ಬೆಂಗಳೂರು: ವಿಶ್ವವಾಣಿ ಪುಸ್ತಕ ಪ್ರಕಾಶನದ ವತಿಯಿಂದ ಭಾನುವಾರ (ಆಗಸ್ಟ್ 2) 9 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು (Vishwavani Book Release). ವಿಶ್ವವಾಣಿ ಪುಸ್ತಕ, ವಾಗ್ದೇವಿ ವಿದ್ಯಾ ವರ್ಧಕ ಟ್ರಸ್ಟ್ ಹಾಗೂ ವಾಗ್ದೇವಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಸಮಾರಂಭ ನೆರವೇರಿತು. ವಿಶ್ವವಾಣಿʼ ಮತ್ತು ʼಪ್ರವಾಸಿ ಪ್ರಪಂಚʼ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಖ್ಯಾತ ವಾಗ್ಮಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ , ಹಿರಿಯ ನಟ ಅನಂತನಾಗ್ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಯುವ ಪೀಳಿಗೆಗೆ ಸಾಹಿತ್ಯದ ಮಹತ್ವವವನ್ನು ತಿಳಿಸಿದರು. ಭಾರತೀಯ ಸಾಹಿತ್ಯದ ಕುರಿತು ಮಾತನಾಡಿ, ಜಗತ್ತಿನ ಅತೀ ಶ್ರೇಷ್ಠ ಕೃತಿಗಳು, ವೇದ ಉಪನಿಷತ್ತಿಗಳು ಭಾರತದಲ್ಲಿ ರಚನೆಯಾಗಿದೆ. ಪುರಾತನ ಕಾಲದಿಂದಲೂ ಭಾರತೀಯರಲ್ಲಿ ಸಾಹಿತ್ಯ ಹಾಗೂ ಕಲೆ ಎಂಬುದು ರಕ್ತಗತವಾಗಿತ್ತು. ಆದರೆ ಕಾಲಘಟ್ಟ ಬದಲಾದ ಮೇಲೆ ಪಾಶ್ಚಿಮಾತ್ಯ ಹಾಗೂ ಇಸ್ಲಾಮಿಕ್ ಅಂಶಗಳು ದೇಶದ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿದವು. ಈ ಸಮಯದಲ್ಲಿ ಸಾಹಿತ್ಯ ಬೆಳವಣಿಗೆ ಕುಂಠಿತಗೊಂಡವು ಎಂದು ಅವರು ಹೇಳಿದರು.
ಮುಂದುವರಿದು, ಇನ್ನು ಬ್ರಿಟಿಷ್ ಆಡಳಿತದಲ್ಲಿ ಸೃಷ್ಟಿಯಾದ ಸಾಹಿತ್ಯ ಮಹತ್ವವನ್ನು ಪಡೆದುಕೊಂಡಿದೆ. ಸಾಮಾನ್ಯ ಜನರಿಗೆ ಸ್ವಾತಂತ್ರ್ಯದ ಪರಿಕಲ್ಪನೆ ಮೂಡಿಸುವಲ್ಲಿ ಈ ಕಾಲಘಟ್ಟದ ಸಾಹಿತ್ಯಗಳು ಪ್ರೇರೇಪಿಸಿದವು. ಬಂಕಿಮ ಚಂದ್ರ ಚಟರ್ಜಿ, ರವೀಂದ್ರ ನಾಥ ಟ್ಯಾಗೋರ್, ಸಾವರ್ಕರ್ ಅವರ ಕಮಲಾ ಸೇರಿದಂತೆ ಹತ್ತು ಹಲವು ಕೃತಿಗಳು ದೇಶ ಭಕ್ತಿಯನ್ನು ಮತ್ತಷ್ಟು ಜಾಗೃತಗೊಳಿಸಿದವು. ಸಾತಂತ್ಯಾನಂತರ ಎಡ ಪಂಥೀಯ ಹಾಗೂ ಬಲ ಪಂಥೀಯ ಸಾಹಿತ್ಯಗಳು ಪ್ರಾರಂಭವಾದವು ಎಂದು ಮಾತನಾಡಿದರು.
ಹೊಸ ಪೀಳಿಗೆಯ ಭಾಷೆ ಕುರಿತು ಮಾತನಾಡಿದ ಸೂಲಿಬೆಲೆ, Gen Zಗಳ ಶಾರ್ಟ್ ಕೋಡ್ ಭಾಷೆಗಳು ಸಾಹಿತ್ಯ ಭಾಷೆಯನ್ನು ಮರೆಸುತ್ತಿವೆ. ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿನ ಹಿಡಿತ ಮೇಲಿನ ಹಿಡಿತ ಇಂದಿನ ಯುವ ಜನತೆಗೆ ಕಡಿಮೆಯಾಗುತ್ತಿದೆ. ಪುಸ್ತಕಗಳನ್ನು ಓದಿ ಜ್ಞಾನ ಬೆಳಿಸಿಕೊಳ್ಳುವ ಬದಲು ಜನರು ಪ್ರತಿಯೊಂದು ವಿಷಯಕ್ಕೂ ಕೃತಕ ಬುದ್ಧಿ ಮತ್ತೆ ಹಾಗೂ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ನೈತಿಕತೆ ಹಾಗೂ ಮೌಲ್ಯಗಳು ಕಡಿಮೆಯಾಗಿ ಯುವಜನರು ದಾರಿ ತಪ್ಪುತ್ತಿರುವುದು ವಿಷಾದನೀಯ.
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಮಾತನಾಡಿದ ಅವರು, ಕೆಲ ವಿದ್ಯಾರ್ಥಿಗಳು ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಪಾಶ್ಚಾತ್ಯ ಸಂಸ್ಕೃತಿ ನಮ್ಮ ಮಕ್ಕಳ ಮೇಲೆ ಎಷ್ಟು ಪ್ರಭಾವ ಬೀರುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಹೊಸ ಪೀಳಿಗೆಯನ್ನು ಸಾಹಿತ್ಯದ ಕಡೆಗೆ ಮುಖ ಮಾಡಿಸುವಂತೆ ಮಾಡುವ ಜವಾಬ್ದಾರಿ ಹಿರಿಯರ ಮೇಲಿದೆ. ಒಂದು ಒಳ್ಳೆ ಪುಸ್ತಕ ಒಳ್ಳೆ ಮಾತು, ಸಂಸ್ಕಾರ ಹಾಗೂ ಜ್ಞಾನವನ್ನು ನೀಡುತ್ತದೆ. ಭಾರತದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸೂಲಿಬೆಲೆ ಹೇಳಿದರು.