ಬೆಂಗಳೂರು, ಏ. 20: ರಿಯಲ್ ಎಸ್ಟೇಟ್ (real estate) ಮತ್ತು ಸಣ್ಣ ಮಟ್ಟದ ಹಣಕಾಸು ವ್ಯವಹಾರ ನಡೆಸುತ್ತಿದ್ದ 56 ವರ್ಷದ ವ್ಯಕ್ತಿಯೊಬ್ಬರು ತಮ್ಮದೇ ಕಾರಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ. ಮೃತರನ್ನು ಬಸಾಪುರ ನಿವಾಸಿ ನಾರಾಯಣಪ್ಪ ಎಂದು ಗುರುತಿಸಲಾಗಿದ್ದು, ಕಾರಿನೊಳಗೆ ಸೀಟ್ನಲ್ಲಿ ಅಚಲವಾಗಿ ಕುಳಿತಿದ್ದ ನಾರಾಯಣಪ್ಪ ಅವರನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಅವರು ಅದಾಗಲೇ ಮೃತಪಟ್ಟಿರುವುದು (body found) ದೃಢಪಟ್ಟಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ನಾರಾಯಣಪ್ಪ ತಮ್ಮ ಸ್ನೇಹಿತರಾದ ಮಂಜುನಾಥ ರೆಡ್ಡಿ ಮತ್ತು ಶಿವು ಜೊತೆ ಎಲೆಕ್ಟ್ರಾನಿಕ್ಸ್ ಸಿಟಿಯ ಬಾರ್ಗೆ ತೆರಳಿದ್ದರು. ತೀವ್ರವಾಗಿ ಮದ್ಯಪಾನ ಮಾಡಿದ್ದ ಅವರು ನಿಲ್ಲಲೂ ಕಷ್ಟಪಡುತ್ತಿದ್ದರು. ಹೀಗಾಗಿ ಮಂಜುನಾಥ ರೆಡ್ಡಿ ಮತ್ತು ಶಿವು ಅವರ ಕೈ ಹಿಡಿದು ಬಾರ್ನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ನಂತರ ನಾರಾಯಣಪ್ಪ ಕಾರಿನ ಚಾಲಕನ ಪಕ್ಕದ ಸೀಟ್ನಲ್ಲಿ ಕುಳಿತಿದ್ದು, ಅವರದ್ದೇ ಕಾರನ್ನು ಮಂಜುನಾಥ ರೆಡ್ಡಿ ಚಲಾಯಿಸಿದ್ದಾರೆ. ಸ್ನೇಹಿತ ಶಿವು ಬಾರ್ನಿಂದ ಹೊರ ಬಂದ ಬಳಿಕ ಇವರಿಂದ ಬೇರೆಯಾಗಿ ತೆರಳಿದ್ದಾರೆ. ಈ ಎಲ್ಲ ಘಟನೆಗಳ ಸಂಪೂರ್ಣ ಚಿತ್ರಣ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಇನ್ನು ಕೆಲ ಕಿಲೋಮೀಟರ್ ಪ್ರಯಾಣಿಸಿದ ಬಳಿಕ ಮಂಜುನಾಥ ರೆಡ್ಡಿಗೆ ಕಾರು ಚಲಾಯಿಸಲು ಕಷ್ಟವಾಗಿದ್ದರಿಂದ ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿ ಅವರು ಮನೆಗೆ ತೆರಳಿದ್ದಾರೆ. ಮರುದಿನ ಅದೇ ಸ್ಥಳದಲ್ಲಿ ಕಾರಿನೊಳಗೆ ನಾರಾಯಣಪ್ಪ ಅವರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದು, ಯಾವುದೇ ಅನುಮಾನಾಸ್ಪದ ಅಂಶ ಇಲ್ಲವೆಂದು ತಿಳಿಸಿದ್ದಾರೆ. ದೇಹದಲ್ಲಿ ಯಾವುದೇ ಗಾಯಗಳಿಲ್ಲ, ಮಂಜುನಾಥ ರೆಡ್ಡಿ ಮತ್ತು ನಾರಾಯಣಪ್ಪ ನಡುವೆ ಯಾವುದೇ ಜಗಳ ನಡೆದಿಲ್ಲ. ಹೀಗಾಗಿ ಸಾವಿಗೆ ನಿಖರ ಕಾರಣವನ್ನು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಗೊತ್ತಾಗಲಿದೆ ಎಂದು ಎಂದು ಮಾಹಿತಿ ನೀಡಿದ್ದಾರೆ.
Koppala News: ಕೊಪ್ಪಳದಲ್ಲಿ ಸುಟ್ಟ ಸ್ಥಿತಿಯಲ್ಲಿ ಇಬ್ಬರು ಯುವಕರ ಶವ ಪತ್ತೆ, ಕೊಲೆ ಶಂಕೆ