ಬೆಂಗಳೂರು: ಹಿರೋಷಿಮಾ ನಾಗಾಸಾಕಿ ಬಾಂಬ್ ದಾಳಿಯ ಭೀಕರತೆಯನ್ನು ನೆನಪಿಸಿಕೊಂಡು ವಿಶ್ವಶಾಂತಿಯ ಸಂದೇಶ ಸಾರುವ ಉದ್ದೇಶದಿಂದ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (ರಿ) ವತಿಯಿಂದ ಜಯನಗರದ ಆರ್.ಕೆ.ಎಸ್. ಎಜುಕೇಶನಲ್ ಸೊಸೈಟಿ (ರಿ) ಶಾಲೆ ಯಲ್ಲಿ "ಹಿರೋಷಿಮಾ ಡೇ" ಶಾಂತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಅಂಬಿಕಾ. ಸಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಮುಖ್ಯ ಧ್ಯೇಯ "ಯುದ್ಧ ಬೇಡ, ಶಾಂತಿ ಬೇಕು". ಶಾಲಾ ಮಕ್ಕಳಲ್ಲಿ ಶಾಂತಿ ಮತ್ತು ಪ್ರಕೃತಿ ಸಂರಕ್ಷಣೆ ಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮಕ್ಕೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಎನ್.ಲಕ್ಷ್ಮಿಕಾಂತ್, ನ್ಯೂಕ್ಲಿಯರ್ ಫಿಸಿಕ್ಸ್ ಮತ್ತು ತಂತ್ರಜ್ಞಾನ ತಜ್ಞರಾದ ಶ್ರೀ. ಅದಿತ್ಯ. ಎಸ್, ಆರ್.ಕೆ.ಎಸ್. ಶಾಲೆಯ ಪ್ರಾಂಶುಪಾಲರಾದ ಶ್ರೀ. ವೆಂಕಟೇಶ್ ಮೂರ್ತಿ ಮತ್ತು ಶಿಕ್ಷಕ ವೃಂದದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಹಿರೋಷಿಮಾ ದಾಳಿಯಲ್ಲಿ ಮೃತಪಟ್ಟವರ ನೆನಪಿಗಾಗಿ 1 ನಿಮಿಷ ಮೌನ ದೊಂದಿಗೆ ಪ್ರಾರಂಭವಾಯಿತು. ಮಾತನಾಡಿದ ಅತಿಥಿಗಳು ಪರಮಾಣು ಯುದ್ಧದ ದುಷ್ಪರಿಣಾಮ ಗಳನ್ನು ವಿವರಿಸಿ, ವಿಜ್ಞಾನವನ್ನು ಮಾನವ ಕಲ್ಯಾಣಕ್ಕಾಗಿ ಬಳಸಬೇಕೆಂದು ಕರೆ ನೀಡಿದರು. "ಇಂತಹ ದುರಂತ ಮತ್ತೆ ಮರುಕಳಿಸಬಾರದು, ಶಾಂತಿಯೇ ಜಗತ್ತಿನ ಉಳಿವು" ಎಂಬ ಸಂದೇಶವನ್ನು ಮಕ್ಕಳಿಗೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು "ಶಾಂತಿಯೇ ನಮ್ಮ ಬಲ" ಎಂಬ ಘೋಷಣೆ ಕೂಗಿ ಶಾಂತಿಯ ಪ್ರತಿಜ್ಞೆ ಸ್ವೀಕರಿಸಿದರು. ಪ್ರಕೃತಿ ಸಂರಕ್ಷಣೆಯ ಸಂದೇಶವಾಗಿ ಗಿಡಗಳನ್ನು ವಿತರಿಸಲಾಯಿತು.