ಬೆಂಗಳೂರು, ಫೆ. 19: ವಿಜ್ಞಾನ, ಇತಿಹಾಸ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ 'ಪರಮ್ ಫೌಂಡೇಶನ್' (Param Foundation), ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಪರಮ್ ಕಲ್ಚರ್' ಅಡಿಯಲ್ಲಿ 'ಪರಮ್ ವಿಹಾರ' ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ತಿಂಗಳ ಕಲಾ ಸಂಜೆಯು ಫೆಬ್ರವರಿ 22ರಂದು ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಪ್ರತಿಷ್ಠಿತ 'ಅಬಲಾಶ್ರಮ'ದಲ್ಲಿ ಸಂಜೆ 6 ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ.
ಉದಯೋನ್ಮುಖ ಕಲಾವಿದರಿಗಾಗಿಯೇ ಮುಡಿಪಾಗಿಟ್ಟಿರುವ ಈ ವೇದಿಕೆಯಲ್ಲಿ ಮೊದಲಿಗೆ ಸುಗಮ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ. ಭರವಸೆಯ ಯುವ ಗಾಯಕ ಸ್ಕಂದೇಶ್ ಎಸ್. ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಇವರ ಗಾಯನಕ್ಕೆ ಕೀಬೋರ್ಡ್ ವಾದಕ ಜಯವರ್ಧನ ಹಾಗೂ ತಬಲಾ ವಾದಕ ರೋಹಿತ್ ಕುಲಕರ್ಣಿ ಸಾಥ್ ನೀಡಲಿದ್ದಾರೆ.
ಸಂಗೀತದ ರಸದೌತಣದ ಬಳಿಕ ಹೆಜ್ಜೆಗಳ ನಾದದೊಂದಿಗೆ ಕಥಕ್ ನೃತ್ಯ ವೈಭವ ಅನಾವರಣಗೊಳ್ಳಲಿದೆ. ಪ್ರಸಿದ್ಧ 'ಸಾತ್ತ್ವತಿ ಸ್ಕೂಲ್ ಆಫ್ ಡಾನ್ಸ್' ನ ಸಂಸ್ಥಾಪಕಿ ಹಾಗೂ ಗುರು ಸೋಹಿನಿ ಕಾರಂತ್ ಅವರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳು ಕಥಕ್ ನೃತ್ಯ ಪ್ರದರ್ಶನದ ಮೂಲಕ ಕಲಾಭಿಮಾನಿಗಳ ಮನಸೂರೆಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜಯನಗರದಲ್ಲಿ 'ಕಾಲ'ದ ವಿಜ್ಞಾನ ಲೋಕ; ಪರಮ್ ಫೌಂಡೇಶನ್ನಿಂದ ವಿನೂತನ ಕಾರ್ಯಾಗಾರ
'ಪರಮ್ ಫೌಂಡೇಶನ್' ಹಾಗೂ 'ಪ್ರಕೃತಿ' ಸಂಸ್ಥೆಯ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮ ಒಟ್ಟು 2 ಗಂಟೆಗಳ ಕಾಲ ನಡೆಯಲಿದ್ದು, ಕಲಾಭಿಮಾನಿಗಳಿಗೆ ರಸದೌತಣ ಉಣಬಡಿಸಲಿದೆ. ವಿಶೇಷವೆಂದರೆ, ಈ ಸುಂದರ ಕಲಾ ಸಂಜೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.