ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಮೇ 10 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ (The Art Of Living) ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಕಾರ್ಯಕ್ರಮದ ಸುತ್ತಮುತ್ತಲಿನ ಸ್ಥಳಗಳಲ್ಲಿನ ಸಂಚಾರ ಮಾರ್ಗಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ 05:00 ರಿಂದ ಮಧ್ಯಾಹ್ನ 03:00 ಗಂಟೆಯವರೆಗೆ ಹೆಚ್.ಎ.ಎಲ್. ಗೇಟ್ ನಂ. 30ರ ಮುಂಭಾಗ ನಡೆಯಲಿರುವ ಕಾರ್ಯಕ್ರಮದ ಸಂಬಂಧ ಮಾರ್ಗ ಬದಲಾಯಿಸಲಾಗಿದೆ.
ಇನ್ನು ಹೆಚ್.ಎ.ಎಲ್ ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆಯಲ್ಲಿ, ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿ.ಜಿ.ಸಿ.ಎ ಕಚೇರಿವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣ ಗೇಟ್ ನಂ. 30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್ನಿಂದ ಗೇಟ್ ನಂ. 30 ರವರೆಗೆ ಎಲ್ಲಾ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ನೈಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ತುಮಕೂರು ರಸ್ತೆಯಿಂದ ನೈಸ್ ರಸ್ತೆ ಮೂಲಕ ಕನಕಪುರ ರಸ್ತೆಗೆ ಹೋಗುವವರು: ಸಿ.ಎಂ.ಟಿ.ಐ ಜಂಕ್ಷನ್ ಬಳಿ ಬಲ ತಿರುವು ಪಡೆದು ರಾಜಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಹೋಗಬಹುದು. ನಗರದ ಒಳಗಿನಿಂದ ತುಮಕೂರು ರಸ್ತೆ ಮೂಲಕ ಕನಕಪುರ ರಸ್ತೆಗೆ ಹೋಗುವವರು ಸಿ.ಎಂ.ಟಿ.ಐ ಜಂಕ್ಷನ್ ಬಳಿ ಎಡ ತಿರುವು ಪಡೆದು ರಾಜಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಸಂಚರಿಸಬಹುದು.
ಮಾಗಡಿ ರಸ್ತೆಯಿಂದ ಕನಕಪುರ ರಸ್ತೆಗೆ ಹೋಗುವವರು ಸುಮನ್ ಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಸಾಗುವುದು. ಮೈಸೂರು ರಸ್ತೆಯಿಂದ (ಕೆಂಗೇರಿ ಕಡೆಯಿಂದ) ಕನಕಪುರ ರಸ್ತೆಗೆ: ನಾಯಂಡಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಸಾಗುವುದು. ಮೈಸೂರು ರಸ್ತೆ ಮತ್ತು ಹೊಸಕೆರೆಹಳ್ಳಿ ರಸ್ತೆ ಮೂಲಕ ಕನಕಪುರ ರಸ್ತೆಗೆ: ನಾಯಂಡಹಳ್ಳಿ ಜಂಕ್ಷನ್ ಬಳಿ ಎಡ ಮತ್ತು ಬಲ ತಿರುವು ಪಡೆದು ಔಟರ್ ರಿಂಗ್ ರಸ್ತೆಯಲ್ಲಿ ಸಾಗುವುದು. ನೈಸ್ ರಸ್ತೆ ಸೋಂಪುರ ಕ್ಲೋವರ್ ಲೀಫ್ ಜಂಕ್ಷನ್ನಿಂದ ಕನಕಪುರ ಮುಖ್ಯರಸ್ತೆಯವರೆಗೆ: ಮೈಸೂರು ರಸ್ತೆ ಕೆಂಗೇರಿ ಮೂಲಕ ಉತ್ತರಹಳ್ಳಿ, ವಸಂತಪುರ ಕ್ರಾಸ್ ಸೇರಿ ಕೋಣನಕುಂಟೆ ಕ್ರಾಸ್ನಲ್ಲಿ ಎಡಕ್ಕೆ ತಿರುಗಿ ಬನ್ನೇರುಘಟ್ಟ ರಸ್ತೆ ತಲುಪುವುದು.
ಜೂನ್ ಅಂತ್ಯದೊಳಗೆ "ಬೆಂಗಳೂರು-ಮುಂಬೈ" ಸೂಪರ್ ಫಾಸ್ಟ್ ರೈಲು ಸಂಚಾರ ಆರಂಭ
ಕನಕಪುರ ಮುಖ್ಯರಸ್ತೆ ನೈಸ್ ರಸ್ತೆ ಜಂಕ್ಷನ್ನಿಂದ ಸೋಂಪುರ ಕ್ಲೋವರ್ ಲೀಫ್ ಜಂಕ್ಷನ್ವರೆಗೆ: ಎಲೆಕ್ಟ್ರಾನಿಕ್ ಸಿಟಿ/ಬನ್ನೇರುಘಟ್ಟ ಕಡೆಯಿಂದ ಬರುವವರು ಬಿಡಿಎ ಜಂಕ್ಷನ್ನಲ್ಲಿ ಎಡಕ್ಕೆ ತಿರುಗಿ ಅಂಜನಾಪುರ 80 ಅಡಿ ರಸ್ತೆ ಮೂಲಕ ಕೆ.ಎಸ್.ಐ.ಟಿ ಜಂಕ್ಷನ್ ತಲುಪಿ ಕೆಂಗೇರಿ/ಮೈಸೂರು ರಸ್ತೆಗೆ ತಲುಪಬಹುದು.