ಬೆಂಗಳೂರು: ಸಪ್ತಕ, ಬೆಂಗಳೂರು ವತಿಯಿಂದ ‘ನೃತ್ಯ-ನೃತ್ಯ ರೂಪಕ’ ಕಾರ್ಯಕ್ರಮವನ್ನು ಆ.22ರಂದು ಸಂಜೆ 5.30ಕ್ಕೆ ನಗರದ ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವೃತ್ತಿಯಲ್ಲಿ ಪ್ರಸಿದ್ಧ ಖ್ಯಾತ ಕಲಾವಿದೆ, ವೃತ್ತಿಯಲ್ಲಿ ಮನೋವೈದ್ಯೆ ಮತ್ತು ಖ್ಯಾತ ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಡಾ. ಕೆ. ಎಸ್. ಪವಿತ್ರಾ ಅವರಿಂದ ವಿಶೇಷ ನೃತ್ಯ ಪ್ರಸ್ತುತಿ ನಡೆಯಲಿದೆ. ವರಕವಿ ದ.ರಾ. ಬೇಂದ್ರೆಯವರ ಆಯ್ದ ಭಾವಪೂರ್ಣ ಕಾವ್ಯಗಳಿಗೆ ಇವರು ನೃತ್ಯದ ಮೂಲಕ ಜೀವ ತುಂಬಲಿದ್ದಾರೆ.
ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಅಂತರ್ ರಾಷ್ಟ್ರೀಯ ಖ್ಯಾತಿಯ ನೃತ್ಯ ಪಟು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಾ. ವೀಣಾ ಮೂರ್ತಿ ವಿಜಯ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ‘ತತ್ತ್ವ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ ತಂಡದ ನುರಿತ ಕಲಾವಿದರಿಂದ ‘ಅದ್ಭುತ ಚರಿತ’ ಎಂಬ ಭವ್ಯ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ನೃತ್ಯ ರೂಪಕಕ್ಕೆ ಸಾಗರದ ಉದಯೋನ್ಮುಖ ಕೃತಿ ರಚನೆಗಾರ್ತಿ ಮತ್ತು ನೃತ್ಯ ಸಂಯೋಜಕಿ ಸಮುದ್ಯತಾ ಭಟ್ ಅವರು ಕೊರಿಯೋಗ್ರಾಫಿ ಮಾಡಿದ್ದು, ಬೆಂಗಳೂರಿನ ಖ್ಯಾತ ಸಂಗೀತ ನಿರ್ದೇಶಕರಾದ ಸಮೀರ ರಾವ್ ಅವರು ಸಂಗೀತ ಸಂಯೋಜನೆ ನೀಡಿದ್ದಾರೆ.
ನೃತ್ಯರೂಪಕದ ಪ್ರದರ್ಶನದೊಂದಿಗೆ ಶಾಸ್ತ್ರೀಯ ನೃತ್ಯ ಕಲೆಯ ಸೌಂದರ್ಯ, ಭಾರತೀಯ ಪರಂಪರೆಯ ಕಥನಶೈಲಿ ಹಾಗೂ ಸಮಕಾಲೀನ ವೇದಿಕೆ ಪ್ರಸ್ತುತಿಯ ವಿಶಿಷ್ಟ ಸಂಯೋಜನೆಯನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ. ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮಕ್ಕೆ ಕಲಾ ರಸಿಕರು ಹಾಗೂ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಸಾಂಸ್ಕೃತಿಕ ಹಾಗೂ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.