ಬೆಂಗಳೂರು: ರಾಜ್ಯದ ಬೇರೆ ಬೇರೆ ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವವರ ಪೈಕಿ ಸನ್ನಡತೆ ಹೊಂದಿರುವ ಅರ್ಹ ಸಜಾಬಂಧಿಗಳ ಪೈಕಿ 29 ಮಂದಿಯ ಅವಧಿಪೂರ್ವ ಬಿಡುಗಡೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಒಟ್ಟು 45 ಪ್ರಕರಣಗಳ ಪೈಕಿ 28 ಜೀವಾವಧಿ ಶಿಕ್ಷಾ ಬಂಧಿಗಳ ಸನ್ನಡತೆ ಆಧಾರದಡಿ ಅವಧಿಪೂರ್ವ ಬಿಡುಗಡೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಪ್ರತ್ಯೇಕ ಪ್ರಕರಣವೊಂದರಲ್ಲಿಕೇಂದ್ರ ಗೃಹ ಸಚಿವಾಲಯದ ಸಹಮತಿ ಪಡೆದು ಅವಧಿಪೂರ್ವ ಬಿಡುಗಡೆಗೆ ಸಮ್ಮತಿ ನೀಡಿದೆ. ಆ ಮೂಲಕ ಒಟ್ಟು 29 ಜೀವಾವಧಿ ಶಿಕ್ಷಾ ಬಂಧಿಗಳು ಅವಧಿಪೂರ್ವ ಬಿಡುಗಡೆಗೆ ಅನುಮೋದನೆ ದೊರೆತಂತಾಗಿದೆ.
ಇನ್ನು ಇನ್ನು ರಾಜ್ಯದ ಕಾರಾಗೃಹಗಳಲ್ಲಿ ಹೆಚ್ಚಿನ ಭದ್ರತೆ, ಪರಿಣಾಮಕಾರಿ ನಿಗಾ ಹಾಗೂ ಮೇಲ್ವಿಚಾರಣೆ ಎಐ ತಂತ್ರಜ್ಞಾನ ಆಧಾರಿತ ಸುಧಾರಿತ ಉಪಕರಣಗಳ ಖರೀದಿ, ಅಳವಡಿಕೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಕಾರಾಗೃಹಗಳಲ್ಲಿಎಐ ಆಧಾರಿತ ಕ್ಯಾಮೆರಾಗಳು, ಪೋರ್ಟಬಲ್ ಸಿಗ್ನಲ್ ಜಾಮರ್ಗಳು ಹಾಗೂ ಕೈದಿಗಳ ದೂರವಾಣಿ ಕರೆ ವ್ಯವಸ್ಥೆ (ಪ್ರಿಸನರ್ ಕಾಲಿಂಗ್ ಸಿಸ್ಟಮ್) ಸೇರಿದಂತೆ ಹಲವು ಆಧುನಿಕ ಉಪಕರಣಗಳ ಅಳವಡಿಕೆ ಒಪ್ಪಿಗೆ ದೊರೆತಿದೆ.
ಪೊಲೀಸ್ ಠಾಣೆಗಳ ಸಿಸಿಟಿವಿ ಸ್ಥಗಿತಗೊಳ್ಳುವಂತಿಲ್ಲ; ಹೈಕೋರ್ಟ್
ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಒಂದು ನಿಮಿಷವೂ ಸ್ಥಗಿತಗೊಳ್ಳದೆ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಮತ್ತು ರಾಜ್ಯಾದ್ಯಂತ ಸಿಸಿಟಿವಿ ವ್ಯವಸ್ಥೆಗಳ ಆರೋಗ್ಯ ಮತ್ತು ಕಾರ್ಯನಿರ್ವಹಣೆಯನ್ನು ಕಡ್ಡಾಯವಾಗಿ ಲೈವ್ ಟ್ರ್ಯಾಕ್ ಮಾಡುವಂತೆ ಹೈಕೋರ್ಟ್, ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ.
''ಪ್ರತಿಯೊಂದು ಠಾಣೆಯ ಮತ್ತು ಪ್ರತಿಯೊಂದು ಸಿಸಿಟಿವಿ ಕ್ಯಾಮೆರಾ, ರೆಕಾರ್ಡ್, ಯುಪಿಎಸ್ ಮತ್ತು ಸಂಪರ್ಕಿತ ಉಪಕರಣಗಳ ಸ್ಥಿತಿಯನ್ನು ಪ್ರದರ್ಶಿಸುವ ಕೇಂದ್ರೀಕೃತ ಡ್ಯಾಶ್ಬೋರ್ಡ್ ರೂಪಿಸಬೇಕು. ಒಂದು ವೇಳೆ ಆ ಉಪಕರಣಗಳು ವಿಫಲವಾದರೆ ವ್ಯವಸ್ಥೆಯು ಸ್ವಯಂಚಾಲಿತ ಎಚ್ಚರಿಕೆ ಸಂದೇಶಗಳನ್ನು ನೀಡುವಂತಿರಬೇಕು,'' ಎಂದು ನ್ಯಾಯಾಲಯ ಹೇಳಿದೆ.