ಬೆಂಗಳೂರು: ನೀಟ್ ಪರೀಕ್ಷೆಗಳನ್ನು (NEET) ಸರಿಯಾಗಿ ನಿರ್ವಹಿಸದೇ ಕೋಟ್ಯಂತರ ವಿದ್ಯಾರ್ಥಿಗಳ ಜೀವನದಲ್ಲಿ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿಯು (CJP) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜೂನ್ 14ರಂದು ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ (Prakash Raj) ಭಾಗವಹಿಸಲಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಜೆಪಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪ್ರಕಾಶ್ ರಾಜ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ. ಪ್ರಕಾಶ್ ರಾಜ್ ಸಹ ಇದನ್ನು ಧೃಡಪಡಿಸಿದ್ದು, , "ನಾನು ಬೆಂಗಳೂರಿಗೆ ತಲುಪಲು ಪ್ರಯಾಣಿಸುತ್ತಿದ್ದೇನೆ .. ಈ ಸಂಬಂಧಿತ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸಲು.. ದಯವಿಟ್ಟು ನಮ್ಮ ಧ್ವನಿ ಎತ್ತಲು ಮತ್ತು ಸರ್ಕಾರದ ವೈಫಲ್ಯಕ್ಕೆ ಹೊಣೆಗಾರರನ್ನಾಗಿ ಮಾಡಲು ನಮ್ಮೊಂದಿಗೆ ಸೇರಿ" ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೂನ್ 6 ರಂದು ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಗುಂಪಿನ ಬೃಹತ್ ಪ್ರದರ್ಶನದ ನಂತರ ಜೂನ್ 11 ರಂದು ಮಹಾರಾಷ್ಟ್ರದ ಪುಣೆ, ಜೂನ್ 12 ರಂದು ಉತ್ತರ ಪ್ರದೇಶದ ಲಕ್ನೋ ಮತ್ತು ಜೂನ್ 13 ರಂದು ಪಂಜಾಬ್ನ ಅಮೃತಸರದಲ್ಲಿ ಪ್ರತಿಭಟನೆಗಳು ನಡೆದವು. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಂತೆ ಭಾನುವಾರ ಬೆಳಿಗ್ಗೆ ತೆಲಂಗಾಣದ ಹೈದರಾಬಾದ್ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸಲಿದೆ.
ಬೆಳಿಗ್ಗೆ 11 ಗಂಟೆಗೆ ಸಿಜೆಪಿ ಕಾರ್ಯಕರ್ತರು ಪುನೀತ್ ರಾಜಕುಮಾರ್ ಸಮಾಧಿಯಲ್ಲಿ ಪುಷ್ಪ ನಮನ ಸಲ್ಲಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು. 'ಕೇಂದ್ರ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದಾಗಿ ದೇಶದಲ್ಲಿ ಒಂದು ಕೋಟಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಳೆಂಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹೊಣೆಗಾರಿಕೆಯನ್ನು ಧರ್ಮೇಂದ್ರ ಪ್ರಧಾನ್ ವಹಿಸಿಕೊಳ್ಳಬೇಕು' ಎಂದು ಆಗ್ರಹಿಸಿದರು.
“ನೀಟ್ ಮಾತ್ರವಲ್ಲ, ಸಿಬಿಎಸ್ಇ ಫಲಿತಾಂಶದಲ್ಲಿಯೂ ಗೋಲ್ಮಾಲ್ಗಳು ನಡೆದಿವೆ. ಆಡಳಿತ ನಡೆಸುವವರ ಕುಮ್ಮಕ್ಕಿನಿಂದಾಗಿಯೇ ಪ್ರಶ್ನೆ ಪತ್ರಿಕೆ ಸೋರಿಕೆ, ಫಲಿತಾಂಶದಲ್ಲಿ ಬದಲಾವಣೆಗಳೆಲ್ಲ ನಡೆಯುತ್ತವೆ. ಇದನ್ನು ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸಾವಿರಾರು ಯುವಜನರು ಭಾಗವಹಿಸಲಿದ್ದಾರೆ' ಎಂದು ಹೇಳಿದರು.