ಬೆಂಗಳೂರು: ಕರ್ನಾಟಕ ರಾಜ್ಯದ ದೇವಸ್ಥಾನಗಳು ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯ ಪ್ರತೀಕಗಳಾಗಿವೆ. ಇವು ಭಕ್ತರ ಶ್ರದ್ಧೆಯ ಕೇಂದ್ರಗಳಾಗಿದ್ದು, ಶಾಂತಿ, ಭಕ್ತಿ, ದೈವಿ ಚೈತನ್ಯ ಮತ್ತು ಸಂಪ್ರದಾಯದ ಸಂಕೇತಗಳಾಗಿವೆ. ಇಂತಹ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ಗಳನ್ನು (Pre-Wedding Shoot) ನಿಷೇಧಿಸಲು ಕಾನೂನು ರೂಪಿಸಬೇಕೆಂದು ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಸ್ಥಾನದಲ್ಲಿ ಕೆಲವರು ದೇವಸ್ಥಾನದ ಒಳಭಾಗದಲ್ಲಿ ಚಪ್ಪಲಿ ಧರಿಸಿ ಅಸಭ್ಯ ರೀತಿಯಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟಿಂಗ್ ನಡೆಸಿದ ಘಟನೆ ವರದಿಯಾಗಿದೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅರ್ಚಕರು ಹಾಗೂ ಸ್ಥಳೀಯ ಭಕ್ತರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮತ್ತು ಅಸಭ್ಯ ವರ್ತನೆ ನಡೆದಿರುವುದು ಅತ್ಯಂತ ಖಂಡನೀಯವಾಗಿದೆ.
ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ದೇವಸ್ಥಾನಗಳ ಪ್ರಾಂಗಣದಲ್ಲಿ ಯಾವುದೇ ಅನುಮತಿ ಇಲ್ಲದೆ ಆಶ್ಲೀಲ, ಅಸಭ್ಯ ಅಥವಾ ಸಂಪ್ರದಾಯ ವಿರುದ್ಧ ಉಡುಪುಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್, ರೀಲ್ಸ್ ನಿರ್ಮಾಣ ಇತ್ಯಾದಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ದೇವಸ್ಥಾನಗಳನ್ನು ವೈಯಕ್ತಿಕ ಪ್ರಚಾರ, ಸಾಮಾಜಿಕ ಜಾಲತಾಣದ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಬಳಸುವುದು ಧಾರ್ಮಿಕ ಸ್ಥಳಗಳ ಗೌರವಕ್ಕೆ ಧಕ್ಕೆ ತರುವುದಲ್ಲದೆ, ಅವುಗಳ ವ್ಯಾಪಾರೀಕರಣಕ್ಕೂ ಕಾರಣವಾಗುತ್ತಿದೆ. ಅದಲ್ಲದೇ ಭಕ್ತಾಧಿಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗುತ್ತಿದೆ.
ಇಂತಹ ಕೃತ್ಯಗಳು ಕೆಳಗಿನ ಕಾನೂನು ಪ್ರಕಾರ ಗಂಭೀರ ಅಪರಾಧವಾಗಿರುತ್ತದೆ
1.ಭಾರತೀಯ ಸಂವಿಧಾನದ ಕಲಂ 25 ಮತ್ತು 26: ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯ ಹಕ್ಕುಗಳನ್ನು ಭಕ್ತರಿಗೆ ಹಾಗೂ ಸಂಸ್ಥೆಗಳಿಗೆ ನೀಡುತ್ತದೆ. ದೇವಸ್ಥಾನಗಳ ಪಾವಿತ್ರ್ಯಕ್ಕೆ ಧಕ್ಕೆ ತರುವ ಚಟುವಟಿಕೆಗಳು ಈ ಹಕ್ಕುಗಳಿಗೆ ವಿರುದ್ಧವಾಗಿರುತ್ತವೆ.
2.ಭಾರತೀಯ ನ್ಯಾಯ ಸಂಹಿತೆ 2023ರ ಪ್ರಕಾರ
- ಸೆಕ್ಷನ್ 298 - ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವುದು ಅಥವಾ ಅವುಗಳಿಗೆ ಹಾನಿ ಮಾಡುವುದು ದಂಡನೀಯ ಅಪರಾಧ.
- ಸೆಕ್ಷನ್ 299 - ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಕೃತ್ಯಗಳು ಗಂಭೀರ ಅಪರಾಧವಾಗಿದೆ.
- ಸೆಕ್ಷನ್ 270 - ಸಾರ್ವಜನಿಕ ತೊಂದರೆ (Public Nuisance) ನೀಡುವುದು. ಸೆಕ್ಷನ್ 352 - ಉದ್ದೇಶಪೂರ್ವಕ ಅವಮಾನದಿಂದ ಶಾಂತಿ ಭಂಗ ಮಾಡುವುದು.
3.ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಅಧಿನಿಯಮ, 1997 : ದೇವಸ್ಥಾನಗಳ ಆಡಳಿತ, ಶಿಸ್ತು ಮತ್ತು ಪಾವಿತ್ರ್ಯ ಕಾಪಾಡುವ ಜವಾಬ್ದಾರಿ ಸಂಬಂಧಿತ ಅಧಿಕಾರಿಗಳ ಮೇಲಿದೆ.
ಕರ್ನಾಟಕ ಮಂದಿರ ಮಹಾಸಂಘದ ಬೇಡಿಕೆಗಳು:
1.ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಹಾಗೂ ವೀಡಿಯೋ ಶೂಟಿಂಗ್ಗಳಿಗೆ ಸಂಪೂರ್ಣ ನಿಷೇಧ ವಿಧಿಸುವುದು.
2.ದೇವಸ್ಥಾನಗಳಲ್ಲಿ ಫೋಟೋಗ್ರಫಿ/ವೀಡಿಯೋಗ್ರಫಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿ ಕಟ್ಟುನಿಟ್ಟಾಗಿ ಜಾರಿಗೆ ತರುವುದು.
3.ನಿಯಮ ಉಲ್ಲಂಘಿಸುವವರ ವಿರುದ್ದ ತಕ್ಷಣದ ಕಾನೂನು ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸುವುದು.
4.ದೇವಸ್ಥಾನ ಆಡಳಿತ ಮಂಡಳಿ, ಅರ್ಚಕರು ಹಾಗೂ ಭದ್ರತಾ ಸಿಬ್ಬಂದಿಗೆ ನಿಯಮ ಜಾರಿಗೆ ಅಗತ್ಯ ಅಧಿಕಾರ ನೀಡುವುದು.
5.ದೇವಸ್ಥಾನಗಳ ಪ್ರವೇಶ ದ್ವಾರಗಳಲ್ಲಿ "ಪ್ರೀ-ವೆಡ್ಡಿಂಗ್ ಶೂಟ್ ನಿಷೇಧ'" ಕುರಿತು ಸ್ಪಷ್ಟ ಸೂಚನಾ ಫಲಕಗಳನ್ನು ಆಳವಡಿಸುವುದು.
6.ಸಾಮಾಜಿಕ ಜಾಲತಾಣಗಳಲ್ಲಿ ದೇವಸ್ಥಾನಗಳ ದುರುಪಯೋಗವನ್ನು ತಡೆಯಲು ನಿಗಾ ಮತ್ತು ನಿಯಂತ್ರಣ ಕ್ರಮಗಳು ಕೈಗೊಳ್ಳುವುದು.
ದೇವಸ್ಥಾನಗಳು ಪೂಜೆ, ಭಕ್ತಿ ಮತ್ತು ಆಧ್ಯಾತ್ಮಿಕ ಶಾಂತಿಯ ಕೇಂದ್ರಗಳಾಗಿದ್ದು, ಇವುಗಳನ್ನು ವಾಣಿಜ್ಯ ಅಥವಾ ಮನರಂಜನಾ ಚಟುವಟಿಕೆಗಳಿಗೆ ಬಳಸುವುದು ಯೋಗ್ಯವಲ್ಲ. ದೇವಸ್ಥಾನಗಳ ಪಾವಿತ್ರ್ಯ ಮತ್ತು ಗೌರವವನ್ನು ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡು ದೇವಸ್ಥಾನಗಳ ಗೌರವವನ್ನು ಕಾಪಾಡುವಂತೆ ಮನವಿ ಸಲ್ಲಿಸಲಾಗಿದೆ.
ಮನವಿಗೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾರೆಡ್ಡಿಯವರು ಇದರ ಬಗ್ಗೆ ಶೀಘ್ರದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಕರ್ನಾಟಕ ಮಂದಿರ ಮಹಾಸಂಘದ ರಾಜ್ಯ ಸಂಘಟಕರಾದ ಮೋಹನ್ ಗೌಡ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟಪೂರ್ವ ನಿರ್ದೇಶಕರಾದ ರಾಘವೇಂದ್ರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ನಿರ್ದೇಶಕರಾದ ಬಿ. ಎನ್.ಮಹೇಶ್, ಹಾಗೂ ಶ್ರೀನಿವಾಸ್, ವಿಕ್ರಮ್ ಶೆಟ್ಟಿ, ಪುರುಷೋತ್ತಮ್ ಸೇರಿದಂತೆ ಮುಂತಾದ ಸಂಘಟನೆಯರು ಉಪಸ್ಥಿತರಿದ್ದರು.