಮಕಾತಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಿತ್ತು. ತನಿಖೆಯ ಸಮಯದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ನಂತರ ಸಂಸ್ಥೆ ಇರ್ಫಾನ್ ನಾಸಿರ್, ಅಹಮದ್ ಅಬ್ದುಲ್ ಖಾದರ್, ಮೊಹಮ್ಮದ್ ತೌಕಿರ್ ಮಹಮೂದ್, ಜುಹಾಬ್ ಹಮೀದ್ ಶಕೀಲ್ ಮನ್ನಾ ಮತ್ತು ಮೊಹಮ್ಮದ್ ಶಿಹಾಬ್ ಅವರನ್ನು ಆರೋಪಿಗಳೆಂದು ಹೆಸರಿಸಿ ಆರೋಪಪಟ್ಟಿ ಸಲ್ಲಿಸಿತು.
ಐಸಿಸ್ ಲಿಂಕ್ ಆರೋಪ: ಖಾಜಾ ಮೊಯಿದ್ದೀನ್, ಸಹಚರ ಕೋರ್ಟ್ನಿಂದ ಖುಲಾಸೆ
ಎನ್ಐಎ ಆರೋಪಪಟ್ಟಿಯ ಪ್ರಕಾರ, ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಆರೋಪಿಗಳು ಬೆಂಗಳೂರಿನ ಮುಸ್ಲಿಂ ಯುವಕರನ್ನು ತೀವ್ರಗಾಮಿಗಳನ್ನಾಗಿ ಮಾಡಿ, ಐಸಿಸ್ಗೆ ಸೇರ್ಪಡೆಗೊಳಿಸುವ ಉದ್ದೇಶದಿಂದ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎನ್ನಲಾಗಿದೆ.
ಆರೋಪಪಟ್ಟಿಯ ಪ್ರಕಾರ, ಆರೋಪಿಗಳು ಇಕ್ರಾ ಕ್ಯಾಂಪ್ ಎಂಬ ಮುಸ್ಲಿಂ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಮತ್ತು ವಾರಕ್ಕೊಮ್ಮೆ ನಡೆಯುತ್ತಿದ್ದ ಕುರಾನ್ ಸರ್ಕಲ್ ಎಂಬ ಅಧ್ಯಯನ ತರಗತಿ ಮೂಲಕ ಯುವಕರನ್ನು ಗುರುತಿಸಿ, ಅವರನ್ನು ತೀವ್ರಗಾಮಿಗಳನ್ನಾಗಿ ಮಾಡಿ, ನೇಮಕಾತಿ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಸಿಸ್ ಸೇರ್ಪಡೆಗೆ ಮತ್ತು ನೇಮಕಾತಿಗೆ ಹಣವನ್ನು ಸಂಗ್ರಹಿಸಿ, ವರ್ಗಾಯಿಸಿದ್ದಾರೆ ಮತ್ತು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.