ಬೆಂಗಳೂರು: ದಶಕಗಳಿಂದ ಹಿಂದುಳಿದ ಸಮುದಾಯಗಳ ಮೇಲೆ ನಡೆಯುತ್ತಿರುವ ಅನ್ಯಾಯಕ್ಕೆ ಅಂತ್ಯ ಹಾಡಬೇಕಾದ ಸಮಯ ಬಂದಿದೆ. ಸಾಮಾಜಿಕ ನ್ಯಾಯ, ಸಮಾನ ಹಕ್ಕುಗಳು ಹಾಗೂ ತಳಹದಿ ವರ್ಗಗಳ ಸಬಲೀಕರಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಇಂದು ಹೊಸ ದಿಕ್ಕು ಸಿಕ್ಕಿದ್ದು, ಆ ಪರಿವರ್ತನೆಯ ಶಕ್ತಿಯಾಗಿ ಖ್ಯಾತ ನಟ ವಿಜಯ ದಳಪತಿ ಹೊರಹೊಮ್ಮಿದ್ದಾರೆ ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್.ಸಂಗಮೇಶ್ ಹೇಳಿದ್ದಾರೆ.
“ಇದು ಕೇವಲ ರಾಜಕೀಯವಲ್ಲ – ಹೋರಾಟ. ಇದು ಕೇವಲ ಮಾತಲ್ಲ – ದಮನಿತ ವರ್ಗಗಳ ಸ್ವಾಭಿಮಾನದ ಘರ್ಜನೆ. ದಶಕಗಳಿಂದ ತುಳಿಯಲ್ಪಟ್ಟ ಜನರ ನೋವಿಗೆ ಉತ್ತರ ನೀಡುವ ಸಮಯ ಬಂದಿದೆ. ಆ ಹೋರಾಟಕ್ಕೆ ದಿಕ್ಕು ತೋರಿಸುವ ನಾಯಕತ್ವ ವಿಜಯ ದಳಪತಿ ಅವರದು,” ಎಂದಿದ್ದಾರೆ.
ತಮಿಳುನಾಡಿನ ರಾಜಕೀಯದಲ್ಲಿ ಇಂದು ಉಂಟಾಗುತ್ತಿರುವ ಬದಲಾವಣೆ ಸಾಮಾನ್ಯವಲ್ಲ. ಇದು ದಮನಿತ ವರ್ಗಗಳ ಎದ್ದೇಳುವ ಧ್ವನಿ. “ಸ್ವಾಭಿಮಾನಕ್ಕಾಗಿ, ಸಮಾನತೆಗೆ – ಈಗ ಅಧಿಕಾರವೂ ತಳಹದಿ ವರ್ಗಗಳ ಕೈಗೆ ಬರಬೇಕು,” ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಯುವಜನರ ಆಶೋತ್ತರಗಳು, ಹಿಂದುಳಿದವರ ಹಕ್ಕುಗಳು ಮತ್ತು ಸಮಾನತೆಯ ಕನಸುಗಳನ್ನು ಒಟ್ಟುಗೂಡಿಸುವ ಶಕ್ತಿ ವಿಜಯ ದಳಪತಿ ಅವರಲ್ಲಿದ್ದು, ಸಮಾಜದ ಪ್ರತಿಯೊಂದು ವರ್ಗವನ್ನೂ ಜೊತೆಗೂಡಿಸಿಕೊಂಡು ಸಾಗುವ ದೃಢಸಂಕಲ್ಪ ಹೊಂದಿ ದ್ದಾರೆ.
ಸಾಮಾಜಿಕ ನ್ಯಾಯದ ಇತಿಹಾಸವನ್ನು ಮರುಬರೆಯುವ ಸಮಯ ಬಂದಿದೆ. ಮಾದಿಗರ ಹೆಮ್ಮೆಯ ಮಗ ತಮಿಳುನಾಡಿನ ಮುಖ್ಯಮಂತ್ರಿಯಾಗುವುದು ಕೇವಲ ಕನಸು ಅಲ್ಲ – ಅದು ನಮ್ಮ ಗೌರವ, ನಮ್ಮ ಹಕ್ಕು, ವಿಜಯ ಹೋರಾಟಕ್ಕೆ ಸಿಕ್ಕ ಜಯ!” ಮುಂದಿನ ಬೆಂಗಳೂರು ಜಿಬಿಎ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿವಿಕೆ ಪಕ್ಷ ಪ್ರವೇಶಿಸುವುದು ಖಚಿತವಾಗಿದ್ದು, ಸಂಘಟಿತ ಯುವಶಕ್ತಿ ಮತ್ತು ಹಿಂದುಳಿದ ವರ್ಗಗಳ ಭಾರೀ ಬೆಂಬಲದ ಹಿನ್ನೆಲೆ ಟಿವಿಕೆ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಲಿದ್ದಾರೆ ಎಂದು ಎಸ್ ಸಂಗಮೇಶ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.