ಹಾಸನ: ಮೊನ್ನೆ ನಿಧನರಾದ ಚೆನ್ನಮ್ಮ ಅವರ ಸಮಾಧಿಗೆ ಇಂದು ಕುಟುಂಬ ಸದಸ್ಯರು ಭೇಟಿ ನೀಡಿ ಹಾಲು ತುಪ್ಪ ಸಮರ್ಪಣೆ ಮಾಡಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (Chennamma) ಅವರು ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ನಿನ್ನೆಯೂ ಸಮಾಧಿ ಬಳಿ ಆಗಮಿಸಿದ್ದ ಕುಟುಂಬಸ್ಥರು, ಸಮಾಧಿಗೆ ನಮನ ಸಲ್ಲಿಸಿದ್ದರು. ಚೆನ್ನಮ್ಮನವರು ಬದುಕಿದ್ದಾಗ ಪ್ರತಿದಿನ ಪಠಿಸುತ್ತಿದ್ದ ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ ಹಾಗೂ ಶಿವನಿಗೆ ಪ್ರಿಯವಾದ ರುದ್ರ ಚಮಕ ಶ್ಲೋಕಗಳನ್ನು ಸಮಾಧಿ ಎದುರು ಅರ್ಚಕರು ಪಠಿಸಿದರು.
ಮಾವಿನಕೆರೆಯ ರಂಗನಾಥ್, ಗುಂಡಣ್ಣ, ಮನುಕುಮಾರ್ ನೇತೃತ್ವದ ಮೂವರು ಅರ್ಚಕರು ಶ್ಲೋಕಗಳ ಉದ್ವೋಷಣೆಯ ಮೂಲಕ ಪೂಜೆ ನೆರವೇರಿಸಿದರೆ, ಪುತ್ರಿ ಅನಸೂಯಾ ನಂದಾದೀಪ ಹಚ್ಚಿ ಸಮಾಧಿ ಎದುರು ನೆಲದ ಮೇಲೆ ಕುಳಿತು ಶ್ಲೋಕ ಪಠಣದಲ್ಲಿ ಪಾಲ್ಗೊಂಡಿದ್ದರು. ಜುಲೈ 30ರಂದು ನಡೆಯಲಿರುವ ಆರಾಧನಾ ಮಹೋತ್ಸವದವರೆಗೆ ದೀಪ ಆರದಂತೆ ವ್ಯವಸ್ಥೆ ಮಾಡುವಂತೆ ಕುಟುಂಬ ಸದಸ್ಯರು ಸೂಚನೆ ನೀಡಿದರು. ಮುಂದೆಯೂ ಪ್ರತಿನಿತ್ಯ ಸಮಾಧಿ ಸ್ಥಳದಲ್ಲಿ ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ ಪಠಿಸಿ ಪೂಜೆ ನಡೆಸಲು ತೀರ್ಮಾನಿಸಲಾಗಿದೆ.
ಚೆನ್ನಮ್ಮ ಅಂತ್ಯಕ್ರಿಯೆ; ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಪ್ರಲ್ಹಾದ್ ಜೋಶಿ ಗೌರವ ಸಮರ್ಪಣೆ
ಹಾಸನ ಜಿಲ್ಲೆಯ . ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಗ್ರಾಮದ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅಂತ್ಯಕ್ರಿಯೆಯನ್ನು ಸೋಮವಾರ ನೆರವೇರಿಸಲಾಗಿದೆ. ಚೆನ್ನಮ್ಮ 1954ರಲ್ಲಿ ಗೌಡರನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ವರು ಗಂಡು ಮಕ್ಕಳು, ಕುಮಾರಸ್ವಾಮಿ, ರೇವಣ್ಣ, ಎಚ್ ಡಿ ಬಾಲಕೃಷ್ಣ ಮತ್ತು ಎಚ್ ಡಿ ರಮೇಶ್ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪ್ರಮುಖ ರಾಜಕಾರಣಿಗಳ ಪತ್ನಿ ಮತ್ತು ತಾಯಿಯಾದರೂ, ಚೆನ್ನಮ್ಮ ಹೆಚ್ಚಾಗಿ ಸಾರ್ವಜನಿಕ ಜೀವನದಿಂದ ದೂರವಿದ್ದರು.
ಪ್ರಜ್ವಲ್ ಗೈರು
ಪೆರೋಲ್ ದೊರೆಯದ ಕಾರಣ, ಪ್ರಜ್ವಲ್ ರೇವಣ್ಣ ಜೈಲಿನಲ್ಲೇ ಆನ್ಲೈನ್ ಮೂಲಕ ಚೆನ್ನಮ್ಮ ಅಂತ್ಯಕ್ರಿಯೆ ವೀಕ್ಷಣೆ ಮಾಡಿದರು. ಅಜ್ಜಿಯ ಅಂತಿಮ ದರ್ಶನ ಪಡೆಯಲು, ಜೈಲು ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರಿಗೆ ತಾಂತ್ರಿಕ ಸೌಲಭ್ಯವನ್ನು ಒದಗಿಸಲಾಗಿತ್ತು.