ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಾಳೆ (ಮೇ 10) ಕರ್ನಾಟಕ್ಕೆ ಆಗಮಿಸಲಿದ್ದು, ಪ್ರಸಿದ್ಧ ಆಧ್ಯಾತಿಕ ಕೇಂದ್ರವಾಗಿರುವ ಆರ್ಟ್ ಆಫ್ ಲಿವಿಂಗ್ನ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರೂಜಿಯವರ 70ನೇ ವರ್ಷದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಧ್ಯಾನ ಮಂದಿರವನ್ನು ಪ್ರಧಾನಮಂತ್ರಿಗಳು ಉದ್ಘಾಟಿಸಲಿದ್ದಾರೆ. ಇದು ಆಂತರಿಕ ಶಾಂತಿ ಮತ್ತು ಸಮಗ್ರ ಯೋಗಕ್ಷೇಮಕ್ಕಾಗಿ ಒಂದು ಮೀಸಲಾದ ಧ್ಯಾನ ಮಂದಿರವಾಗಿದೆ. ಮಾನಸಿಕ ಯೋಗಕ್ಷೇಮ, ಗ್ರಾಮೀಣಾಭಿವೃದ್ಧಿ, ಪ್ರಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಪರಿವರ್ತನೆಯ ಮೇಲೆ ಕೇಂದ್ರೀಕರಿಸಿದ ವರ್ಷವೀಡಿ ನಡೆಯುವ ಕಾರ್ಯಕ್ರಮಗಳನ್ನು ಒಳಗೊಂಡ ಆರ್ಟ್ ಆಫ್ ಲಿವಿಂಗ್ನ ರಾಷ್ಟ್ರವ್ಯಾಪಿ ಸೇವಾ ಉಪಕ್ರಮಗಳಿಗೂ ಸಹ ಅವರು ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ
- ಬೆಳಗ್ಗೆ 9.40ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಆಗಮನ
- ಬೆಳಗ್ಗೆ 9.45 ರಿಂದ 10.15ರವರೆಗೆ ಎಚ್ಎಎಲ್ ಏರ್ಪೋರ್ಟ್ ಮುಂಭಾಗ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗಿ.
- ನಂತರ ಎಚ್ಎಎಲ್ ಏರ್ಪೋರ್ಟ್ನಿಂದ ಹೆಲಿಕಾಪ್ಟರ್ ಮೂಲಕ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲೀವಿಂಗ್ ಆಶ್ರಮಕ್ಕೆ ತೆರಳಲಿರುವ ಪ್ರಧಾನಿ ಮೋದಿ, ಧ್ಯಾನ ಮಂದಿರ ಮತ್ತು ವಿವಿಧ ಕಾರ್ಯಕ್ರಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಒಂದೂವರೆ ಗಂಟೆ ಕಾಲ ಆಶ್ರಮದಲ್ಲಿ ಇರಲಿದ್ದಾರೆ.
- ಮಧ್ಯಾಹ್ನ 01.40ಕ್ಕೆ ಬೆಂಗಳೂರಿನಿಂದ ಹೈದರಾಬಾದ್ಗೆ ನಿರ್ಗಮಿಸಲಿದ್ದಾರೆ.
ಕರ್ನಾಟಕ, ತೆಲಂಗಾಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿ
ಪ್ರವಾಸದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ನಾಳೆ (ಮೇ 10) ರಂದು ನಾನು ಕರ್ನಾಟಕ ಮತ್ತು ತೆಲಂಗಾಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ನಾಳೆ ಬೆಳಗ್ಗೆ 11 ಗಂಟೆಗೆ, ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ 45ನೇ ಸಂಸ್ಥಾಪನಾ ವರ್ಷದ ಸ್ಮರಣಾರ್ಥ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ. ಸಮಾಜ ಸೇವೆಯ ಸಂಸ್ಕೃತಿಗೆ ಅನುಗುಣವಾಗಿ, ಈ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ ಕಾರ್ಯಗಳನ್ನು ಮಾಡುತ್ತಾ ಬಂದಿದೆ.
ಮಧ್ಯಾಹ್ನ ನಾನು ಹೈದರಾಬಾದ್ ಗೆ ತಲುಪಲಿದ್ದು, ಅಲ್ಲಿ ಸುಮಾರು 9,500 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನೆರವೇರಿಸಲಿದ್ದೇನೆ. ಈ ಯೋಜನೆಗಳು ರಸ್ತೆ, ಸಾರಿಗೆ (ಲಾಜಿಸ್ಟಿಕ್ಸ್), ಜವಳಿ, ರೈಲ್ವೆ ಹಾಗೂ ಇಂಧನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿವೆ. ಬಳಿಕ ‘ಸಿಂಧು ಆಸ್ಪತ್ರೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲಿದ್ದೇನೆ.
BSY Abhimanotsava: ಬಿಎಸ್ವೈ ಅಭಿಮಾನೋತ್ಸವ; ಮಾಜಿ ಸಿಎಂ ಕುರಿತು ಪ್ರಧಾನಿ ಮೋದಿಯಿಂದ ಬಂತು ವಿಶೇಷ ಸಂದೇಶ
ಸಂಜೆ ನಗರದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ನಾನು ಮಾತನಾಡಲಿದ್ದೇನೆ. ಈ ಹಿಂದಿನ ಬಿ ಆರ್ ಎಸ್ ಮತ್ತು ಇಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ತೆಲಂಗಾಣವು ಬಿಜೆಪಿಯತ್ತ ನೋಡುತ್ತಿದೆ. ನಮಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲವು ನಮ್ಮ ಪಕ್ಷವೇ ತೆಲಂಗಾಣದ ಆದ್ಯತೆಯ ಆಯ್ಕೆ ಎಂಬುದನ್ನು ಸಾರುತ್ತಿದೆ ಎಂದು ತಿಳಿಸಿದ್ದಾರೆ.