ಕರ್ನಾಟಕದ ಸಾಲ ನಿಯಂತ್ರಣದಲ್ಲಿದೆ ಜಿಎಸ್ಟಿ ಕೇಂದ್ರ ಪಾಲು ಕಡಿಮೆಯಾಗಿದೆ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ
ಕೇಂದ್ರ ಸರಕಾರದ ಸಾಲ ಮಿತಿಮೀರಿ ಹೋಗಿದ್ದರೂ, ರಾಜ್ಯದ ಸಾಲ ಇತಿಮಿತಿಯ ಇದೆ. ಜಿಡಿಪಿ ವೃದ್ದಿಯಲ್ಲಿ ಕೇಂದ್ರಕ್ಕಿಂತ ರಾಜ್ಯದ್ದೇ ಹೆಚ್ಚು ಎಂದಿರುವ ಸಿಎಂ ಸಿದ್ದರಾಮಯ್ಯ, ಬಜೆಟ್ನಲ್ಲಿ ರಾಜ್ಯದ ಜನರ ಭರವಸೆಗಳನ್ನು ಈಡೇರಿಸುವ ಜತೆಗೆ ವಿತ್ತೀಯ ಶಿಸ್ತನ್ನೂ ಪಾಲಿಸಲಾಗಿದೆ ಎಂದರು.
ಗೃಹ ಕಚೇರಿ ಕೃಷ್ಣಾದಲ್ಲಿ 2026 -2027ನೇ ಸಾಲಿನ ಬಜೆಟ್ ಸಮರ್ಥಿಸಿಕೊಂಡು ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳಿಗೆ ಸಾಲ ಮಾಡುವುದು ಅನಿವಾರ್ಯ ಎಂದರಲ್ಲದೆ, ಇತಿಮಿತಿಯ ಸಾಲ ಮಾಡಲಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಸಾಲ 212 ಲಕ್ಷ ಕೋಟಿ ರು.ಗೆ ಏರುವ ಅಂದಾಜಿದೆ. ಅದು ಜಿಡಿಪಿಯ ಶೇ.55ಕ್ಕಿಂತ ಹೆಚ್ಚು. ತಾವು ಪರಿಮಿತಿಯ ಸಾಲ ಮಾಡಿದ್ದೇವೆ.
ನಾವು ಅಧಿಕಾರಕ್ಕೆ ಬಂದಾಗ ಸಾಲ 5.54 ಲಕ್ಷ ಕೋಟಿ ರು. ಸಾಲ ಇತ್ತು. ಈಗ ಸಾಲ 8.14 ಲಕ್ಷ ಕೋಟಿ ರು. ಆಗುತ್ತದೆ. ಫಿಸ್ಕಲ್ ರೆಸ್ಪಾನ್ಸಿಬಲ್ ಆಕ್ಟ್ ಪ್ರಕಾರ ವಿತ್ತೀಯ ಕೊರತೆ ಜಿಡಿಪಿಯ ಶೇ. 3ರ ಒಳಗೆ ಇರಬೇಕು. ಸಾಲವು ಶೇ.25ರ ಒಳಗೆ ಇರಬೇಕು. ಕರ್ನಾಟಕದ ಜಿಡಿಪಿ ಮುಂದಿನ ವರ್ಷ 33 ಲಕ್ಷ ಕೋಟಿ ರು. ಆಗುತ್ತದೆ. ಹೀಗಾಗಿ, ಕಾಯಿದೆ ವಿಧಿಸಿರುವ ಮಿತಿಯೊಳಗೆಯೇ ಸಾಲ ಮಾಡಲಾಗಿದೆ ಎಂದರು.
ಇದನ್ನೂ ಓದಿ: Karnataka Budget 2026: ವಿತ್ತೀಯ ಶಿಸ್ತು ಉಲ್ಲಂಘಿಸಿಲ್ಲ, ಸಾಲ ಮಾಡದೇ ಯಾವ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಸಿಎಂ
ಕೇಂದ್ರ ಸರಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮಾಡುತ್ತಿದೆ. ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ನಾವು ಎರಡನೇ ಸ್ಥಾನ ದಲ್ಲಿದ್ದೇವೆ. ಆದರೆ, ಕರ್ನಾಟಕಕ್ಕೆ ಜಿಎಸ್ಟಿ ಪಾಲು ನ್ಯಾಯಯುತವಾಗಿ ಸಿಕ್ಕಿಲ್ಲ. ಈ ವರ್ಷ ನಮಗೆ ಜಿಎಸ್ಟಿ ಹಂಚಿಕೆಯಲ್ಲಿ 10000 ಕೋಟಿ ರು. ಕೊರತೆಯಾಗಿದೆ.
ಮುಂದಿನ ವರ್ಷ 15000 ಕೋಟಿ ರು. ಕಡಿಮೆ ಆಗುವ ಅಂದಾಜು ಇದೆ. ಕಡಿಮೆ ಜಿಎಸ್ಟಿ ಸಿಕ್ಕಿದ್ದರಿಂದ ಕರ್ನಾಟಕದ ಬೆಳವಣಿಗೆ ಶೇ.4 ಕಡಿಮೆ ಆಗಿದೆ. ಆದರೂ, ಕೂಡ ಎಸ್ಜಿಡಿಪಿ ಬೆಳವಣಿಗೆ ಶೇ.8.10 ಇದೆ ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.
ಜೆಜೆಎಂನಡಿ ಕೇಂದ್ರದ ಪೂರ್ಣ ಪಾಲು ಬಂದಿಲ್ಲ: ಜಲಜೀವನ ಮಿಷನ್ನ ಯೋಜನಾ ವೆಚ್ಚ ಒಟ್ಟು 69488 ಕೋಟಿ ಆಗಿದ್ದು ಕೇಂದ್ರದ ಪಾಲು 30880 ಕೋಟಿ ರು. ಆದರೆ ಈವರೆಗೆ ನಮಗೆ ದೊರೆತಿರುವ ಕೇಂದ್ರದ ಅನುದಾನ ಕೇವಲ 11786 ಕೋಟಿ ರು. ನೀಡಿದ್ದಾರೆ. ಈ ಯೋಜನೆಗೆ 38600 ರಾಜ್ಯ ಸರಕಾರ ಈಗಾಗಲೇ ವೆಚ್ಚ ಮಾಡಿದೆ. 15500 ಕೋಟಿ ರಾಜ್ಯ ಸರಕಾರ ಹೆಚ್ಚುವರಿಯಾಗಿ ವೆಚ್ಚ ಮಾಡಿದೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿ, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳಾದ ರಿತೇಶ್ ಕುಮಾರ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಮಾಡಿದ ಸಾಲ ರೂ.165 ಲಕ್ಷ ಕೋಟಿ
ಈ ವರ್ಷ ಕೇಂದ್ರದ ವಿತ್ತೀಯ ಕೊರತೆ 4.4ರಷ್ಟಿದ್ದು, ಕೇಂದ್ರ ಸರ್ಕಾರ 218 ಲಕ್ಷ ಕೋಟಿ ರು. ಸಾಲ ಹೊಂದಿದೆ. ಬಿಜೆಪಿಗೆ ನಮ್ಮನ್ನು ಪ್ರಶ್ನಿಸಲು ಯಾವ ನೈತಿಕತೆ ಇದೆ? ಸಾಲ ಮಾಡದೇ ಯಾವ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ಸಾಲದ ಮಿತಿ ಮಾನದಂಡಗಳಲ್ಲಿ ತಿಳಿಸಿದ ಮಿತಿಯಲ್ಲಿರಬೇಕು. 2014ರ ಮೊದಲು, 53.11 ಲಕ್ಷ ಕೋಟಿ ರು. ಇದ್ದ ದೇಶದ ಸಾಲ ಈಗ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ 165 ಲಕ್ಷ ಕೋಟಿ ರು.ಗೇರಿಕೆ ಯಾಗಿದೆ. ಪ್ರತಿಪಕ್ಷ ನಾಯಕ ಅಶೋಕ ಅವರು ರಾಜ್ಯ ಸರಕಾರ ಸಾಲ ಮಾಡುತ್ತಿದೆ ಎಂಬ ಟೀಕೆ ಮಾಡಲು ಯಾವುದೇ ನೈತಿಕತೆ ಇಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬರುವಾಗ, 55,33,847 ಕೋಟಿ ಸಾಲವಿತ್ತು. ಎಲ್ಲ ಸರಕಾರಗಳ ಅವಧಿಯಲ್ಲಿ ಸಾಲಗಳನ್ನು ಮಾಡಲಾಗಿದೆ ಎಂದರು.